ಬಿಬಿಎಂಪಿಯಲ್ಲಿ ಬಿಜೆಪಿ ದುರಾಡಳಿತದ ಚಾರ್ಜ್ ಶೀಟ್
ಬೆಂಗಳೂರು, ಆಗಸ್ಟ್ 19 : ಅನಧಿಕೃತ ಕೇಬಲ್ ಅವಳಡಿಕೆಯಿಂದ ನಷ್ಟ, ಕಸ ಸಾಗಣೆಯಲ್ಲಿ ಮೋಸ, ಅನಧಿಕೃತ ಜಾಹೀರಾತಿನಿಂದ ನಷ್ಟ, ಬೋಗಸ್ ಬಿಲ್ ಸೃಷ್ಟಿಸಿ ಹಣ ಲೂಟಿ, ತಪ್ಪಿದ ಸ್ಮಾರ್ಟ್ಸಿಟಿ, ಗುತ್ತಿಗೆದಾರರಿಗೆ ಬಿಲ್ ಬಾಕಿ, ಆಸ್ತಿ ಅಡಮಾನ...ಹೀಗೆ ಪಾಲಿಕೆಯಲ್ಲಿ 5 ವರ್ಷ ಆಡಳಿತ ನಡೆಸಿದ ಬಿಜೆಪಿ ವೈಫಲ್ಯಗಳ ಚಾರ್ಜ್ ಶೀಟ್ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ರೋಷನ್ ಬೇಗ್, ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಭೈರೇಗೌಡ ಅವರು 50 ಆರೋಪಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿದರು. 'ಬೆಂಗಳೂರಿಗೆ ನೀವೇನು ಕೊಡುಗೆ ಕೊಟ್ಟಿದ್ದೀರಿ?' ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. [ಬಿಬಿಎಂಪಿ ಚುನಾವಣೆ ಪ್ರಚಾರದ ಚಿತ್ರಗಳು]
5 ವರ್ಷ ಬಿಬಿಎಂಪಿಯಲ್ಲಿ ಆಡಳಿತ ನಡೆಸಿದ ಬಿಜೆಪಿ ಪಾಲಿಕೆ ಆಸ್ತಿಗಳನ್ನು ಅಡಮಾನ ಇಟ್ಟಿದೆ. ಹಲವಾರು ಹಗರಣ ನಡೆದಿದೆ.ವ್ಯಾಪಕ ಭ್ರಷ್ಟಾಚಾರ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ಕೈಪಿಡಿಯನ್ನು ಬಿಡುಗಡೆ ಮಾಡಿದೆ.
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ನಗರ ಅಭಿವೃದ್ಧಿಯಾಗಿಲ್ಲ. ತಾವು ಪ್ರಮಾಣಿಕರು ಎಂದು ಹೇಳುವ ಬಿಜೆಪಿ ನಾಯಕರು ಸುಳ್ಳು ಆಶ್ವಾಸನೆ ಕೊಡುತ್ತಿದ್ದಾರೆ ಎಂದು ಸಚಿವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿದ ಚಾರ್ಜ್ ಶೀಟ್ನಲ್ಲೇನಿದೆ?.......
ಕಸ ಸಾಗಣೆಯಲ್ಲಿ ಮೋಸವಾಗಿದೆ
ಪ್ರತಿವರ್ಷ ನಗರದ ಕಸ ವಿಲೇವಾರಿಗೆ 350 ಕೋಟಿ ವೆಚ್ಚ ಮಾಡಲಾಗುತ್ತಿದೆ. ಆದರೂ ನಗರದ ಕಸ ವಿಲೇವಾರಿ ಸಮಪರ್ಕವಾಗಿ ಆಗುತ್ತಿಲ್ಲ. ಇದರಲ್ಲಿ ಸಾವಿರಾರು ಕೋಟಿ ರೂ. ವಂಚನೆ ಆಗಿರುವುದಾಗಿ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಚಾರ್ಜ್ ಶೀಟ್ನಲ್ಲಿ ಕಾಂಗ್ರೆಸ್ ಹೇಳಿದೆ.
ಅನಧಿಕೃತ ಜಾಹೀರಾತಿನಿಂದ ನಷ್ಟ
ನಗರದಲ್ಲಿ ಜಾಹೀರಾತು ಫಲಕ ಪ್ರದರ್ಶನದಿಂದ ವಾರ್ಷಿಕ ಕೇವಲ 30 ಕೋಟಿ ರೂ. ಆದಾಯ ಬರುತ್ತಿದೆ. ಆದರೆ, 20 ಸಾವಿರ ಅನಧಿಕೃತ ಫಲಕಗಳನ್ನು ಅಳವಡಿಸಿರುವ ಬಗ್ಗೆ ಬಿಜೆಪಿ ಸದಸ್ಯರೇ ಆರೋಪಿಸಿದ್ದರೂ ಪಾಲಿಕೆಯಲ್ಲಿ ಆಡಳಿತ ನಡೆಸಿದವರು ಕ್ರಮ ಕೈಗೊಂಡಿಲ್ಲ.
ಆಸ್ತಿಗಳನ್ನು ಅಡಮಾನ ಇಡಲಾಗಿದೆ
ಪಾಲಿಕೆಯಲ್ಲಿ 5 ವರ್ಷ ಆಡಳಿತ ನಡೆಸಿದ ಬಿಜೆಪಿ ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ ಮಾರುಕಟ್ಟೆ, ಜಾನ್ಸನ್ ಮಾರುಕಟ್ಟೆ, ದಾಸಪ್ಪನವರ ಕಟ್ಟಡವನ್ನು ಅಡಮಾನವಿಟ್ಟು 3,580 ಕೋಟಿ ರೂ. ಸಾಲ ಪಡೆದಿದೆ. ಇದರಿಂದ ಪಾಲಿಕೆ ಮಾನ ಹರಾಜಾಗಿದೆ.
ವರ್ಕ್ ಕೋಡ್ ನೀಡುವಾಗ ವಂಚನೆ ಮಾಡಲಾಗಿದೆ
ಪಾಲಿಕೆಯ ವಿವಿಧ ಕಾಮಗಾರಿಗಳಿಗೆ ವರ್ಕ್ ಕೋಡ್ ನೀಡುವಾಗ ವಂಚನೆ ಮಾಡಲಾಗಿದೆ. 2008-09 ರಲ್ಲಿ ವರ್ಕ್ ಕೋಡ್ ಮೂಲಕ 2,406 ಕೋಟಿ ರೂ. ಕಾಮಗಾರಿ ನೀಡಿದ್ದರೆ 2009-10 ರಲ್ಲಿ ಈ ಮೊತ್ತವು ಏಕಾಏಕಿಯಾಗಿ 4,280 ಕೋಟಿ ರೂ. ಗೆ ಏರಿಕೆಯಾಗಿದೆ.
ನಕಲಿ ಬಿಲ್ ಸೃಷ್ಟಿಸಿ ಹಣ ಗುಳುಂ
ಯಲಹಂಕ ಏರ್ ಶೋ ಸಂದರ್ಭದಲ್ಲಿ ತುರ್ತು ಕಾಮಗಾರಿಗಾಗಿ 377 ಕೋಟಿ ರೂ. ಮಂಜೂರು ಮಾಡಲಾಗಿದೆ. ಪಾರದರ್ಶಕ ಕಾಯ್ದೆ ಅನ್ವಯ ಕಾರ್ಯ ನಿರ್ವಹಿಸದೆ ನಕಲಿ ಬಿಲ್ಗಳನ್ನು ಸೃಷ್ಟಿ ಮಾಡಿ ಹಣವನ್ನು ಗುಳುಂ ಮಾಡಲಾಗಿದೆ.
1,500 ಕಡತಗಳಿಗೆ ಬೆಂಕಿ
ಪಾಲಿಕೆಯಲ್ಲಿ ನಡೆದ ಅವ್ಯವಹಾರ ಹೊರಬೀಳುವ ಆತಂಕದಿಂದ ಪಾಲಿಕೆ ಕೇಂದ್ರ ಕಚೇರಿಯ ಬಿಎಂಟಿಎಫ್ ಕಚೇರಿ ಪಕ್ಕದ ಕಟ್ಟಡದಲ್ಲಿದ್ದ ಸುಮಾರು 1,500 ಕಡತಗಳನ್ನು ಸುಟ್ಟು ಹಾಕಲಾಗಿದೆ.
ಒತ್ತುವರಿ ತೆರವು ಮಾಡಿಲ್ಲ
ಬಾಲಸುಬ್ರಹ್ಮಣ್ಯಂ ಅವರು ನೀಡಿದ ವರದಿ ಪ್ರಕಾರ ನಗರದಲ್ಲಿ 25,994 ಎಕರೆ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಲು ಬಿಜೆಪಿ ಕ್ರಮ ಕೈಗೊಂಡಿಲ್ಲ. ಆದರೆ, ಕಾಂಗ್ರೆಸ್ ಆಡಳಿತಕ್ಕೆ ಬಂದ 2 ವರ್ಷದಲ್ಲಿ 4,800 ಎಕರೆ ಭೂ ಒತ್ತುವರಿಯನ್ನು ತೆರವುಗೊಳಿಸಿದೆ.
ಸ್ಮಾರ್ಟ್ ಸಿಟಿ ತಪ್ಪಿಸಿದ್ದು ನೀವು
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಂಗಳೂರು ಸೇರ್ಪಡೆಗೊಳ್ಳದಿರಲು ಬಿಜೆಪಿಯೇ ನೇರ ಹೊಣೆ. 5 ವರ್ಷ ಪಾಲಿಕೆಯಲ್ಲಿ ಅಧಿಕಾರ ನಡೆಸಿದ ಬಿಜೆಪಿ ನಾಯಕರು ಇದರ ಜಬಾಬ್ದಾರಿಯನ್ನು
ನರ್ಮ್ ಯೋಜನೆಯಲ್ಲಿ ಬಂದ ನೆರವು ಗುಳುಂ
ನರ್ಮ್ ಯೋಜನೆ ಅನುಷ್ಠಾನದಲ್ಲಿ ಪಾಲಿಕೆ ವಿಫಲವಾಗಿದೆ. ರಾಜಕಾಲುವೆಗಳ ಪುನರುಜ್ಜೀವನ ಹೆಸರಿನಲ್ಲಿ ನೂರಾರು ಕೋಟಿ ರೂ. ದುರುಪಯೋಗ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ್ದರೂ ಕಾಮಗಾರಿಯನ್ನು ಸರಿಯಾಗಿ ಪೂರ್ಣಗೊಳಿಸಿಲ್ಲ.
ಗುತ್ತಿಗೆದಾರರಿಗೆ ಬಿಲ್ ಕೊಟ್ಟಿಲ್ಲ
2013ರ ಮಾರ್ಚ್ನಿಂದ 2015ರ ಏಪ್ರಿಲ್ ವರೆಗೆ ಗುತ್ತಿಗೆದಾರರಿಗೆ ಪಾವತಿಸಬೇಕಾಗಿದ್ದ ಸುಮಾರು 2 ಸಾವಿರ ಕೋಟಿ ರೂ. ಬಿಲ್ ಪಾವತಿ ಮಾಡಿಲ್ಲ. ಇದರಿಂದ ಪಾಲಿಗೆ ಗೌರವಕ್ಕೆ ಧಕ್ಕೆ ಬಂದಿದೆ.