ರಸ್ತೆಯ ದುಸ್ಥಿತಿ ತೆರೆದಿಡುವ ಓದುಗರು ಕಳುಹಿಸಿದ ಚಿತ್ರಗಳು
ಬೆಂಗಳೂರು, ಅಕ್ಟೋಬರ್ 04 : ಬೆಂಗಳೂರಿನ ರಸ್ತೆ ಗುಂಡಿಗಳು ಬಾಯ್ತೆರೆದು ನಿಂತಿದ್ದು ವಾಹನ ಸವಾರರಿಗೆ ಸಂಕಷ್ಟ ತಂದಿವೆ. ನಮ್ಮ ಓದುಗರು ಕಳುಹಿಸಿದ ಕೆಲವು ಬಡಾವಣೆಗಳಲ್ಲಿನ ರಸ್ತೆಯ ದುಸ್ಥಿತಿಯ ಚಿತ್ರಗಳು ಇಲ್ಲಿವೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ನಗರದ ರಸ್ತೆಗಳು ಹದಗೆಟ್ಟಿವೆ. ರಸ್ತೆ ಗುಂಡಿಗಳು ಪ್ರತಿದಿನ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಒನ್ ಇಂಡಿಯಾ ಕನ್ನಡ ನಿಮ್ಮ ಬಡಾವಣೆಗಳಲ್ಲಿ ಗುಂಡಿಗಳು ಬಾಯ್ತೆರೆದು ನಿಂತಿದ್ದರೆ ಫೋಟೋ, ವಿಡಿಯೋ ಕಳಿಸಲು ಓದುಗರಿಗೆ ಆಹ್ವಾನ ನೀಡಿತ್ತು.
ನಿಮ್ಮ ಬಡಾವಣೆಯಲ್ಲಿ ರಸ್ತೆ ಗುಂಡಿ ಬಾಯ್ತೆರೆದು ನಿಂತಿದ್ದರೆ ಫೋಟೋ ಕಳಿಸಿ
ಬೆಂಗಳೂರು ನಗರದ ರಸ್ತೆಗಳಲ್ಲಿ ಸುಮಾರು 15 ಸಾವಿರ ಗುಂಡಿಗಳಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ. ಹದಿನೈದು ದಿನಗಳಲ್ಲಿ ರಸ್ತೆಗಳ ಗುಂಡಿ ಮುಚ್ಚಬೇಕು ಎಂದು ಮೇಯರ್ ಸಂಪತ್ ರಾಜ್ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ವಿವಿಧ ಬಡಾವಣೆಗಳ ರಸ್ತೆಗಳ ದುಸ್ಥಿತಿಯ ಚಿತ್ರಗಳನ್ನು ಹಲವು ಓದುಗರು ಕಳುಹಿಸಿದ್ದಾರೆ. ಮಂಗಳೂರು, ಚನ್ನಪಟ್ಟಣ, ತುಮಕೂರು ಮುಂತಾದ ಕಡೆಗಳಿಂದಲೂ ಪ್ರತಿಕ್ರಿಯೆಗಳು ಬಂದಿವೆ. ಓದುಗಳು ಕಳುಹಿಸಿದ ಚಿತ್ರಗಳು ಇಲ್ಲಿವೆ ನೋಡಿ...
ಬೆಳ್ಳಂದೂರು
ಬೆಳ್ಳಂದೂರಿನಿಂದ ಈ ಚಿತ್ರವನ್ನು ಕಳುಹಿಸಲಾಗಿದೆ. ಹರಳೂರು ಸಮೀಪದ ವಿಬ್ ಗಯಾರ್ ಹೈಸ್ಕೂಲ್ ಬಳಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಶಾಲಾ ಮತ್ತು ಇತರ ವಾಹನಗಳು ಸಂಚಾರ ನಡೆಸಲು ಇಲ್ಲಿ ಹರಸಾಹಸ ಪಡಬೇಕಿದೆ. ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನ ಹರಿಸಲಿ ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.
ಮಳೆ ಬಂದರೆ ರಸ್ತೆ ಮುಳುಗುತ್ತದೆ
ಹೊಯ್ಸಳ ನಗರದ ರಸ್ತೆಯ ಸ್ಥಿತಿ ಇದು. ಮಳೆ ಬಂದರೆ ನಗರದ 8ನೇ ಮುಖ್ಯರಸ್ತೆ ಜಲಾವೃತವಾಗುತ್ತದೆ.
ನೀರಿನಲ್ಲಿ ಮುಳುಗುವ ಅಂಡರ್ ಪಾಸ್ ರಸ್ತೆ
ಕಸ್ತೂರಿ ನಗರದ ರೈಲ್ವೆ ಅಂಡರ್ ಪಾಸ್ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಮಳೆ ಬಂದರೆ ಚರಂಡಿಯ ನೀರು ರಸ್ತೆ ಮೇಲೆ ಹರಿಯುತ್ತದೆ. ವಾಹನ ಸವಾರರು ನಿತ್ಯ ಇಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಬೊಮ್ಮಸಂದ್ರ
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯ ಸ್ಥಿತಿ ಇದು. ಎಸ್ಬಿಐ ಬ್ಯಾಂಕ್ ಮುಂಭಾಗದ ರಸ್ತೆಯಲ್ಲಿ ವಾಹನ ಸವಾರರು ಇರಲಿ, ಕೆಸರು ತುಂಬಿದ ರಸ್ತೆಯಲ್ಲಿ ಜನರು ಸಂಚಾರ ನಡೆಸುವುದೇ ಕಷ್ಟವಾಗಿದೆ.
ಕೆಸರು ಮಯವಾದ ಕುವೆಂಪು ನಗರದ ರಸ್ತೆ
ಕುವೆಂಪು ನಗರದ 11ನೇ ಕ್ರಾಸ್ ರಸ್ತೆ ಸಂಪೂರ್ಣವಾಗಿ ಕೆಸರಿನಿಂದ ಆವೃತವಾಗಿದೆ.
ಶಿರಾ ತಾಲೂಕಿನ ರಸ್ತೆ
ಇದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಕೋಟೆಯ ರಸ್ತೆ. ಮಳೆಯ ನೀರು ನಿಂತು ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.