ಶಾಸಕರ ಅಮಾನತು : ಬಿಬಿಎಂಪಿ ಮೈತ್ರಿಗೆ ಧಕ್ಕೆ
ಬೆಂಗಳೂರು, ಜೂನ್ 13 : 'ಬಿಬಿಎಂಪಿಯಲ್ಲಿ ನಿಮ್ಮ ಆಡಳಿತ ನೋಡಿ ಸಾಕಾಗಿ ಹೋಗಿದೆ. ಸರಿಯಾಗಿ ಆಡಳಿತ ನೀಡದಿದ್ದರೆ ನೀಡಿರುವ ಬೆಂಬಲ ವಾಪಸ್ ಪಡೆಯಬೇಕಾಗುತ್ತದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಕೆಲವು ತಿಂಗಳ ಹಿಂದೆ ಎಚ್ಚರಿಕೆ ಕೊಟ್ಟಿದ್ದರು.
ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಮೈತ್ರಿ ಮುರಿಯುವ ಆತಂಕ ಎದುರಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ 8 ಶಾಸಕರನ್ನು ಜೆಡಿಎಸ್ ಅಮಾನತು ಮಾಡಿದೆ. ಇವರಲ್ಲಿ ಮೂವರು ಬೆಂಗಳೂರು ನಗರದವರು, ಬಿಬಿಎಂಪಿ ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. [ಮೈತ್ರಿ ಮುರಿಯುವ ಮಾತನಾಡಿದ ಕುಮಾರಸ್ವಾಮಿ!]
2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಜೆಡಿಎಸ್ ಕಾಂಗ್ರೆಸ್ ಮೈತ್ರಿಯಿಂದಾಗಿ, ಮೇಯರ್ ಸ್ಥಾನ ಕೈತಪ್ಪಿತು. [ಬಿಬಿಎಂಪಿ ಮೈತ್ರಿ : ಜೆಡಿಎಸ್ ಗೆ ಲಾಭ ಹೆಚ್ಚು]
ಜೆಡಿಎಸ್ ಬೆಂಬಲ ಪಡೆದು ಕಾಂಗ್ರೆಸ್ನ ಮಂಜುನಾಥ ರೆಡ್ಡಿ ಅವರು ಮೇಯರ್ ಆಗಿ ಆಯ್ಕೆಯಾಗಿದ್ದರು. ಈಗ ಜೆಡಿಎಸ್ ಪಕ್ಷದಿಂದ ಅಮಾನತಾಗಿರುವ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಅವರ ಪತ್ನಿ ಹೇಮಲತಾ ಅವರು ಉಪ ಮೇಯರ್ ಆಗಿದ್ದರು. [8 ಶಾಸಕರ ಅಮಾನತು, ಮುಂದೇನು?]
ಶಾಸಕರ ಹಿಡಿತದಲ್ಲಿದ್ದಾರೆ : ಬಿಬಿಎಂಪಿಯಲ್ಲಿರುವ 14 ಜೆಡಿಎಸ್ ಕಾರ್ಪೊರೇಟರ್ಗಳು ಶಾಸಕರಾದ ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ) ಅವರ ಹಿಡಿತದಲ್ಲಿದ್ದಾರೆ. [ಬಿಬಿಎಂಪಿ ಮೈತ್ರಿಗೆ ಎಚ್ಡಿಕೆ ಅಸಮಾಧಾನ]
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಈ ಮೂವರು ಶಾಸಕರು ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ಮೈತ್ರಿ ಮಾತುಕತೆಯಲ್ಲಿ ಜಮೀರ್ ಅಹಮದ್ ಖಾನ್ ಮುಂಚೂಣಿಯಲ್ಲಿದ್ದರು. ಈಗ ಈ ಮೂವರು ಅಮಾನತುಗೊಂಡಿರುವುದರಿಂದ ಬಿಬಿಎಂಪಿ ಮೈತ್ರಿ ಮುರಿದು ಬೀಳುವ ಸಾಧ್ಯತೆ ಇದೆ.