ಮಳೆಗಾಲ ನಿಭಾಯಿಸಲು ಬಿಬಿಎಂಪಿ ಸಜ್ಜು: ಸೂಕ್ತ ಕ್ರಮಕ್ಕೆ ಆಯುಕ್ತರ ಸೂಚನೆ
ಬೆಂಗಳೂರು, ಮೇ 22: ಚುನಾವಣೆ ಕೆಲಸದಲ್ಲಿ ನಿರತರಾಗಿದ್ದ ಬಿಬಿಎಂಪಿ ಅಧಿಕಾರಿಗಳು ಇದೀಗ ಎಚ್ಚೆತ್ತುಕೊಂಡಿದ್ದಾರೆ. ಅದರ ಜತೆಗೆ ಮಳೆಯಿಂದಾಗುವ ಅನಾಹುತ ತಡೆಗೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತರು ಸೂಚನೆ ನೀಡಿದ್ದಾರೆ.
ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ತಿರುಗಿ ನೋಡದವರು ಮಳೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ತಿರುಗಿ ನೋಡದವರು ಕೊನೆಗೂ ಕಣ್ಣು ತೆರೆದಿದ್ದಾರೆ. ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೆಲ ಆದೇಶ ಮಾಡಿದ್ದಾರೆ. ಅದರಂತೆ ಜನರಿಂದ ಬರುವ ದೂರು ಸ್ವೀಕರಿಸಲು ಕೇಂದ್ರ ಕಚೇರಿ ಸಹಾಯವಾಣಿ ಕೇಂದ್ರದ ಜತೆಗೆ 8 ವಲಯಗಳಲ್ಲೂ ಪ್ರತ್ಯೇಕ ತಲಾ 1 ಶಾಶ್ವತ ನಿಯಂತ್ರಣ ಕೊಠಡಿ ಹಾಗೂ 63 ವಿಭಾಗಕ್ಕೆ ಪ್ರತ್ಯೇಕ ತಾತ್ಕಾಲಿಕ ಕೊಠಡಿ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಅಭಿವೃದ್ಧಿ: ಸರ್ಕಾರದ ಮುಂದಿರುವ ಏಳು ಸವಾಲುಗಳು!
ಮಳೆಗಾಲ ಆರಂಭಕ್ಕೂ ಮುನ್ನ ಕೆರೆಗಳಲ್ಲಿನ ಹೂಳು ತೆಗೆಯುವ ಕಾರ್ಯ ತುರ್ತಾಗಿ ಆಗಬೇಕಿದೆ. ಅದಕ್ಕಾಗಿ 25 ಕೆರೆಗಳನ್ನು ಗುರುತಿಸಿದೆ. ಈಗಾಗಲೇ ನಿಗದಿಯಾಗಿರುವ ಅನುದಾನದಲ್ಲಿ ಮೇ ಅಂತ್ಯದೊಳಗೆ ಆ ಕೆರೆಗಳಲ್ಲಿನ ಹೂಳು ತೆಗೆದು, ಮಳೆನೀರು ರಾಜಕಾಲುವೆ ಮೂಲಕ ಸರಾಗವಾಗಿ ಹರಿಯುವಂತೆ ಮಾಡಲು ಆಯುಕ್ತರು ನಿರ್ದೇಶಿಸಿದ್ದಾರೆ.
21 ಅರಣ್ಯ ತಂಡಗಳ ರಚನೆ:ಮಳೆಯಿಂದಾಗಿ ಬೀಳುವ ಮರ, ರೆಂಬೆಗಳನ್ನು ಶೀಘ್ರದಲ್ಲಿ ತೆರವು ಮಾಡಲು 21 ಅರಣ್ಯ ತಂಡಗಳನ್ನು ನೇಮಿಸಲಾಗುತ್ತದೆ. ಪ್ರತಿ ತಂಡದಲ್ಲೂ 7 ಕಾರ್ಮಿಕರು, ಒಬ್ಬರು ಮೇಲ್ವಿಚಾರಕರು ಸೇರಿ ಮರಗಳನ್ನು ಕತ್ತರಿಸಲು ಅಗತ್ಯವಿರುವ ಸಲಕರಣೆ ಹಾಗೂ ಸಾಗಣೆಗೆ ವಾಹನವನ್ನು ನಿಗದಿ ಮಾಡಲಾಗುತ್ತದೆ.