ಜೆಡಿಎಸ್ ಕೊಟ್ಟ ಬಿಸಿ ತುಪ್ಪ ನುಂಗದಿರಲು ಕೈ ನಿರ್ಧಾರ?
ಬೆಂಗಳೂರು, ಸೆ. 04: ಬಿಬಿಎಂಪಿ ಮೇಯರ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಸಂಬಂಧಕ್ಕೆ ತೊಡಕು ಎದುರಾಗಿದೆ. ಜೆಡಿಎಸ್ ಇಟ್ಟಿರುವ ಪ್ರಮುಖ ಬೇಡಿಕೆಯೊಂದನ್ನು ಒಪ್ಪದಿರಲು ಕಾಂಗ್ರೆಸ್ ಹಿರಿಯ ನಾಯಕರು ನಿರ್ಧರಿಸಿದ್ದಾರೆ. ಹೀಗಾಗಿ ಗದ್ದುಗೆ ಯಾರ ಪಾಲಾಗಲಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಗದೆ ಅತಂತ್ರ ಸ್ಥಿತಿ ಮುಂದುವರೆದಿದೆ.
ಜೆಡಿಎಸ್ ಮೈತ್ರಿ ಬೇಕಿದ್ದರೆ ಬಿಬಿಎಂಪಿ ತ್ರಿಭಜನೆ ಪ್ರಸ್ತಾಪನೆಯನ್ನು ಕೈಬಿಡಬೇಕು ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ವರು ಬಿಸಿ ತುಪ್ಪವನ್ನು ಕಾಂಗ್ರೆಸ್ಸಿಗರ ಬಾಯಿಗೆ ಹಾಕಿದ್ದರು. ಅದರೆ, ಮಸೂದೆ ಈಗ ರಾಷ್ಟ್ರಪತಿಗಳ ಅಂಕಿತಕ್ಕೆ ಕಳಿಸಲಾಗಿದ್ದು, ಈ ವಿಷಯದಲ್ಲಿ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.['ಮೇಯರ್ ಚುನಾವಣೆ: ಗೌಡ್ರೇ, ಕಾಂಗ್ರೆಸ್ ಬೆಂಬಲಿಸಬೇಡಿ']
ಕಾಂಗ್ರೆಸ್ ಜತೆ ಮೈತ್ರಿ ಬಗ್ಗೆ ದೇವೇಗೌಡರು ಮಂಗಳವಾರ ಸಕಾರಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲಿ ಬುಧವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ರಾಜ್ಯ ಉಸ್ತವಾರಿ ದಿಗ್ವಿಜಯಸಿಂಗ್ ದೂರವಾಣಿ ಕರೆ ಮಾಡಿ ಗೌಡರೊಂದಿಗೆ ಮಾತುಕತೆ ನಡೆಸುವಂತೆ ಸೂಚಿಸಿದರು ಎನ್ನಲಾಗಿದೆ. ಜಿ ಪರಮೇಶ್ವರ್ ಅವರು ಜಮೀರ್ ಅಹಮದ್ ಜೊತೆಗೂಡಿ ದೇವೇಗೌಡರನ್ನು ಭೇಟಿ ಮಾಡಿ ಬಂದ ಮೇಲೂ ಗೊಂದಲ ಮುಂದುವರೆದಿದೆ. [ದಕ್ಕದ ಅಧಿಕಾರ: ಹೋರಾಟದ ಹಾದಿ ಹಿಡಿದ ಬಿಜೆಪಿ]
ಸ್ಥಾಯಿ ಸಮಿತಿಗಳಲ್ಲಿ ಒಳ್ಳೆ ಸ್ಥಾನಕ್ಕೆ ಜೆಡಿಎಸ್ ಕಾರ್ಪೊರೇಟರ್ ಗಳು ಬೇಡಿಕೆ ಇಡುತ್ತಿದ್ದಾರೆ. ಕುಮಾರಸ್ವಾಮಿಯವರು ಬಿಬಿಎಂಪಿ ವಿಭಜನೆ ಕೈ ಬಿಡಬೇಕು ಹಾಗೂ ಹಿಂದಿನ ಬಿಜೆಪಿ ಅವಧಿಯಲ್ಲಿ ನಡೆದಿರುವ 9600 ಕೋಟಿ ರು ಅವ್ಯವಹಾರದ ತನಿಖೆಯನ್ನು ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಎರಡು ಪ್ರಮುಖ ಬೇಡಿಕೆ ಜೆಡಿಎಸ್ ಮುಂದಿಟ್ಟಿದ್ದಾರೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಿಬಿಎಂಪಿ ವಿಭಜನೆ ವಿಚಾರ ಪ್ರಸ್ತಾಪಿಸಿತ್ತು ಹಾಗೂ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಬಿಎಂಪಿ ಚುನಾವಣೆಯನ್ನು ಮಂದೂಡಲು ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಮೇಯರ್- ಉಪ ಮೇಯರ್ ಚುನಾವಣೆಗೆ ಸೆ.11ರಂದು ಮಹೂರ್ತ ನಿಗದಿ ಮಾಡಿ ಆದೇಶವೂ ಹೊರಬಿದ್ದಿದೆ.