ಕರ್ಕಶ ಹಾರ್ನಿಗೆ ಸಾವಿರ ದಂಡ, ಭಲೇ ಬೆಂಗಳೂರು ಪೊಲೀಸ್!
ಬೆಂಗಳೂರು, ಡಿಸೆಂಬರ್, 07: ಬೆಂಗಳೂರು ಟ್ರಾಫಿಕ್ ಪೊಲೀಸರ ಮೇಲೆ ನಾಗರಿಕರೊಬ್ಬರು ಫೇಸ್ ಬುಕ್ ಬಳಸಿಕೊಂಡು ಬಹಿರಂಗ ದೂರು ದಾಖಲು ಮಾಡಿದ್ದಾರೆ. ಬೆಂಗಳೂರು ಪೊಲೀಸರಿಗೂ ಹ್ಯಾಂಡಲ್ ಹಾಕಿದ್ದು ವಿಷಯವನ್ನು ನೇರವಾಗಿ ಕಮಿಷನರ್ ಗಮನಕ್ಕೆ ತಂದಿದ್ದಾರೆ.
ಅಮೃತ್ ಬಾಯರಿ ಎಂಬುವರು ಬೆಂಗಳೂರು ಪೊಲೀಸರ ಮೇಲೆ ದೂರು ಸಲ್ಲಿಸಿದ್ದಾರೆ. ನನಗೆ ಈ ಬಗ್ಗೆ ಸರಿಯಾದ ಪರಿಹಾರ ಕಲ್ಪಿಸಿಕೊಡದಿದ್ದಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಕೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಡಿಸೆಂಬರ್ 5 ರಂದು ರಾತ್ರಿ ನಡೆದ ಘಟನಾವಳಿಯನ್ನು ಅವರ ಮಾತುಗಳಲ್ಲೆ ಕೇಳೋಣ ಬನ್ನಿ...[ಮಾರತ್ ಹಳ್ಳಿ ಟು ವೈಟ್ ಫೀಲ್ಡ್ = 7 ಕಿಮೀ = 2 ಗಂಟೆ!?]
ನಾನು ಡಿಸೆಂಬರ್ 5 ರಂದು ರಾತ್ರಿ ಬನಶಂಕರಿಯಿಂದ ರಾಜಾಜಿನಗರಕ್ಕೆ ತೆರಳುತ್ತಿದ್ದೆ. ಗುಡ್ ಶೆಡ್ ರಸ್ತೆಯಲ್ಲಿ ತೆರಳಿ ಮಾಗಡಿ ರಸ್ತೆ ಕಡೆ ತೆರಳಲು ಎಡ ತಿರುವು ಪಡೆದುಕೊಂಡೆ.
ಆದರೆ ಪೊಲೀಸ್ ಅಧಿಕಾರಿಗಳು ನನಗೆ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರು. ನಾನು ಅವರು ಹೇಳಿದಂತೆ ವಾಹನ ನಿಲ್ಲಿಸಿದೆ. ಕಾಗದ ಪತ್ರಗಳನ್ನು ನೀಡಲು ಕೇಳಿದರು. ಸರ್ಕಾರದ ಪ್ರಕಾರ ಮಾನ್ಯ ಮಾಡಿರುವ ಅಗತ್ಯ ದಾಖಲೆಗಳನ್ನೆಲ್ಲ ನೀಡಿದೆ.
ಆದರೆ ಕೀರಲಾಗಿ ಹಾರ್ನ್ ಮಾಡಿದ್ದೇನೆ ಎಂದು ದಂಡ ವಿಧಿಸಿದ್ದರು. ನಾನು ದಂಡವನ್ನು ನೀಡಲು ಸಿದ್ಧನಿದ್ದೆ. ಆದರೆ ದಂಡದ ಮೊತ್ತ ನೋಡಿ ಒಮ್ಮೆ ದಂಗಾದೆ. ಹಾರ್ನ್ ಮಾಡಿದ್ದಕ್ಕೆ 1100 ರು. ದಂಡ ವಿಧಿಸಿದ್ದರು!
ನೀವು ದಂಡ ಕಟ್ಟಿದರೆ ವಾಹನ ತೆಗೆದುಕೊಂಡು ಹೋಗಬಹುದು. ಇಲ್ಲವಾದರೆ ಸೋಮವಾರ ಸ್ಟೇಶನ್ ಗೆ ಬಂದು ಬಿಡಿಸಿಕೊಂಡು ಹೋಗಬೇಕಾಗುತ್ತದೆ ಎಂದು ತಿಳಿಸಿದರು. ನಾನು ಹತ್ತಿರದ ಎಟಿಎಂ ನಿಂದ ಹಣ ಡ್ರಾ ಮಾಡಿಕೊಂಡು ಬಂದು ನೀಡಿದೆ, ನನ್ನನ್ನು ಸುಮಾರು ಒಂದು ಗಂಟೆ ಕಾಲ ಕಾಯಿಸಿದ್ದರು.[ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಬಂತು ಅಪ್ಲಿಕೇಶನ್]
ನಾನು ದಂಡ ಕಟ್ಟಿದ್ದರ ಬಗ್ಗೆ ರಸೀದಿ ಕೇಳಿದೆ. ಆದರೆ ರಸೀದಿ ಕೊಡಲು ಸಾಧ್ಯವಿಲ್ಲ ಎಂಬ ಉತ್ತರ ನೀಡಿದರು. ಅಂತೂ ಇಂತೂ ಒಂದು ರಸೀದಿ ನೀಡಿದರು. ಸಾಕಪ್ಪಾ ಎಂದುಕೊಂಡು ಮನೆಗೆ ಬಂದು ನೋಡಿದರೆ 100 ರು. ದಂಡ ಕಟ್ಟಿಕೊಂಡ ರಸೀದಿ ನೀಡಿದ್ದರು.
ಹಾಗಾದರೆ ನನ್ನ ಬಳಿ ತೆಗೆದುಕೊಂಡಿದ್ದು ಸಾವಿರ ರು., ರಸೀದಿ ನೀಡಿದ್ದು 100 ರು. ಗೆ ಉಳಿದ ಹಣ ಏನು ಮಾಡಿದರು? ಚಿಕ್ಕಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು ಬೃಹತ್ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ನಾನು ಕೇಳಿಕೊಳ್ಳುವುದು ಇಷ್ಟೇ,,, ನನ್ನಿಂದ ಕಟ್ಟಿಸಿಕೊಂಡ ಹೆಚ್ಚುವರಿ ಮೊತ್ತವನ್ನು ಪೊಲೀಸರು ಹಿಂದಕ್ಕೆ ನೀಡಬೇಕು. ಇಲ್ಲವಾದಲ್ಲಿ ನಾನು ಲೋಕಾಯುಕ್ತಕ್ಕೆ ತೆರಳುತ್ತೇನೆ.
ಇವರ ಫೇಸ್ ಬುಕ್ ಸ್ಟೇಟಸ್ ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ಈ ಬಗ್ಗೆ ಸಕಲ ಮಾಹಿತಿ ಕಲೆಹಾಕಿ ತಪ್ಪಿತಸ್ಥರಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.