ಬಿಬಿಎಂಪಿ ಮೇಯರ್ ಹುದ್ದೆ ಲಿಂಗಾಯತರಿಗೆ, ರಾಹುಲ್ ಗಾಂಧಿಗೆ ಪತ್ರ!
ಬೆಂಗಳೂರು, ಆಗಸ್ಟ್ 24 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸೆಪ್ಟೆಂಬರ್ನಲ್ಲಿ ನಡೆಯಲಿದೆ. ಈ ಬಾರಿ ಮೇಯರ್ ಪಟ್ಟವನ್ನು ಲಿಂಗಾಯತ ಸಮುದಾಯದವರಿಗೆ ನೀಡಬೇಕು ಎಂದು ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಾಗಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಗಂಗಾಂಬಿಕಾ ಮಲ್ಲಿಕಾರ್ಜುನ್ ಅವರನ್ನು ಮೇಯರ್ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಬಿಬಿಎಂಪಿಯ 51ನೇ ಮೇಯರ್ ಸಂಪತ್ ರಾಜ್ ಪರಿಚಯ
ಹಾಲಿ ಮೇಯರ್ ಸಂಪತ್ ರಾಜ್ ಅವರ ಅವಧಿ ಸೆಪ್ಟೆಂಬರ್ನಲ್ಲಿ ಕೊನೆಗೊಳ್ಳಲಿದೆ. ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಯ್ಕೆಯಾಗಬೇಕು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪಾಲಿಕೆಯಲ್ಲಿ ಆಡಳಿತದಲ್ಲಿದೆ.
ಬ್ರಿಟಿಷರ ಕಾಲದ ಗೌನನ್ನು ಮೇಯರ್ ಕಳಚುವುದು ಯಾವಾಗ?
ಈ ಬಾರಿ ಕಾಂಗ್ರೆಸ್ಗೆ ಮೇಯರ್ ಪಟ್ಟ ಸಿಗಲಿದೆಯೇ? ಎಂದು ಕಾದು ನೋಡಬೇಕು. ರಾಜ್ಯದಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಸರ್ಕಾರವಿದೆ. ಆದ್ದರಿಂದ, ಜೆಡಿಎಸ್ ಈ ಬಾರಿ ಮೇಯರ್ ಪಟ್ಟವನ್ನು ನೀಡಬೇಕು ಎಂದು ಬೇಡಿಕೆ ಇಡುವ ಸಾಧ್ಯತೆ ಇದೆ.
ಶಾಮನೂರು ಪತ್ರದಲ್ಲಿ ಏನಿದೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮಿಸಲಾಗಿದೆ. ಆದ್ದರಿಂದ, ಕಾಂಗ್ರೆಸ್ ಪಕ್ಷದ ಬಿಬಿಎಂಪಿ ಸದಸ್ಯರಾದ ಗಂಗಾಂಬಿಕಾ ಮಲ್ಲಿಕಾರ್ಜುನ್ ಅವರನ್ನು ಮೇಯರ್ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಬಿಬಿಎಂಪಿಯ ಇತಿಹಾಸದಲ್ಲಿಯೇ ಮೇಯರ್ ಹುದ್ದೆಯನ್ನು ಲಿಂಗಾಯತರಿಗೆ ನೀಡಿಲ್ಲ. ಆದ್ದರಿಂದ, ಈ ಬಾರಿ ಲಿಂಗಾಯತ ಸಮುದಾಯದ ನಾಯಕರಿಗೆ ಅವಕಾಶ ನೀಡಬೇಕು ಎಂದು ಶಾಶಮನೂರು ಶಿವಶಂಕರಪ್ಪ ಅವರು ಪತ್ರದಲ್ಲಿ ವಿವರಣೆ ನೀಡಿದ್ದಾರೆ.
2 ಬಾರಿ ಆಯ್ಕೆಯಾಗಿದ್ದಾರೆ
ಗಂಗಾಂಬಿಕಾ ಮಲ್ಲಿಕಾರ್ಜುನ್ ಅವರು ಜಯನಗರ ವಾರ್ಡ್ (153)ನ ಬಿಬಿಎಂಪಿ ಸದಸ್ಯರು. 2 ನೇ ಬಾರಿಗೆ ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದಾರೆ. ಆದ್ದರಿಂದ, ಅವರ ಹೆಸರನ್ನು ಮೇಯರ್ ಹುದ್ದೆಗೆ ಪರಿಗಣಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಗಂಗಾಂಬಿಕಾ ಮಲ್ಲಿಕಾರ್ಜುನ್ ಅವರು ವಾರ್ಡ್ನಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನಗರದಲ್ಲಿಯೇ ಮೊದಲ ಬಾರಿಗೆ ಔಟ್ ಡೋರ್ ಜಿಮ್ ಅನ್ನು ಎಂ.ಎನ್.ಕೃಷ್ಣರಾವ್ ಪಾರ್ಕ್ನಲ್ಲಿ ಸ್ಥಾಪನೆ ಮಾಡಿದ್ದಾರೆ. ಜನರ ಕೈಗೆ ಸುಲಭವಾಗಿ ಸಿಗುತ್ತಾರೆ. ಆದ್ದರಿಂದ, ಅಪಾರವಾದ ಜನ ಮನ್ನಣೆಯನ್ನು ಗಳಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಚುನಾವಣೆ
ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 52ನೇ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆಯಲಿದೆ. ಬಿಬಿಎಂಪಿಯ ಹಾಲಿ ಮೇಯರ್ ದೇವರಜೀವನಹಳ್ಳಿ ಕಾರ್ಪೊರೇಟರ್ ಸಂಪತ್ ರಾಜ್. ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ.
ನಾಲ್ಕನೇ ಅವಧಿಗೂ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಹಂಚಿಕೊಳ್ಳುವ ಸಾಧ್ಯತೆ ಇದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.
ಕಳೆದ ಬಾರಿ ಬೇಡಿಕೆ ಇಟ್ಟಿತ್ತು
2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14, 7 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಪಕ್ಷೇತರ ಅಭ್ಯರ್ಥಿಗಳ ಸಹಾಯದಿಂದ ಅಧಿಕಾರ ನಡೆಸುತ್ತಿವೆ.
ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಜೆಡಿಎಸ್ 2017ರ ಚುನಾವಣೆ ಸಂದರ್ಭದಲ್ಲಿಯೇ ಮೇಯರ್ ಪಟ್ಟಕ್ಕಾಗಿ ಬೇಡಿಕೆ ಇಟ್ಟಿತ್ತು. ಈ ಬಾರಿಯೂ ಪಕ್ಷ ಮೇಯರ್ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲಿದೆಯೇ? ಕಾದು ನೋಡಬೇಕು.