ಆಮ್ ಆದ್ಮಿ ಆಕ್ರೋಶ: ತಿಪ್ಪೆಗುಂಡಿಯಾದ ಬಿಬಿಎಂಪಿ
ಬೆಂಗಳೂರು, ಜೂನ್ 04 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆವರಣ ಶನಿವಾರ ಗಬ್ಬು ನಾರುತ್ತಿತ್ತು! ಹೌದು ಇದಕ್ಕೆ ಕಾರಣವಾಗಿದ್ದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಆಕ್ರೋಶ.
ಬೆಂಗಳೂರು ಕಸದಿಂದ ಬೇಸತ್ತ ಆಮ್ ಆದ್ಮಿ ಪಾರ್ಟಿ ಶನಿವಾರ ಬಿಬಿಎಂಪಿ ಆವರಣದೊಳಕ್ಕೆ ಕಸ ಎಸೆದು ಆಕ್ರೋಶ ವ್ಯಕ್ತಪಡಿಸಿದೆ. ಕಸ ಎಸೆಯಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.[ಜೂನ್ 4ರಂದು ಕಸದ ತೊಟ್ಟಿಯಾಗಲಿದೆ ಬಿಬಿಎಂಪಿ]
ಕಸದ ಸಮಸ್ಯೆಯನ್ನು ಬಗೆಹರಿಸಲು ಆಮ್ ಆದ್ಮಿ ಪಾರ್ಟಿ 21 ದಿನಗಳ ಗಡುವು ನೀಡಿತ್ತು. ಪರಿಹಾರಕ್ಕೆ ಮುಂದಾಗದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ 'ಕಸದ ನಡಿಗೆ - ಬಿಬಿಎಂಪಿ ಕಡೆಗೆ' ಎಂಬ ಅಭಿಯಾನ ಹಮ್ಮಿಕೊಂಡು ಟೌನ್ ಹಾಲ್ ನಿಂದ ಮೆರವಣಿಗೆಯಲ್ಲಿ ತೆರಳಿ ಬಿಬಿಎಂಪಿ ಆವರಣಕ್ಕೆ ಕಸ ಎಸೆಯಲಾಯಿತು.
ಬೆಂಗಳೂರು ನಗರದ ಕಸದಿಂದ ಬಾಧಿತರಾಗಿರುವ ಮಂಡೂರು ಗ್ರಾಮದ ಜನ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಳೆಗಾಲ ಎದುರಾಗಿದ್ದು ಇನ್ನು ಮುಂದಾದರೂ ಬಿಬಿಎಂಪಿ ಕಸ ವಿಲೇವಾರಿಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತದೆಯೋ ನೋಡಬೇಕಾಗಿದೆ. ಆಮ್ ಆದ್ಮಿ ಪಾರ್ಟಿ ಇಟ್ಟ ಬೇಡಿಕೆಗಳನ್ನು ಮುಂದೆ ವಿವರಿಸಲಾಗಿದೆ.
ಕಾರ್ಮಿಕರನ್ನು ನೇಮಿಸಿ
ಬಿಬಿಎಂಪಿ ಪ್ರತಿ ವಾರ್ಡಿಗೂ ಸಾಕಷ್ಟು ಪೌರಕಾರ್ಮಿಕರು ಮತ್ತು ಅವರಿಗೆ ಸಮರ್ಪಕವಾಗಿ ಹಾಗೂ ಸುರಕ್ಷಿತವಾಗಿ ಕೆಲಸಮಾಡಲು ಬೇಕಾದ ಸಾಮಗ್ರಿಗಳನ್ನು ನಿಯೋಜಿಸಬೇಕು
ವಾಹನ ನೀಡಿ
ಕಸ ವಿಲೇವಾರಿಯನ್ನು ಸುಗಮಗೊಳಿಸಲು ಪ್ರತಿ ವಾರ್ಡಿಗೂ ಕಸ ಸಾಗಿಸಲು ಅಗತ್ಯವಾದಷ್ಟು ಸಣ್ಣ ವಾಹನಗಳನ್ನು ಒದಗಿದಬೇಕು.
ವಿಂಗಡನೆ ಕೇಂದ್ರ ಸ್ಥಾಪಿಸಿ
ಬಿಬಿಎಂಪಿ ಈ ಕೂಡಲೇ ವಾರ್ಡಿಗೆ ಎರಡು ಅಥವಾ ಅಧಿಕ ಕಸ ವಿಂಗಡಿಸುವ ಕೇಂದ್ರಗಳನ್ನು ಸ್ಥಾಪಿಸಬೇಕು. ಅಗತ್ಯಗೆ ತಕ್ಕಂತೆ ಹೆಚ್ಚು ಜನಸಾಂದ್ರತೆ ಇರುವ ವಾರ್ಡ್ಗಳನ್ನು 15,000 ಜನರಿಗೆ ಒಂದರಂತೆ ಕಸ ವಿಂಗಡಣೆ ಕೇಂದ್ರಗಳನ್ನು ಸ್ಥಾಪಿಸಬೇಕು.
ಅಗತ್ಯ ಅನುದಾನ ನೀಡಿ
ಅವಶ್ಯಕವಾದ ಅನುದಾನ ನೀಡಿ, ಹಸಿ ಕಸದಿಂದ ಜೈವಿಕಗೊಬ್ಬರ ತಯಾರಿಕೆಗೆ ಬೇಕಾದ ಸಂಪನ್ಮೂಲವುಳ್ಳ ಕೇಂದ್ರಗಳನ್ನು ಸ್ಥಾಪಿಸಬೇಕು