ಮಾಡಿದ ತಪ್ಪನ್ನು ತಿದ್ದಿಕೊಂಡು ಆದೇಶ ಹಿಂಪಡೆದ ಬಿಬಿಎಂಪಿ
ರಾಜ್ಯ ಉಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ರಾಮಚಂದ್ರಾಪುರ ಮಠದ ಗಿರಿನಗರ ನಿವೇಶನದಲ್ಲಿ ಕಟ್ಟಡ ಕಟ್ಟಲು ಮಂಜೂರಾಗಿದ್ದ ನಕ್ಷೆಯನ್ನು ಅಕಾರಣವಾಗಿ ರದ್ದುಪಡಿಸಿದ್ದ ಬಿಬಿಎಂಪಿ, ಇದೀಗ ತನ್ನ ಆದೇಶವನ್ನು ಹಿಂಪಡೆದಿದೆ.
ಬೆಂಗಳೂರು, ಜುಲೈ 12: ರಾಮಚಂದ್ರಾಪುರ ಮಠದ ಗಿರಿನಗರ ನಿವೇಶನದಲ್ಲಿ ಕಟ್ಟಡ ಕಟ್ಟಲು ಮಂಜೂರಾಗಿದ್ದ ನಕ್ಷೆಯನ್ನು ಅಕಾರಣವಾಗಿ ರದ್ದುಪಡಿಸಿದ್ದ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ), ಇದೀಗ ತನ್ನ ಆದೇಶವನ್ನು ಹಿಂಪಡೆದಿದೆ.
ಬಿಬಿಎಂಪಿ ತೆಗೆದುಕೊಂಡ ಕ್ರಮದ ಕುರಿತಾಗಿ ರಾಜ್ಯ ಉಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಬಿಬಿಎಂಪಿ ತನ್ನಿಂದಾದ ಪ್ರಮಾದವನ್ನು ಸರಿಪಡಿಸಿಕೊಂಡಿದೆ.
ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ, ವಿಚಾರಣೆಯಿಂದ ಹಿಂದೆ ಸರಿದ ಸಿಜೆ
ಮಠ ನಿವೇಶನ ಕಟ್ಟಲು ಮುಂದಾಗಿರುವ ಜಾಗ 1978ನೇ ಇಸವಿಯಲ್ಲಿ ರಾಮಚಂದ್ರಾಪುರ ಮಠಕ್ಕೆ ಕ್ರಯಪತ್ರದ ಮೂಲಕ ನೋಂದಾಯಿತವಾಗಿದ್ದು, ಮಠದ ಹೆಸರಿನಲ್ಲಿ ಖಾತಾ ಆಗಿ, ಕಂದಾಯವನ್ನೂ ಕಟ್ಟಿಕೊಂಡು ಬರಲಾಗುತ್ತಿದೆ.
ಜಾಗವು ಮಠದ ಸ್ವಾಧೀನದಲ್ಲೇ ಇದ್ದು, ಎರಡು ಮಹಡಿಯ ಕಟ್ಟಡವು ಇತ್ತು. ಆ ಜಾಗದಲ್ಲಿ ನೂತನ ಧರ್ಮಶಾಲಾ ಕಟ್ಟಡವನ್ನು ನಿರ್ಮಿಸಲು ಬಿಬಿಎಂಪಿಯಿಂದ ಅಧಿಕೃತ ಕಟ್ಟಡ ನಕಾಶೆಗೆ ಪರವಾನಗಿಯನ್ನು ಪಡೆದು, ಕಾಮಗಾರಿಯನ್ನು ಆರಂಭಿಸಲು ಮುಂದಾಗಿತ್ತು.
ಆದರೆ 2015 ರಲ್ಲಿ ಬಿಡಿಎ ಯಿಂದ ಬಂದ ಪತ್ರದ ಆಧಾರದಮೇಲೆ, ಪರವಾನಗಿ ಅನುಮತಿಯನ್ನು ಹಿಂಪಡೆದು ಬಿಬಿಎಂಪಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ಮಠ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು.
ವಿಚಾರಣಾ ಸಂದರ್ಭದಲ್ಲಿ ಬಿಬಿಎಂಪಿಯ ಕ್ರಮದ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದ ಉಚ್ಚ ನ್ಯಾಯಾಲಯ, ಸಂಬಂಧಿತ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳಿಗೆ ತಲಾ 50,000 ರೂ ದಂಡ ಸ್ವರೂಪವಾಗಿ ಉಚ್ಚನ್ಯಾಯಾಲಯದಲ್ಲಿ ಠೇವಣಿ ಮಾಡಲು, ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಜರಿರಲು ಹಾಗೂ ಬಿಬಿಎಂಪಿಯ ಪರವಾನಗಿ ರದ್ಧತಿ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಜೆಯನ್ನು ನೀಡಿ ಆದೇಶಿಸಿದೆ.
ಬಿಬಿಎಂಪಿ ಕ್ರಮದ ಕುರಿತಾಗಿ ರಾಜ್ಯ ಉಚ್ಚನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿ, ಬಿಬಿಎಂಪಿ ಆದೇಶಕ್ಕೆ ತಡೆಯಾಜ್ಞೆ ನೀಡಿ ತರಾಟೆಗೆಗೆ ತೆಗೆದುಕೊಂಡ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ, ತನ್ನ ಹಿಂದಿನ ಆದೇಶವನ್ನು (Ad.com/SUT/1011/12-13) ಹಿಂಪಡೆದಿರುವುದಾಗಿ ಪತ್ರ ಮುಖೇನ ಮಠಕ್ಕೆ ತಿಳಿಸಿದೆ.