ಬಿಬಿಎಂಪಿ ನಾಲ್ಕು ಸಸ್ಯಕ್ಷೇತ್ರಗಳಲ್ಲಿ 5.69 ಲಕ್ಷ ಸಸಿ ಬೆಳೆಸಲು ಯೋಜನೆ
ಬೆಂಗಳೂರು, ಜನವರಿ 12 : ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚು ಸಸ್ಯಗಳನ್ನು ನೆಡಲು ಬಿಬಿಎಂಪಿ ಆಲೋಚಿಸಿದೆ. ಸಿಲಿಕಾನ್ ಸಿಟಿಯಲ್ಲಿ ಹಸರೀಕರಣ ಹೆಚ್ಚಿಸಲು ಬಿಬಿಎಂಪಿ ತನ್ನ ನಾಲ್ಕು ನರ್ಸರಿಗಳಲ್ಲಿ 5.69 ಲಕ್ಷ ಸಸಿ ಬೆಳೆಸಲು ಮುಂದಾಗಿದ್ದು 1.47 ಕೋಟಿ ರೂ ವ್ಯಯಿಸುತ್ತಿದೆ.
2017-18 ನೇ ಸಾಲಿನಲ್ಲಿ 10 ಲಕ್ಷ ಸಸಿ ನೆಡುವುದಾಗಿ ಘೋಷಿಸಿತ್ತು. ಅದಕ್ಕಾಗಿ ಸಾರ್ವಜನಿಕರ ನೆರವು ಪಡೆಯಲು ಗ್ರೀನ್ ಅಪ್ಲಿಕೇಷನ್ ಎಂಬ ಮೊಬೈಲ್ ಅಪ್ಲಿಕೇಷನ್ ಕೂಡ ಬಿಡುಗಡೆ ಮಾಡಿತ್ತು. ಆದರೆ 4 ಲಕ್ಷ ಸಸಿಗಳನ್ನು ನೆಡುವಷ್ಟರಲ್ಲಿ ಸುಸ್ತಾದ ಬಿಬಿಎಂಪಿ ಕೊನೆಗೆ ಸಸಿ ನೆಡುವ ಕಾರ್ಯ ಸ್ಥಗಿತಗೊಳಿಸಿತ್ತು.
ಇದೀಗ ಹೊಸದಾಗಿ ಸಸಿ ನೆಡುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಅದಕ್ಕೂ ಮುನ್ನ ಬಿಬಿಎಂಪಿ ಒಡೆತನದಲ್ಲಿನ ನಾಲ್ಕು ನರ್ಸರಿಗಳಲ್ಲಿ 5.69 ಲಕ್ಷ ಸಸಿ ಬೆಳೆಸಿ ಪೂರೈಸುವಂತೆ ಟೆಂಡರ್ ಆಹ್ವಾನಿಸಲಾಗಿದೆ.ಗುತ್ತಿಗೆ ಪಡೆಯುವವರು ಮಹಾಗನಿ, ಹೊಂಗೆ, ಸಂಪಿಗೆ ಸೇರಿ 30 ಬಗೆಯ ಸಸಿಗಳನ್ನು ಬೆಳೆಸಬೇಕಿದೆ. ಅದರಲ್ಲಿ ಆಲ, ಅರಳಿ, ಗೋಣಿ, ಮತ್ತು ಬಸರಿ ಸಸಿಗಳು ಶೇ.1 ಇರಬೇಕಿದ್ದು, ಅದಕ್ಕಿಂತ ಹೆಚ್ಚಿನ ಸಸಿಗಳನ್ನು ಬೆಳೆಸದಂತೆ ಸೂಚಿಸಲಾಗಿದೆ.
ನಿಯಮ ಪಾಲಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿಯೂ ಷರತ್ತಿನಲ್ಲಿ ಎಚ್ಚರಿಕೆ ನೀಡಲಾಗಿದೆ. ವಲಯ- ಕೆಂಪಾಪುರ ಸಸ್ಯಕ್ಷೇತ್ರ, ಪೂರ್ವ ವಲಯದಲ್ಲಿ 1.90 ಲಕ್ಷ ಸಸ್ಯಗಳನ್ನು ನೆಡಲಾಗುತ್ತಿದ್ದು 49.40 ಲಕ್ಷ ವೆಚ್ಚವಾಗಲಿದೆ.
ಅಟ್ಟೂರು ಸಸ್ಯಕ್ಷೇತ್ರ ಯಲಹಂಕ ವಲಯದಲ್ಲಿ 1.74 ಲಕ್ಷ ಸಸಿಗಳನ್ನು ನೆಡಲಾಗುತ್ತಿದ್ದು, 45.24 ಲಕ್ಷ ವೆಚ್ಚವಾಗಲಿದೆ. ಜ್ಞಾನಭಾರತಿ ಸಸ್ಯಕ್ಷೇತ್ರ ರಾಜರಾಜೇಶ್ವರಿನಗರದಲ್ಲಿ 1.45 ಲಕ್ಷ ಸಸಿಗಳನ್ನು ನೆಡಲಾಗುತ್ತಿದ್ದು, 37.70 ಲಕ್ಷ ವ್ಯಯಿಸಲಿದ್ದಾರೆ. ಕೂಡ್ಲು ಸಸ್ಯಕ್ಷೇತ್ರ ಬೊಮ್ಮನಹಳ್ಳಿಯಲ್ಲಿ 60 ಸಾವಿರ ಗಿಡಗಳನ್ನು ನೆಡಲಾಗುತ್ತಿದ್ದು 15.60 ಲಕ್ಷ ವೆಚ್ಚ ತಗುಲಲಿದೆ.