ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ
ಬೆಂಗಳೂರು, ಆಗಸ್ಟ್, 08: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಬೆಂಗಳೂರಿನ ಮೂರು ಕಡೆ ನಡೆಯುತ್ತಿದೆ. ಇಲ್ಲಿ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿರುವುದು ಅರ್ಧ ಮನೆ ಕಳೆದುಕೊಂಡ ಮನೆ ಮಾಲೀಕ, ಕನಸಿನ ಮನೆ ಕಟ್ಟಿಕೊಂಡ ಗೃಹಿಣಿ, ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು.
ಈ ಮನೆ ಮಾಲೀಕ ಸರ್ಕಾರ ಮತ್ತು ಬಿಬಿಎಂಪಿಗೆ ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾನೆ. ಅದಕ್ಕೆ ಉತ್ತರ ಹೇಳುವವರು ಯಾರು ಎಂಬುದು ದೊಡ್ಡ ಪ್ರಶ್ನೆ. ತೆರವಿನಿಂದ ಸಂಕಷ್ಟಕ್ಕೆ ಒಳಗಾದವರು ಇಟ್ಟ ಪ್ರಶ್ನೆಗಳಲ್ಲಿ ಸತ್ಯ ಇಲ್ಲ ಎಂದು ಹೇಳುವ ಹಾಗಿಲ್ಲ.[ರಾಜಕಾಲುವೆ ಒತ್ತುವರಿ ತೆರವಿನಲ್ಲೂ ಪ್ರಭಾವದ ಒಳಸುಳಿ]
ತೆರವು ಕಾರ್ಯಾಚರಣೆ ಹೇಗಿದೆ?
ಹಾಗಾದರೆ ಜನರು ಮಾಡುತ್ತಿರುವ ಆರೋಪಗಳು ಏನು? ನಿಜಕ್ಕೂ ರಾಜಕಾಲುವೆ ಎಲ್ಲಿಗೆ ಬರಬೇಕಿತ್ತು? ಪ್ರಭಾವಿಗಳ ಕೈವಾಡ ಇದರ ಹಿಂದೆ ಇದೆಯೇ? ಎಲ್ಲ ಪ್ರಶ್ನೆಗಳು ನಮಗೆ ಎದುರಾಗುತ್ತವೆ. ಜನರು ಕೇಳುತ್ತಿರುವ ಪ್ರಶ್ನೆಗಳು ಮತ್ತು ಆರೋಪಗಳನ್ನು ನೀವು ಕೇಳಿಕೊಂಡು ಬನ್ನಿ..
ನೋಟಿಸ್ ಯಾಕೆ ನೀಡಲಿಲ್ಲ?
ಮನೆ ತೆರವು ಮಾಡಿ ಎಂದು ನೋಟಿಸ್ ನೀಡಬೇಕಿತ್ತು, ಕಾಲಾವಕಾಶವನ್ನು ನೀಡಬೇಕಾಗಿತ್ತು. ಆದರೆ ಏಕಾಏಕಿ ಪೊಲೀಸರೊಂದಿಗೆ, ಜೆಸಿಬಿಯೊಂದಿಗೆ ಬಂದು ಮನೆ ತೆರವು ಮಾಡಿ ಎಂದರೆ ಎಲ್ಲಿಗೆ ಹೋಗಬೇಕು?
ರಾಜಕಾಲುವೆ ಎಲ್ಲಿಂದ ಬಂತು?
ಬಿಬಿಎಂಪಿ ಅಧಿಕಾರಿಗಳು ಹಿಡಿದುಕೊಂಡು ಬಂದಿರುವ ನಕಾಶೆಯಲ್ಲಿ ರಾಜಕಾಲುವೆ ಇದೆ. ಆದರೆ ಈ ಜಾಗ ನಾವು ಕೊಳ್ಳುವಾಗ(2005 ರಲ್ಲಿ) ಸ್ಥಳೀಯ ಆಡಳಿತಕ್ಕೆ ಒಳಪಟ್ಟಿತ್ತು. ಆಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು?
ಮನೆ ಕಟ್ಟಬೇಕಿದ್ದರೆ ಗೊತ್ತಿರಲಿಲ್ಲವೇ?
ಮಹಾನಗರವೊಂದರಲ್ಲಿ ಮನೆ ಕಟ್ಟಬೇಕಿದ್ದರೆ ಎಷ್ಟು ದಾಖಲೆಗಳನ್ನು ನೀಡಬೇಕು ಎಂದು ಗೊತ್ತಿರುತ್ತದೆ ಅಲ್ಲವೇ? ಬಿಬಿಎಂಪಿಯೇ ನಮಗೆ ಮನೆ ಕಟ್ಟಲು ಅನುಮತಿ ನೀಡಿತ್ತು. ಅಲ್ಲದೇ ಬ್ಯಾಂಕ್ ನಲ್ಲಿ ಸಾಲ ಮಾಡುವಾಗಲೂ ದಾಖಲೆಗಳ ಪರಿಶೀಲನೆಯಾಗಿತ್ತು. ಈಗ ಇದು ಒತ್ತುವರಿಯಾಗುತ್ತದೆಯೇ?
ಪ್ರಾಪರ್ಟಿ ತೆರಿಗೆ ಪಾವತಿ ಮಾಡಿದ್ದೇವೆ
ನಾವು ನೀಡಿದ ಮನೆಗೆ ಸಂಬಂಧಿಸಿದ ಆಸ್ತಿ ತೆರಿಗೆಯನ್ನು ಬಿಬಿಎಂಪಿ ಮಾತಿಲ್ಲದೇ ಪಾವತಿ ಮಾಡಿಕೊಂಡಿದೆ. ಅದಕ್ಕೆ ಮರುಪಾವತಿಯನ್ನು ನೀಡಿದೆ. ಈಗ ಕಂದಾಯ ಇಲಾಖೆ ಹೇಳಿದೆ ಎಂದುಕೊಂಡು ಮನೆ ತೆರವಿಗೆ ಮುಂದಾಗಿರುವುದು ಸರಿಯೇ?
ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲಿ?
ನಾವು ಏನೇ ಪ್ರಶ್ನೆ ಮಾಡಿದರೂ ಕಂದಾಯ ಇಲಾಖೆ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಹಾಗಾದರೆ ಸ್ಥಳಕ್ಕೆ ಯಾಕೆ ಕಂದಾಯ ಇಲಾಖೆ ಅಧಿಕಾರಿಗಳು ಬಂದಿಲ್ಲ.
ಸಾಲ ಮಾಡಿದ್ದೇವೆ
ಸಾಲ ಮಾಡಿದ ಕಂತನ್ನು ಪ್ರತಿ ತಿಂಗಳು ಕಟ್ಟುತ್ತಿದ್ದೇವೆ. ಈಗ ಬಂದು ಲಕ್ಷಾಂತರ ರು. ವೆಚ್ಚ ಮಾಡಿ ಕಟ್ಟಿದ ಮನೆ ಒಡೆದು ಹಾಕುವುದು ಎಲ್ಲಿಯ ನ್ಯಾಯ?
ಬಿಲ್ಡರ್ ಗಳ ಕೈವಾಡವಿದೆ
ಕಾಲುವೆ ನಕ್ಷೆಯನ್ನು ಅವರಿಗೆ ಹೇಗೆ ಬೇಕೋ ಹಾಗೆ ತಿದ್ದಿಕೊಂಡಿದ್ದಾರೆ. ಇದರಲ್ಲಿ ಕೆಲ ದೊಡ್ಡ ಬಿಲ್ಡರ್ ಗಳ ಕೈವಾಡವಿದೆ. ಅವರಿಗೆ ಮುಂದೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ನಮ್ಮ ಮನೆ ಬಲಿ ಕೊಡಲಾಗುತ್ತಿದೆ.
ನಮ್ಮ ಬಳಿ ದಾಖಲೆ ಇದೆ
ನಮ್ಮ ಬಳಿ ಮನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಇವೆ. ಅದಕ್ಕೆ ಬಿಬಿಎಂಪಿಯೇ ದೃಢೀಕರಣವನ್ನು ನೀಡಿದೆ. ಹಾಗಾದರೆ ಹಿಂದೆ ಬಿಬಿಎಂಪಿ ನೀಡಿದ್ದ ಅನುಮತಿ ಇಂದು ಏನಾಯಿತು?