ಬೆಂಗಳೂರು ಬಾಂಬ್ ಸ್ಫೋಟ: ಕೇರಳದ ಕಾಡಿನಲ್ಲಿ ಅವಿತಿದ್ದ ಸಲೀಂ ಬಂಧನ
ಬೆಂಗಳೂರು, ಅಕ್ಟೋಬರ್ 11: ಹತ್ತು ವರ್ಷಗಳ ಹಿಂದೆ (2008) ಬೆಂಗಳೂರಿನ ಮಡಿವಾಳದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಲೀಮ್ನನ್ನು ಕೇಂದ್ರ ಅಪರಾಧ ದಳದ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ.
ಕೇರಳದ ಪಿಣರಾಯಿ ಗ್ರಾಮದ ಕಾಡೊಂದರಲ್ಲಿ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ತಲೆಮರೆಸಿಕೊಂಡಿದ್ದ ಸಲೀಂನನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.
ಸಿಸಿಬಿ ಎಸಿಪಿ ಸುಬ್ರಮಣಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಪ್ರವೀಣ್, ಸತೀಶ್ ಕುಮಾರ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ಬೆಂಗಳೂರು ಸರಣಿ ಸ್ಫೋಟ ಎಲ್ಲಿ, ಯಾವಾಗ?
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೂಡ ಸಲೀಂಗಾಗಿ ಹುಡುಕಾಟ ನಡೆಸಿತ್ತು. ಕೇರಳದಲ್ಲಿಯೂ ಈತನ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ, ಇನ್ನೂ ಅನೇಕ ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಈತ ಭಾಗಿಯಾಗಿರುವ ಶಂಕೆ ಇದೆ.
2008ರಲ್ಲಿ ಘಟನೆ
2008ರ ಜುಲೈ 25ರಂದು ಮಡಿವಾಳ ಸೇರಿದಂತೆ ಒಟ್ಟು ಒಂಬತ್ತು ಕಡೆ ಬಾಂಬ್ ಸ್ಫೋಟಗಳು ನಡೆದಿದ್ದವು. ಘಟನೆಯಲ್ಲಿ ಒಬ್ಬರು ಸಾವಿಗೀಡಾಗಿದ್ದರೆ, 20 ಮಂದಿ ಗಾಯಗೊಂಡಿದ್ದರು. ಅದೇ ವರ್ಷ ಜೈಪುರ ಮತ್ತು ಅಹಮದಾಬಾದ್ಗಳಲ್ಲಿಯೂ ಸರಣಿ ಸ್ಫೋಟ ಸಂಭವಿಸಿದ್ದವು. ಈ ಸ್ಫೋಟದ ಪ್ರಮುಖ ಸಂಚುಕೋರ ಈತನೇ ಎಂದು ಹೇಳಲಾಗಿದೆ.
ಬೆಂಗಳೂರು ಸ್ಫೋಟ : ಮದನಿ ವಿರುದ್ಧ ಉಲ್ಟಾ ಹೊಡೆದ ಸಾಕ್ಷಿಗಳು
ಮುಖ್ಯಮಂತ್ರಿಯ ಊರು
ಪೊಲೀಸರ ಕಣ್ತಪ್ಪಿಸಿದ್ದ ಸಲೀಂ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಊರಿನಲ್ಲಿ ತಲೆಮರೆಸಿಕೊಂಡಿದ್ದ. ಕಣ್ಣೂರು ಜಿಲ್ಲೆಗೆ ಸೇರಿದ ಹಳ್ಳಿಯೊಂದರಲ್ಲಿ ಆತ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ನೆಲೆಸಿದ್ದ. ಎರಡು ದಿನ ಕಾಡಿನಲ್ಲಿ ಆತನ ಚಲನವಲನಗಳನ್ನು ಗಮನಿಸಿದ್ದ ಪೊಲೀಸರು, ಬುಧವಾರ ರಾತ್ರಿ 8.45ರ ವೇಳೆಗೆ ಹಳ್ಳಿಯ ಮನೆಯೊಂದರಲ್ಲಿದ್ದ ಸಲೀಂನನ್ನು ಸುತ್ತವರಿದು ಬಂಧಿಸಿದ್ದಾರೆ.
2000ರ ಚರ್ಚ್ ಬ್ಲಾಸ್ಟ್ ಆರೋಪಿ ಅಮೀರ್ ಅಲಿ ಬಂಧನ
ವಿಚಾರಣೆಗೆ ವಶಕ್ಕೆ ಕೋರಿಕೆ
ಬಂಧಿತ ಸಲೀಂನನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಆತನನ್ನು ಪೊಲೀಸರು ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಗುರುವಾರ ಹಾಜರುಪಡಿಸಲಿದ್ದಾರೆ. ಬೆಂಗಳೂರು ಬಾಂಬ್ ಸ್ಫೋಟ ಮಾತ್ರವಲ್ಲದೆ, ದೇಶದ ವಿವಿಧೆಡೆ ನಡೆದ ದಾಳಿಗಳ ಮಾಹಿತಿಗಳು ಆತನಿಗೆ ತಿಳಿದಿರುವ ಸಾಧ್ಯತೆ ಇರುವುದರಿಂದ ಹೆಚ್ಚಿನ ವಿಚಾರಣೆ ನಡೆಸಲು ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ.
ಮಲ್ಲೇಶ್ವರಂ ಸ್ಫೋಟ : 2 ಸಾವಿರ ರೂ.ಗೆ ಸ್ಫೋಟಕ ಮಾರಾಟ
ಪ್ರಕರಣದಲ್ಲಿ ಪ್ರಗತಿ
ಬೆಂಗಳೂರು, ಅಹಮದಾಬಾದ್ ಮತ್ತು ಜೈಪುರದಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ಎಂಬ ಆರೋಪ ಹೊತ್ತಿರುವ ಕೇರಳದ ಅಬ್ದುಲ್ ನಾಸಿರ್ ಮದನಿಯನ್ನು ಬಂಧಿಸಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ಘಟನೆಗಳಲ್ಲಿ ನಿಷೇಧಿತ ಸಿಮಿ ಹಾಗೂ ಲಷ್ಕರ್ ಸಂಘಟನೆಯ ಕೈವಾಡ ಇದೆ ಎಂಬ ಶಂಕೆ ಇದ್ದು, ಲಷ್ಕರ್ ಕಮಾಂಡರ್ ಟಿ. ನಸೀರ್ ಪೊಲೀಸರ ವಶದಲ್ಲಿದ್ದಾನೆ.