ಜಯಮಹಲ್ ರಸ್ತೆಗಳ ಮರಗಳ ಸ್ಥಳಾಂತರಕ್ಕೆ ಬಿಬಿಎಂಪಿ ಚಿಂತನೆ
ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಕತ್ತರಿಸಲು ಉದ್ದೇಶಿಸಿರುವ ಸುಮಾರು 173 ಮರಗಳಲ್ಲಿ ಕನಿಷ್ಠ 50 ಮರಗಳನ್ನು ಉಳಿಸಿಕೊಳ್ಳುವ ಚಿಂತನೆಯಲ್ಲಿರುವ ಬಿಬಿಎಂಪಿ.
ಬೆಂಗಳೂರು, ಫೆಬ್ರವರಿ 13: ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಜಯಮಹಲ್ ರಸ್ತೆನಿಂದ ಹಾಗೂ ಕಂಟೋನ್ಮೆಂಟ್ ವರೆಗಿನ 173 ಮರಗಳನ್ನು ಕತ್ತರಿಸಲು ಮುಂದಾಗಿರುವ ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಮರಗಳಲ್ಲಿ ಪ್ರಮುಖವಾದ 50 ಮರಗಳನ್ನು ಕತ್ತರಿಸದೇ ಬೇರೆಡೆಗೆ ಸ್ಥಳಾಂತರಗೊಳಿಸಲು ಚಿಂತನೆ ನಡೆಸಿದೆ.
ಇದನ್ನು ಬಿಬಿಎಂಪಿಯ ಆಯುಕ್ತರಾದ ಎನ್. ಮಂಜುನಾಥ ಪ್ರಸಾದ್ ಕೂಡ ಖಾತ್ರಿಪಡಿಸಿದ್ದಾರೆ. ಹೀಗೆ, ಮರಗಳನ್ನು ಬೇರೆಡೆಗೆ ಸ್ಥಳಾಂತರಿಸುವ ವೆಚ್ಛದ ಬಗ್ಗೆಯೂ ಮಾಹಿತಿ ನೀಡಿರುವ ಆಯುಕ್ತರು, ಸಾಗಾಣಿಕೆಗಾಗಿ ಪ್ರತಿ ಮರಕ್ಕೆ ಸುಮಾರು 50 ಸಾವಿರ ರು. ಖರ್ಚಾಗಲಿದೆ ಎಂದು ತಿಳಿಸಿದ್ದಾರೆ.[ರಸ್ತೆ ವಿಸ್ತರಣೆಗಾಗಿ ಬೆಂಗಳೂರು ಅರಮನೆ ಭೂಮಿ ವಶಕ್ಕೆ ನಿರ್ಧಾರ]
ಇದಲ್ಲದೆ, ಜಯಮಹಲ್ ರಸ್ತೆಯ ಅಗಲೀಕರಣ ಯೋಜನೆಗೆ ಕತ್ತರಿಸಬೇಕಿರುವ ಮರಗಳ ಸಂಖ್ಯೆಯಲ್ಲೂ ಇಳಿಮುಖ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.[ಬೆಂಗಳೂರು: 112 ಮರ ಉಳಿಸಲು ನಾಳೆ (ಫೆ. 11) ಬೃಹತ್ ಮಾನವ ಸರಪಳಿ]
ಈಗಾಗಲೇ, ಮರ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಗೆ ಬಿಬಿಎಂಪಿ ಪತ್ರ ಬರೆದಿದ್ದು ಸಂಸ್ಥೆಯ ಅಧಿಕಾರಿಗಳ ಸಹಯೋಗದೊಂದಿಗೆ ಉಳಿಸಿಕೊಳ್ಳಬೇಕಾದ ಮರಗಳ ವಿವರಗಳನ್ನು ಪಡೆಯಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.