198 ವಾರ್ಡ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆಗೆ ಮುಂದಾದ ಬಿಬಿಎಂಪಿ
ಬೆಂಗಳೂರು, ಫೆಬ್ರವರಿ 23 : ಬಿಬಿಎಂಪಿಯ ಎಲ್ಲಾ 198 ವಾರ್ಡ್ ಕಚೇರಿಯಲ್ಲಿ ಶೀಘ್ರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಬಿಬಿಎಂಪಿ ನಿರ್ಧರಿಸಿದೆ.
ಕಾಂಗ್ರೆಸ್ ನಾಯಕ ಕೆ.ನಾರಾಯಣಸ್ವಾಮಿ ಅವರು ಬಿಬಿಎಂಪಿ ವಾರ್ಡ್ ಕಚೇರಿಗೆ ತೆರಳಿ ಕಚೇರಿಯನ್ನು ಸುಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದ ಮೇಲೆ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿದ್ದು ಎಲ್ಲಾ ವಾರ್ಡ್ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದೆ.
ವಾರ್ಡ್ ಕಚೇರಿಗೆ ಹೋಗುವ ಮತ್ತು ಬರುವವರ ಮೇಲೆ ಇದು ನಿಗಾ ಇಡಲಿದೆ. ಒಟ್ಟು 198 ವಾರ್ಡ್ ಗಳಲ್ಲಿಯೂ ಅಳವಡಿಸಲಾಗುತ್ತದೆ. ಸಿಸಿಟಿವಿ ಕ್ಯಾಮರಾಗಳು ಕ್ರಿಮಿನಲ್ ಗಳ ಮೇಲೆ ಒಂದು ಕಣ್ಣಿಟ್ಟಿರುತ್ತದೆ. ಕ್ಯಾಮೆರಾವು ಘಟನೆಯನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಬಿಬಿಎಂಪಿ ಮುಖ್ಯಕಚೇರಿಯಿಂದ ಎಲ್ಲ ಸಿಸಿಟಿವಿ ಕ್ಯಾಮರಾಗಳನ್ನು ವೀಕ್ಷಿಸಲಾಗುತ್ತದೆ. ಜತೆಗೆ ಆಯಾ ವಾರ್ಡ್ ನಲ್ಲಿರುವ ಪೊಲೀಸ್ ಠಾಣೆಯಿಂದಲೂ ಕೂಡ ಸಿಸಿಟಿವಿಯ ಫೂಟೇಜ್ ಗಳನ್ನು ಪೊಲೀಸರು ವೀಕ್ಷಿಸುತ್ತಿರುತ್ತಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ 20 ಕೋಟಿ ರೂ ವೆಚ್ಚದಲ್ಲಿ ಬಿಬಿಎಂಪಿಯು ತ್ಯಾಜ್ಯ ಸಂಗ್ರಹಣಾ ಸ್ಥಳಗಳಲ್ಲಿಯೂ ಒಟ್ಟು 3 ಸಾವಿರ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಚಿಂತನೆ ನಡೆಸಿದೆ.