ಬಿಬಿಎಂಪಿ ಚುನಾವಣೆ : ಕಾಂಗ್ರೆಸ್ ನಿಂದ ಮೇಯರ್ ಯಾರಾಗಬಹುದು?
ಬೆಂಗಳೂರು, ಸೆಪ್ಟೆಂಬರ್ 28: ಬಿಬಿಎಂಪಿಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗುವುದು ಪಕ್ಕಾ ಆಗಿದ್ದು, ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್ ಒಪ್ಪಿಕೊಂಡಿದೆ.
ಆ ಸ್ಥಾನಕ್ಕೆ ಅಭ್ಯರ್ಥಿಯನ್ನೂ ಆಯ್ಕೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ನಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಮೇಯರ್ ಸ್ಥಾನಕ್ಕೆ ಯಾರು ಎಂಬುದು ಆಖೈರಾಗಬೇಕಿದೆ.[ಗೌಡ್ರ ರಾಜಕೀಯಕ್ಕೆ ಮೇಲುಗೈ: ಬಿಬಿಎಂಪಿ 'ಗದ್ದುಗೆ' ಮಾತುಕತೆ ಅಂತಿಮ]
ಬಿಬಿಎಂಪಿಯಲ್ಲಿ ಒಟ್ಟು ಬಲಾಬಲ ಹೀಗಿದೆ. ಬಿಜೆಪಿ 125, ಕಾಂಗ್ರೆಸ್ 110, ಜೆಡಿಎಸ್ 23 ಹಾಗೂ ಪಕ್ಷೇತರರು 9. ಉಪಮೇಯರ್ ಸ್ಥಾನಕ್ಕೆ ರಾಧಾಕೃಷ್ಣ ನಗರದ ಎಂ.ಆನಂದ್ ಹೆಸರು ಅಂತಿಮವಾಗಿದೆ ಎಂದು ತಿಲಿದುಬಂದಿದ್ದು, ಬುಧವಾರ ಬೆಳಗ್ಗೆ 8.30ರ ನಂತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. 11ಕ್ಕೆ ನಾಮಪತ್ರ ಪರಿಶೀಲನೆ, ಅಗತ್ಯವಾದರೆ 11.30ಕ್ಕೆ ಚುನಾವಣೆ ನಡೆಯಲಿದೆ.
ಬಿಬಿಎಂಪಿಯಲ್ಲಿ 100 ಸ್ಥಾನ ಪಡೆಯುವ ಮೂಲಕ ದೊಡ್ಡ ಪಕ್ಷವಾಗಿರುವ ಬಿಜೆಪಿ ಕೂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದರಿಂದ ಚುನಾವಣೆ ನಡೆಯುವುದು ಬಹುತೇಕ ಖಾತ್ರಿಯಾಗಿದೆ. ಇನ್ನು ಕಾಂಗ್ರೆಸ್ ನಿಂದ ಜಿ.ಪದ್ಮಾವತಿ ಅವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡುವುದಕ್ಕೆ ಜೆಡಿಎಸ್ ನಿಂದ ಆಕ್ಷೇಪ ವ್ಯಕ್ತವಾಗಿದ್ದು, ಅವರ ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲವಿದೆ, ಆಕೆ ವಿರುದ್ಧ ಹಲವು ಆರೋಪಗಳಿವೆ ಎಂದು ಜೆಡಿಎಸ್ ನ ವಕ್ತಾರ ತಿಳಿಸಿದ್ದಾರೆ.[ಬಿಬಿಎಂಪಿ ಮೇಯರ್ ಚುನಾವಣೆ : ಅಂಕಿ-ಸಂಖ್ಯೆಗಳಲ್ಲಿ ಬಲಾಬಲ]
ಇನ್ನು ಜೆಡಿಎಸ್ ನ ಬಂಡಾಯ ಶಾಸಕರಾದ ಜಮೀರ್ ಅಹಮ್ಮದ್, ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಮೇಲ್ಮನೆ ಸದಸ್ಯ ಪುಟ್ಟಣ್ಣ ಅವರಿಗೆ ವಿಪ್ ಜಾರಿಗೊಳಿಸಲಾಗಿದೆ. ಬುಧವಾರ ಬೆಳಗ್ಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ವರಿಷ್ಠರು ಚರ್ಚೆ ನಡೆಸಿದ ಬಳಿಕವಷ್ಟೇ ಮೇಯರ್ ಆಯ್ಕೆ ಅಂತಿಮಗೊಳ್ಳಲಿದೆ.
ಬಿಬಿಎಂಪಿ ಚುನಾವಣೆಯ ಮತದಾನ ಪ್ರಕ್ರಿಯೆಯ ವಿಡಿಯೋ ಮಾಡಲಾಗುತ್ತದೆ. ಇದರ ಜತೆಗೆ ಸಿಸಿ ಟಿವಿ ಕೂಡ ಅಳವಡಿಸಲಾಗಿದೆ. ಪಾಸ್ ಇದ್ದವರನ್ನು ಮಾತ್ರ ಸಭಾಂಗಣದ ಒಳಗೆ ಬಿಡಲಾಗುತ್ತದೆ. ಭದ್ರತೆಗಾಗಿ ನೂರೈವತ್ತಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಾದೇಶಿಕ ಆಯುಕ್ತೆ ವಿ.ಜಯಂತಿ ಚುನಾವಣಾ ಪ್ರಕ್ರಿಯೆ ನಡೆಸಲಿದ್ದಾರೆ.