ಮತ್ತೆ ಬೆಂಕಿ ಉಗುಳುತ್ತಿದೆ ಬೆಳ್ಳಂದೂರು ಕೆರೆ, ಆತಂಕದಲ್ಲಿ ಜನ
ಬೆಂಗಳೂರು, ಜನವರಿ 19: ಅತ್ಯಂತ ಹೆಚ್ಚು ಮಲಿನಗೊಂಡಿರುವ ನಗರದ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗೆಯಿಂದ ಉರಿಯುತ್ತಿದ್ದ ಬೆಂಕಿ ಒಂದು ಹಂತದಲ್ಲಿ ತಣ್ಣಗಾಗಿತ್ತಾದರೂ ಸಂಜೆ ವೇಳೆಗೆ ಮತ್ತೆ ಉರಿಯಲು ಆರಂಭಿಸಿದ್ದು ಸುತ್ತ ಮುತ್ತಲಿನ ನೂರಾರು ಜನರನ್ನು ಆತಂಕದಲ್ಲಿ ಕೆಡವಿದೆ.
ಇಲ್ಲಿನ ಕೆರೆಯ ಮಧ್ಯಭಾಗದ ಜೌಗು ಪ್ರದೇಶದಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಸಂಪತ್ ರಾಜ್ ಕೆರೆ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಐಐಎಸ್ಸಿ ಸಹಾಯ ಪಡೆದುಕೊಳ್ಳುತ್ತಿದ್ದೇವೆ ಎಂದು ಎಂದಿನ ಹಳೇ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಇನ್ನು ಕರೆಗೆ ಬೆಂಕಿ ಬಿದ್ದಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಕ್ಷಣಾ ಇಲಾಖೆ ನಡುವೆ ಕೆಸರೆರೆಚಾಟ ಆರಂಭವಾಗಿದೆ.
ರಕ್ಷಣ ಇಲಾಖೆ ಜಾಗದಿಂದ ಬೆಂಕಿ ಹತ್ತಿಕೊಂಡು ಇಡೀ ಕೆರೆಗೆ ಹರಡಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಆರೋಪಿಸಿದ್ದಾರೆ.
ಆದರೆ ಇದು ನಮ್ಮ ಜಾಗದಿಂದ ಹುಟ್ಟಿಕೊಂಡಿದ್ದಲ್ಲ, ಕರೆಯಿಂದ ಬಂದಿದ್ದು ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ವಾದಿಸಿದ್ದಾರೆ.
ಈ ಹಿಂದೆ 2015, 16ರಲ್ಲೂ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೇ ರೀತಿ 2017 ಮೇನಲ್ಲಿ ವರ್ತೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ಕರೆಯ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ವಿಪರ್ಯಾಸ.