ಕೆನರಾ ಬ್ಯಾಂಕಿಗೆ ಟೌನ್ ಹಾಲ್ ಅಡವಿಡಲು ಬಿಬಿಎಂಪಿ ಸಜ್ಜು?
ಬೆಂಗಳೂರು, ಜ 2: ಈ ಹಿಂದೆ ಸಾಲದ ಹೊರ ತಾಳಲಾರದೇ ನಗರದ ಕೇಂದ್ರ ಭಾಗದಲ್ಲಿರುವ ಯುಟಿಲಿಟಿ ಕಟ್ಟಡವನ್ನು ಅಡವಿಟ್ಟಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಈಗ ಜೆ ಸಿ ರಸ್ತೆಯಲ್ಲಿರುವ ಪುಟ್ಟಣ್ಣ ಚೆಟ್ಟಿ ಪುರಭವನವನ್ನು (ಟೌನ್ ಹಾಲ್) ಅಡಮಾನವಿಡಲು ಮುಂದಾಗಿದೆ ಎನ್ನಲಾಗುತ್ತಿದೆ.
ಕೇಂದ್ರ ಸರಕಾರದ ಅಧೀನದ ಕೆನರಾ ಬ್ಯಾಂಕಿನಲ್ಲಿ ಪಡೆದು ಕೊಂಡಿದ್ದ ಸಾಲ ಮತ್ತು ಅದರ ಬಡ್ಡಿಯನ್ನು ಹಿಂದಿರುಗಿಸಲಾಗದೇ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿದೆ. ಈ ಸಂಬಂಧ ಡಿಸೆಂಬರ್ 30ರಂದು ನಡೆದ ಪಾಲಿಕೆ ಸಭೆಯಲ್ಲಿ ಅಡಮಾನ ಸಂಬಂಧ ಟಿಪ್ಪಣಿ ಸಿದ್ದಪಡಿಸಲಾಗಿತ್ತು ಎಂದೂ ಮೂಲಗಳಿಂದ ತಿಳಿದುಬಂದಿದೆ.
ಬೆಂಗಳೂರು ನಗರದ ಮೂಲಭೂತ ಸೌಲಭ್ಯಕ್ಕಾಗಿ ಬಿಬಿಎಂಪಿ ಕೆನರಾ ಬ್ಯಾಂಕಿನಿಂದ 200 ಕೋಟಿ ರೂಪಾಯಿ ಓವರ್ ಡ್ರಾಫ್ಟ್ ಸೌಲಭ್ಯ ಪಡೆದು ಕೊಂಡಿತ್ತು. ಅದರಲ್ಲಿ ಬಾಕಿ ಸಂದಾಯವಾಗ ಬೇಕಾಗಿರುವ 155 ಕೋಟಿ ಮತ್ತು ಬಡ್ಡಿ ಸಮೇತ ಕೆನರಾ ಬ್ಯಾಂಕಿಗೆ ಪಾವತಿಸ ಬೇಕಾಗಿತ್ತು.
ಬ್ಯಾಂಕ್ ನಿಯಮದ ಪ್ರಕಾರ ನಿಗದಿತ ಸಮಯದಲ್ಲಿ ಸಾಲ ಮರುಪಾವತಿಸಲು ಬಿಬಿಎಂಪಿ ವಿಫಲವಾಗಿತ್ತು. ಟೌನ್ ಹಾಲ್ ಮತ್ತು ಅದರ ಪಾರ್ಕಿಂಗ್ ಪ್ರದೇಶವನ್ನು ಕೆನರಾ ಬ್ಯಾಂಕಿನಲ್ಲಿ ಅಡಮಾನವಿಟ್ಟರೆ ಬಡ್ಡಿ ಬಾಬ್ತು 45 ಲಕ್ಷ ರೂಪಾಯಿ ಮನ್ನಾ ಮಾಡಲಾಗುವುದು ಎಂದು ಬಿಬಿಎಂಪಿ ಜೊತೆ ಕೆನರಾ ಬ್ಯಾಂಕ್ ಪತ್ರ ವ್ಯವಹಾರ ನಡೆಸಿತ್ತು.
45 ಲಕ್ಷ ರೂಪಾಯಿ ಉಳಿಸಲು ನಗರದ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿರುವ ಟೌನ್ ಹಾಲ್ ಅನ್ನು ಅಡಮಾನವಿಡಲು ಬಿಬಿಎಂಪಿ ನಿರ್ಧರಿಸಿದ್ದು, ಸಿಎಂ ಕಚೇರಿಗೂ ಮಾಹಿತಿಯನ್ನು ರವಾನಿಸಲಾಗಿತ್ತು ಎಂದು ತಿಳಿದು ಬಂದಿದೆ.
ಆದರೆ, ಟೌನ್ ಹಾಲ್ ಅಡಮಾನವಿಡಲು ಸಿಎಂ ಅಸಮ್ಮತಿ ಸೂಚಿಸಿದ್ದಾರೆಂದು ವರದಿಯಾಗಿದ್ದು, ಟೌನ್ ಹಾಲ್ ಬದಲು ಬೇರೆ ಯಾವುದಾದರೂ ಕಟ್ಟಡವನ್ನು ಪರಿಶೀಲಿಸಿ ಅಡಮಾನವಿಡಿ ಎಂದು ಸಿಎಂ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.