ರಿಸಲ್ಟ್ ಏನೇ ಇರಲಿ, ಬೆಂಗ್ಳೂರಿಗೆ ಪ್ರತ್ಯೇಕ ಮಂತ್ರಿ ಸ್ಥಾನ: ಸಿಎಂ
ಬೆಂಗಳೂರು, ಆಗಸ್ಟ್. 25: ಬಿಬಿಎಂಪಿ ಚುನಾವಣಾ ಫಲಿತಾಂಶ ನಮ್ಮ ನಿರೀಕ್ಷೆ ಹುಸಿ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಹೇಳಿದ ಲೆಕ್ಕಾಚಾರವೂ ಹುಸಿಯಾಗಿದೆ. ಸರಳ ಬಹುಮತ ಬರುತ್ತದೆ ಎಂದು ಯೋಚಿಸಿದ್ದೆವು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬೆಂಗಳೂರು ಅಭಿವೃದ್ಧಿಗೆ ತೆಗೆದುಕೊಂಡ ಕ್ರಮಗಳು ಸಹ ಫಲ ನೀಡಲಿಲ್ಲ ಎಂದರು.[ಬಿಬಿಎಂಪಿ: ಬಿಜೆಪಿಗೆ ಸ್ಪಷ್ಟ ಬಹುಮತ, ಕಾಂಗ್ರೆಸ್ಸಿಗೆ ಮುಖಭಂಗ]
ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿನ ಸ್ಥಾನ ಗಳಿಸಿಕೊಂಡಿದ್ದೇವು. ಆದರೆ ಈ ಬಾರಿ ಆ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಸೋಲಿನ ಹೊಣೆಯನ್ನು ಎಲ್ಲರೂ ಹೊರಬೇಕಾಗುತ್ತದೆ ಎಂದು ಹೇಳಿದರು.
ನಮ್ಮ ಲೆಕ್ಕಾಚಾರ ಯಾಕೆ ಹೆಚ್ಚು ಕಡಿಮೆ ಆಯಿತು ಎಂಬುದನ್ನು ಯೋಚಿಸುತ್ತೇವೆ. ಬೆಂಗಳೂರು ನಗರದ ಅಭಿವೃದ್ಧಿಗೆ ಸಕಲ ಕ್ರಮ ತೆಗೆದುಕೊಳ್ಳಲು ಬದ್ಧ. ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಉಸ್ತುವಾರಿ ಸಚಿವರ ಜತೆ ಕುಳಿತು ಚರ್ಚೆ ಮಾಡುತ್ತೇನೆ. ಬೆಂಗಳೂರಿಗೆ ಪ್ರತ್ಯೇಕ ಸಚಿವ ಸ್ಥಾನ ನೀಡುತ್ತೇನೆ ಎಂದು ಹೇಳಿದರು.