ಬಿಬಿಎಂಪಿ ಚುನಾವಣೆ ಮುಂದೂಡಿದ ಸುಪ್ರೀಂಕೋರ್ಟ್
ಬೆಂಗಳೂರು, ಜು.03 : ಸುಪ್ರೀಂಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು 8 ವಾರಗಳ ಕಾಲಮುಂದೂಡಿದೆ. ಅಕ್ಟೋಬರ್ 5ರೊಳಗೆ ಚುನಾವಣೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದೆ. ಇದರಿಂದ ಸರ್ಕಾರಕ್ಕೆ ಚುನಾವಣೆ ನಡೆಸಲು ಮತ್ತಷ್ಟು ಕಾಲಾವಕಾಶ ಸಿಕ್ಕಿದಂತಾಗಿದೆ.
2011ರ ಮೀಸಲಾತಿ ಪಟ್ಟಿ ಅನ್ವಯ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ 8 ವಾರಗಳ ಕಾಲಾವಕಾಶ ನೀಡಿ ಶುಕ್ರವಾರ ಆದೇಶ ಹೊರಡಿಸಿದೆ. [ಬಿಬಿಎಂಪಿ ಚುನಾವಣೆ ವೇಳಾಪಟ್ಟಿ]
ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ಪೀಠ 2015ರ ಅಕ್ಟೋಬರ್ 5ರೊಳಗೆ ಚುನಾವಣೆಯನ್ನು ನಡೆಸುವಂತೆ ಸೂಚನೆ ನೀಡಿತು. ವಾರ್ಡ್ ಮತ್ತು ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದಂತೆ ಸೂಚನೆ ನೀಡಿತು. [ಬಿಬಿಎಂಪಿ ಚುನಾವಣೆ : ಗುಪ್ತಚರ ವರದಿ ಏನು ಹೇಳುತ್ತದೆ?]
ರಾಜ್ಯ ಚುನಾವಣಾ ಆಯೋಗ ಜುಲೈ 28ರಂದು ಬಿಬಿಎಂಪಿ ಚುನಾವಣೆ ನಡೆಸಲಾಗುತ್ತದೆ ಎಂದು ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಸುಪ್ರೀಂಕೋರ್ಟ್ ಈಗ 8 ವಾರಗಳ ಕಾಲಾವಕಾಶ ನೀಡಿರುವುದರಿಂದ ಚುನಾವಣಾ ಆಯೋಗ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಬೇಕಿದೆ. ಹೊಸ ವೇಳಾಪಟ್ಟಿ ಪ್ರಕಟಿಸುವಂತೆಯೂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಚುನಾವಣೆ ಮುಂದೂಡಿದ ಬಗ್ಗೆ ಪ್ರತಿಕ್ರಿಯೆಗಳು ಇಲ್ಲಿವೆ
ಕೋರ್ಟ್ ಆದೇಶ ಆಶ್ಚರ್ಯ ತಂದಿದೆ
ಸುಪ್ರೀಂಕೋರ್ಟ್ ಆದೇಶ ಆಶ್ಚರ್ಯ ತಂದಿದೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ, ನೀತಿ ಸಂಹಿತೆ ಜಾರಿಯಾದ ಮೇಲೆ ಚುನಾವಣೆಗಳನ್ನು ಮುಂದೂಡುವ ಸಂಪ್ರದಾಯವಿಲ್ಲ. ಆದರೆ, ಮೀಸಲಾತಿ, ವಾರ್ಡ್ ಮರುವಿಂಗಡನೆಗೆ ಅವಕಾಶ ನೀಡದೆ ಚುನಾವಣೆ ಮುಂದೂಡಿರುವುದಕ್ಕ ಕಾರಣ ಸ್ಪಷ್ಟವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಏನನ್ನು ಸಾಧಿಸಲು ಹೊರಟಿದೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡುವ ಮೂಲಕ ಸರ್ಕಾರ ಏನನ್ನು ಸಾಧಿಸಲು ಹೊರಟಿದೆ? ಎಂಬುದು ತಿಳಿಯುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ಮುಂದೂಡಿ ಬೆಂಗಳೂರಿಗೆ ಮತ್ತಷ್ಟು ಕೊಡುಗೆಗಳನ್ನು ನೀಡಿದರೂ ಜನರ ಮನಸ್ಥಿತಿ ಬದಲಾಗುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ತೀರ್ಪಿನ ಪ್ರತಿ ಬಳಿಕ ಮುಂದಿನ ತೀರ್ಮಾನ
ಬಿಬಿಎಂಪಿ ಚುನಾವಣೆಯನ್ನು ಸುಪ್ರೀಂಕೋರ್ಟ್ 8 ವಾರಗಳ ಕಾಲ ಮುಂದೂಡಿದೆ. ಆದರೆ, ಈ ಎಂಟುವಾರ ಎಂದಿನಿಂದ ಅನ್ವಯವಾಗುತ್ತದೆ ಎಂಬುದು ತೀರ್ಪಿನ ಪ್ರತಿ ಬಂದ ಬಳಿಕ ತಿಳಿಯಲಿದೆ. ನಂತರ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎಸ್.ಶ್ರೀನಿವಾಸಚಾರಿ ಹೇಳಿದ್ದಾರೆ.
ನಿರೀಕ್ಷೆಯಂತೆ ಕಾಲಾವಕಾಶ ಸಿಕ್ಕಿದೆ
ಸರ್ಕಾರ ಚುನಾವಣೆ ನಡೆಸಲು ಕಾಲಾವಕಾಶ ಕೇಳಿತ್ತು. ಸುಪ್ರೀಂಕೋರ್ಟ್ ತರಾತುರಿಯಲ್ಲಿ ಚುನಾವಣೆ ನಡೆಸುವುದು ಬೇಡ ಎಂದು 8 ವಾರಗಳ ಕಾಲಾವಕಾಶ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಆದೇಶವೇನು?
ಕೋರ್ಟ್ ಆದೇಶದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಚುನಾವಣಾ ಆಯೋಗದ ಪರ ವಕೀಲರಾದ ಕೆ.ಎನ್.ಫಣೀಂದ್ರ ಅವರು, 'ರಾಜ್ಯ ಸರ್ಕಾರ 2011ರ ಜನಗಣತಿ ಅನ್ವಯ ಮೀಸಲಾತಿ ಪಟ್ಟಿ ತಯಾರಿಸಿ ಚುನಾವಣೆ ನಡೆಸುತ್ತೇವೆ ಎಂದು ಕೋರ್ಟ್ಗೆ ಮನವಿ ಮಾಡಿತ್ತು. ಆದರೆ, ವಾರ್ಡ್ ಮತ್ತು ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಚುನಾವಣೆ ನಡೆಸಲು ಮಾತ್ರ 8 ವಾರಗಳ ಕಾಲಾವಕಾಶ ನೀಡಿದೆ' ಎಂದು ಹೇಳಿದರು.