ಓದುಗರ ದಾಹ ತಣಿಸಲು ಬಂದಿದೆ ಬೆಂಗಳೂರು ಪುಸ್ತಕೋತ್ಸವ 2018
ಬೆಂಗಳೂರು, ಅಕ್ಟೋಬರ್ 13 : ನಾಡಿನ ಪುಸ್ತಕ ಪ್ರಿಯರು ಕಾತರದಿಂದ ಕಾಯುತ್ತಿರುವ ಮಹಾನ್ ಪುಸ್ತಕ ಮೇಳ 'ಬೆಂಗಳೂರು ಪುಸ್ತಕೋತ್ಸ'ದ ಆರಂಭಕ್ಕೆ ಅರಮನೆ ಮೈದಾನದ ತ್ರಿಪುರವಾಸಿನಿ ಸಜ್ಜುಗೊಂಡಿದೆ. ಅಕ್ಟೋಬರ್ 15ರಿಂದ 21ರವರೆಗೆ ನಡೆಯಲಿದ್ದು, 10 ಲಕ್ಷಕ್ಕೂ ಅಧಿಕ ಪುಸ್ತಕಗಳ ಪ್ರದರ್ಶನ, ಮಾರಾಟ ಇಲ್ಲಿ ನಡೆಯಲಿದೆ.
ಮಕ್ಕಳಿಗೆ ಓದಿನ ಕಿಚ್ಚು ಹಚ್ಚುತ್ತಿರುವ ಪೊಲೀಸಮ್ಮನ ಕಥೆ ಓದಿ!
ಬೆಂಗಳೂರು ಬುಕ್ ಸೆಲ್ಲರ್ಸ್ ಆಂಡ್ ಪಬ್ಲಿಷರ್ಸ್ ಅಸೋಸಿಯೇಷನ್ ಮತ್ತು ಇಂಡಿಯಾ ಕಾಮಿಕ್ಸ್ ಅವರ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಪುಸ್ತಕೋತ್ಸವದಲ್ಲಿ ಕೇವಲ ಪುಸ್ತಕಗಳ ಪ್ರದರ್ಶನ, ಮಾರಾಟವಷ್ಟೇ ಅಲ್ಲ, ಸಾಹಿತ್ಯೋತ್ಸವಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರೋತ್ಸವಗಳೂ ಸೇರಿಕೊಂಡಿವೆ.
ಬೆಂಗಳೂರು ಪುಸ್ತಕೋತ್ಸವದಲ್ಲಿ ಈ ಬಾರಿ 270ಕ್ಕೂ ಅಧಿಕ ಮಳಿಗೆಗಳಿದ್ದು, 10 ಲಕ್ಷಕ್ಕೂ ಅಧಿಕ ಪುಸ್ತಕಗಳ ಪ್ರದರ್ಶನ ಇಲ್ಲಿರುತ್ತದೆ. ಓದುವ ಹವ್ಯಾಸವನ್ನು ಉತ್ತೇಜಿಸುವುದು ಪುಸ್ತಕೋತ್ಸವದ ಪ್ರಮುಖ ಆಶಯವಾಗಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಸಂಸ್ಕೃತ, ಇಂಗ್ಲಿಷ್, ಹಿಂದಿ ಸೇರಿದಂತೆ ಪ್ರಮುಖ ಭಾಷೆಯ ಪುಸ್ತಕಗಳು ಓದುಗರನ್ನು ಕೈಬೀಸಿ ಕರೆಯಲಿದೆ.
ಎಚ್. ವಿಶ್ವನಾಥ್ ಸಾಹಿತ್ಯ ಪ್ರೀತಿಯ ಬಗ್ಗೆ ನಿಮಗೆಷ್ಟು ಗೊತ್ತು?
ಡಿಜಿಟಲ್ ತಂತ್ರಜ್ಞಾನ ಮೇರುಮುಖವಾಗಿ ಸಾಗುತ್ತಿರುವ ನಡುವೆಯೂ ಪುಸ್ತಕಗಳನ್ನು ಖರೀದಿಸುವ, ಓದುವವರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬರುತ್ತಿದ್ದು ಬೆಂಗಳೂರು ಪುಸ್ತಕೋತ್ಸವವು ಜನರ ಓದುವ ಹವ್ಯಾಸದ ಮೇಲೆ ಬೀರುತ್ತಾ ಬರುತ್ತಿರುವ ಸಕಾರಾತ್ಮಕ ಪರಿಣಾಮಗಳಿಗೆ ಸಾಕ್ಷಿಯಾಗಿದೆ.
ಕೇವಲ ಪುಸ್ತಕ ಪ್ರದರ್ಶನವನ್ನಷ್ಟೇ ಅಲ್ಲ, ಸಾಂಸ್ಕೃತಿಕ, ಲಲಿತಕಲಾ ಪ್ರದರ್ಶನವನ್ನೂ ಹಮ್ಮಿಕೊಂಡಿದ್ದು ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಹೀಗಾಗಿ ಈ ಬಾರಿಯ ಪುಸ್ತಕೋತ್ಸವ ದಸರಾ ಹಬ್ಬಕ್ಕೆ ವಿಶೇಷ ಕೊಡುಗೆಯಾಗಿ ಬಂದಿದೆ' ಎಂದು ಹೇಳುತ್ತಾರೆ ಬೆಂಗಳೂರು ಬುಕ್ಸ್ ಆಂಡ್ ಪಬ್ಲಿಷರ್ಸ್ ಅಸೋಸಿಯೇ?ನ್ನ ಅಧ್ಯಕ್ಷರೂ ಆಗಿರುವ ಎ.ಎನ್.ರಾಮಚಂದ್ರ.
ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರ ಕನ್ನಡ ಪುಸ್ತಕಗಳು ದೊರೆಯಲಿದೆ
ಈ ಬಾರಿ ವಿಶೇಷವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ನ್ಯಾಷನಲ್ ಬುಕ್ ಟ್ರಸ್ಟ್ ಕೂಡ ಕೈ ಜೋಡಿಸಿವೆ.
'ಕಳೆದ 12 ವರ್ಷಗಳ ಪುಸ್ತಕೋತ್ಸವದಿಂದ ಸಾಕಷ್ಟು ಅನುಭವವನ್ನು ನಾವು ಗಳಿಸಿಕೊಂಡಿದ್ದೇವೆ. ಕೆಲವು ಹಳೆಯ ಕೃತಿಗಳಿಗಾಗಿ ಜನರು ತಡಕಾಡುತ್ತಿರುತ್ತಾರೆ. ಅದು ದೊರೆತಾಗ ಅವರಿಗೆ ಆಗುವ ಆನಂದಕ್ಕೆ ಮಿತಿಯೇ ಇಲ್ಲ. ಒಂದು ಪುಸ್ತಕೋತ್ಸವದಲ್ಲಿ 1860ರಲ್ಲಿ ಪ್ರಕಟವಾದ ಕರ್ನಾಟಕ ಪರೀಕ್ಷಕ' ಎಂಬ ಪುಸ್ತಕ ದೊರೆತಿತ್ತು. ಇಂತಹ ಸಾಕಷ್ಟು ಅನುಭವಗಳನ್ನು ಪುಸ್ತಕೋತ್ಸವ ನೀಡುತ್ತದೆ ಎಂದು ಹೇಳುತ್ತಾರೆ ಬೆಂಗಳೂರು ಪುಸ್ತಕೋತ್ಸವದ ಕಾರ್ಯಕ್ರಮ ನಿರ್ದೇಶಕ ಬಿ.ಎಸ್. ರಘುರಾಂ.
ಪುಸ್ತಕೋತ್ಸವ ಅಪಾರ ಸಂಖ್ಯೆಯಲ್ಲಿ ಜನರನ್ನು ಸೆಳೆಯುವ ಒಂದು ಅದ್ಭುತ ಕಾರ್ಯಕ್ರಮ. ಪ್ರತಿ ವರ್ಷದಂತೆ ದಸರಾ ಹಬ್ಬದ ನಡುವೆಯೇ ಬೆಂಗಳೂರು ಪುಸ್ತಕೋತ್ಸವ ಬಂದುಬಿಟ್ಟಿದೆ. ಪುಸ್ತಕ ರೂಪದಲ್ಲಿ ಜ್ಞಾನದ ದಾಹವನ್ನಷ್ಟೇ ಅಲ್ಲದೆ, ಸಾಹಿತ್ಯೋತ್ಸವಗಳು, ಇಸ್ಕಾನ್ ಆಹಾರೋತ್ಸವದ ಸವಿಯನ್ನೂ ಜನತೆ ಪಡೆಯಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಬುಕ್ಸ್ ಆಂಡ್ ಪಬ್ಲಿಷರ್ಸ್ ಅಸೋಸಿಯೇಷನ್ನ ಅಧ್ಯಕ್ಷರೂ ಆಗಿರುವ ಎ.ಎನ್.ರಾಮಚಂದ್ರ, ಕಾರ್ಯದರ್ಶಿ ಹರೀಂದ್ರ ಎಸ್, ಕಾರ್ಯಕ್ರಮ ನಿರ್ದೇಶಕ ಬಿ.ಎಸ್. ರಘುರಾಂ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಉಪಸ್ಥಿತರಿದ್ದರು.
ಮುಖ್ಯಾಂಶಗಳು
* ಒಂದು ಸೂರು, ಜ್ಞಾನದ ಬಾಗಿಲು ನೂರಾರು.
* ಎಲ್ಲಾ ವಯೋಮಾನದವರ ಆಕಾಂಕ್ಷೆ ತಣಿಸುವ ಪುಸ್ತಕಗಳು.
* ತಾಳೆಗರಿಯಿಂದ ತೊಡಗಿ ಬಾಹ್ಯಾಕಾಶ ತಂತ್ರಜ್ಞಾನವದವರೆಗೆ ಎಲ್ಲ ಬಗೆಯ ಪುಸ್ತಕಗಳೂ ಲಭ್ಯ.
* ಜನಪ್ರಿಯ ಸಾಹಿತಿಗಳ ಪುಸ್ತಕಗಳ ಸುಗ್ಗಿ. ಅಂತಾರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪುಸ್ತಕಗಳ ಮಹಾಪೂರ.
* ಕನ್ನಡ ಪುಸ್ತಕಗಳ 65 ಮಳಿಗೆಗಳುಇತರ ಭಾಷಾ ಪುಸ್ತಕಗಳ 30 ಮಳಿಗೆಗಳು ಹಾಗೂ 170ಕ್ಕೂ ಹೆಚ್ಚು ಇಂಗ್ಲಿಷ್ ಪುಸ್ತಕ ಮಳಿಗೆಗಳು ಓದುಗರನ್ನು ಆಕರ್ಷಿಸಲಿದೆ.
* ಅತ್ಯಂತ ಹಳೆಯ ಕೃತಿಗಳು, ಪತ್ರಿಕೆ, ನಿಯತಕಾಲಿಕಗಳೂ ಪ್ರದರ್ಶನದಲ್ಲಿ ಸಿಗಬಹುದು. ಇಂತ ಅಮೂಲ್ಯ ವಸ್ತುಗಳನ್ನು ಪ್ರದರ್ಶನ ಮಾಡುವುದಿದ್ದರೂ ಅದಕ್ಕೂ ಅವಕಾಶ ನೀಡಲಾಗುತ್ತದೆ.
* ಕನ್ನಡದ ಹೆಸರಾಂತ ನಟ ರಮೇಶ್ ಅರವಿಂದ್ ಪ್ರತಿ ಬಾರಿಯಂತೆ ಈ ಬಾರಿಯೂ ಪುಸ್ತಕೋತ್ಸವದ ರಾಯಭಾರಿಯಾಗಿ ಪುಸ್ತಕೋತ್ಸವದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.