ಏಪ್ರಿಲ್ 23ಕ್ಕೆ ನಗರ ಕೇಂದ್ರ ಗ್ರಂಥಾಲಯದ ನವೀಕೃತ ಕಟ್ಡಡ ಉದ್ಫಾಟನೆ
ಬೆಂಗಳೂರು, ಏಪ್ರಿಲ್ 22: ಇಲ್ಲಿನ ಕಬ್ಬನ್ ಪಾರ್ಕ್ ನಲ್ಲಿರುವ ನಗರ ಕೇಂದ್ರದ ಗ್ರಂಥಾಲಯದ ನವೀಕೃತ ನೂತನ ಕಟ್ಟಡ ಉದ್ಫಾಟನೆಯು ಏಪ್ರಿಲ್ 23ರ ಭಾನುವಾರ ಬೆಳಗ್ಗೆ 11 ಗಂಟೆಗೆ ನೆರವೇರಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಉದ್ಫಾಟನೆ ನೆರವೇರಿಸಲಿದ್ದಾರೆ. ರಾಜ್ಯ ಕೇಂದ್ರ ಗ್ರಂಥಾಲಯವು ಸರ್ ಶೇಷಾದ್ರಿ ಅಯ್ಯರ್ ಭವನದಲ್ಲಿದೆ.
ಈ ಭವನವು ಸುಂಕಬ್ಬನ್ ಉದ್ಯಾನದಲ್ಲಿದ್ದು, ಇದು ಪ್ರಾಮುಖ್ಯತೆ ಪಡೆದ ಭವನವಾಗಿದೆ. ಈ ಗ್ರಂಥಾಲಯ ದಿವಾನ್ ಸರ್ ಶೇಷಾದ್ರಿ ಅಯ್ಯರ್ ಅವರ ನೆನಪಿನಲ್ಲಿ ನಿರ್ಮಾಣವಾಗಿದೆ. 1914ರಲ್ಲಿ ಸ್ಮಾರಕ ಸಮಿತಿಯು ಸ್ಮಾರಕವು ಸಾರ್ವಜನಿಕ ಕಟ್ಟಡವಾಗಿ ಹಾಗೂ ಇಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲು ತೀರ್ಮಾನಿಸಿತು.
ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಅವರು ಈ ಭವನವನ್ನು ರಾಜ್ಯ ಸಾರ್ವಜನಿಕ ಗ್ರಂಥಾಲಯಕ್ಕೆ ಹಸ್ತಾಂತರಿಸಿದ ನಂತರ ಇಲ್ಲಿ ಸಾರ್ವಜನಿಕ ಗ್ರಂಥಾಲಯ ಪ್ರಾರಂಭವಾಯಿತು. ಈ ಗ್ರಂಥಾಲಯದ ಆಡಳಿತವನ್ನು ಮೈಸೂರು ನೋಂದಣಿ ಕಾಯಿದೆ ಅಡಿಯಲ್ಲಿ ಬರುವ ಆಡಳಿತ ಸಮಿತಿಯು ನಡೆಸುತ್ತಿತ್ತು. ಶಿಕ್ಷಣ ಇಲಾಖೆಯ ಮಹಾನಿರೀಕ್ಷರಾಗಿದ್ದ ಕೃಷ್ಣರಾವ್ ಇದರ ಮೊದಲ ಅಧ್ಯಕ್ಷರಾಗಿದ್ದರು.
ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯಿದೆ 1965 ರ ಅಡಿಯಲ್ಲಿ ಕರ್ನಾಟಕ ಸರ್ಕಾರವು ಈ ಗ್ರಂಥಾಲಯವನ್ನು 1966ರಲ್ಲಿ ತನ್ನ ಸುಪರ್ದಿಗೆ ಪಡೆದ ನಂತರ ರಾಜ್ಯ ಕೇಂದ್ರ ಗ್ರಂಥಾಲಯವೆಂದು ಮರು ನಾಮಕರಣ ಮಾಡಲಾಯಿತು. 1986ರಿಂದ ಪರಾಮರ್ಶನ ಗ್ರಂಥಾಲಯವಾಗಿ ಮಾರ್ಪಾಡಾಗಿದೆ. ಭಾನುವಾರದ ಸಮಾರಂಭದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಂ. ಕೃಷ್ಣಪ್ಪ, ಕೃಷ್ಣ ಬೈರೇಗೌಡ ಮೇಯರ್ ಜಿ.ಪದ್ಮಾವತಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.