ಬೆಂಗಳೂರಿನ ಐವತ್ತನೇ ಮೇಯರ್ ಆಗಿ ಪದ್ಮಾವತಿ ಆಯ್ಕೆ
ಬೆಂಗಳೂರು, ಸೆಪ್ಟೆಂಬರ್ 28: ಕಾಂಗ್ರೆಸ್ ನ ಪದ್ಮಾವತಿ ಮೇಯರ್, ಜೆಡಿಎಸ್ ನ ಆನಂದ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಬಿಬಿಎಂಪಿಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿದಿದೆ.
ಆದರೆ ಕಾಂಗ್ರೆಸ್ ನಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಮೇಯರ್ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬ ಬಗ್ಗೆ ಕುತೂಹಲ ಇತ್ತು.[ಬಿಬಿಎಂಪಿ ಚುನಾವಣೆ : ಕಾಂಗ್ರೆಸ್ ನಿಂದ ಮೇಯರ್ ಯಾರಾಗಬಹುದು?]
ಬಿಬಿಎಂಪಿಯಲ್ಲಿ ಬಿಜೆಪಿ 125, ಕಾಂಗ್ರೆಸ್ 110, ಜೆಡಿಎಸ್ 23 ಹಾಗೂ ಪಕ್ಷೇತರರು 9 ಬಲಾಬಲ ಇದೆ. 142 ಮತಗಳನ್ನು ಪಡೆಯುವ ಮೂಲಕ ಪ್ರಕಾಶ್ ನಗರ ವಾರ್ಡ್ ನ ಪದ್ಮಾವತಿ ಮೇಯರ್ ಆಗಿ ಆಯ್ಕೆಯಾದರು.
ಇನ್ನು ಉಪಮೇಯರ್ ಆಗಿ ರಾಧಾಕೃಷ್ಣ ನಗರದ ಎಂ.ಆನಂದ್ ಆಯ್ಕೆಯಾದರು. ಬಿಬಿಎಂಪಿಯಲ್ಲಿ 100 ಸ್ಥಾನ ಪಡೆಯುವ ಮೂಲಕ ದೊಡ್ಡ ಪಕ್ಷವಾಗಿರುವ ಬಿಜೆಪಿ ಕೂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.[ಗೌಡ್ರ ರಾಜಕೀಯಕ್ಕೆ ಮೇಲುಗೈ: ಬಿಬಿಎಂಪಿ 'ಗದ್ದುಗೆ' ಮಾತುಕತೆ ಅಂತಿಮ]
ಕಾಂಗ್ರೆಸ್ ನಿಂದ ಜಿ.ಪದ್ಮಾವತಿ ಅವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡುವುದಕ್ಕೆ ಮೊದಲಿಗೆ ಜೆಡಿಎಸ್ ನಿಂದ ಆಕ್ಷೇಪ ವ್ಯಕ್ತವಾಗಿತ್ತು. ಅವರ ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲವಿದೆ, ಆಕೆ ವಿರುದ್ಧ ಹಲವು ಆರೋಪಗಳಿವೆ ಎಂದು ಜೆಡಿಎಸ್ ನ ವಕ್ತಾರರು ತಿಳಿಸಿದ್ದರು. ಅವರ ಆಯ್ಕೆ ಅನಿವಾರ್ಯವಾದರೆ ಜೆಡಿಎಸ್ ನಿಂದ ಬಾಹ್ಯ ಬೆಂಬಲ ನೀಡುವುದಾಗಿಯೂ ಹೇಳಿದ್ದರು.
ಇನ್ನು ಜೆಡಿಎಸ್ ನ ಬಂಡಾಯ ಶಾಸಕರಾದ ಜಮೀರ್ ಅಹಮ್ಮದ್, ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಮೇಲ್ಮನೆ ಸದಸ್ಯ ಪುಟ್ಟಣ್ಣ ಅವರಿಗೆ ವಿಪ್ ಜಾರಿಗೊಳಿಸಲಾಗಿತ್ತು. ಇದೇ ವೇಳೆ ಮತದಾನಕ್ಕೆ ತಡವಾಗಿ ಬಂದ ಬಿಜೆಪಿ ಸಂಸದರು ಹಾಗೂ ಶಾಸಕರಿಗೆ ಆಯುಕ್ತೆ ಜಯಂತಿ ಅವರು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಮಾತಿನ ಚಕಮಕಿ ಕೂಡ ನಡೆಯಿತು.[ಬಿಬಿಎಂಪಿ ಮೇಯರ್ ಚುನಾವಣೆ : ಅಂಕಿ-ಸಂಖ್ಯೆಗಳಲ್ಲಿ ಬಲಾಬಲ]
ಇದೇ ವೇಳೆ ಶಾಸಕ ಆರ್.ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯಿಂದ ಉಪ ಮೇಯರ್ ಚುನಾವಣೆಯನ್ನು ಬಹಿಷ್ಕರಿಸಲಾಯಿತು.