ಬಿಬಿಎಂಪಿ ಒತ್ತುವರಿ ತೆರವಿಗೆ ವೇಗ, ಯಲಹಂಕದಲ್ಲಿ 323 ಆಸ್ತಿ ವಶಕ್ಕೆ
ಬೆಂಗಳೂರು, ಡಿಸೆಂಬರ್ 15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭವಾಗಿದೆ. ಯಲಹಂಕವೊಂದರಲ್ಲೇ ರಾಜಕಾಲುವೆ ಹಾಗೂ ರಸ್ತೆ ಒತ್ತುವರಿಯನ್ನು ಮಾಡಿದ್ದ 323 ಆಸ್ತಿಗಳನ್ನು ಬಿಬಿಎಂಪಿ ಗುರುತು ಮಾಡಿದೆ. ಒಟ್ಟು 46.02 ಎಕರೆ ಒತ್ತುವರಿಯನ್ನು ತೆರವು ಮಾಡುವುದು ಸದ್ಯದ ಯೋಜನೆಯಲ್ಲಿದೆ.
ಕಳೆದ ಜುಲೈನಲ್ಲಿ ಸುರಿದ ಮಳೆಗೆ ಬೆಂಗಳೂರಿನ ಹಲವು ಭಾಗಗಳಲ್ಲಿ ಭಾರೀ ಸಮಸ್ಯೆಯಾಗಿತ್ತು. ಅದಾದ ನಂತರ ಕೆರೆ ಹಾಗೂ ರಾಜಕಾಲುವೆ ಒತ್ತುವರಿ ತೆರವಿಗೆ ನಿರ್ಧರಿಸಿದ ಬಿಬಿಎಂಪಿ, ಭಾರೀ ವೇಗದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಆದರೆ ಸೆಪ್ಟೆಂಬರ್ ನಂತರ ಕಾರ್ಯಾಚರಣೆ ವೇಗವನ್ನೇ ಕಳೆದುಕೊಂಡಿತ್ತು.
'ಬಿಬಿಎಂಪಿಯಲ್ಲಿ ಸರ್ವೇಯರ್ ಗಳು ಇಲ್ಲ. ಆದ್ದರಿಂದ ಒತ್ತುವರಿ ಭೂಮಿಯನ್ನು ಗುರುತಿಸುವುದಕ್ಕೆ ಕಂದಾಯ ಇಲಾಖೆ ಸರ್ವೇಯರ್ ಗಳ ಮೇಲೆ ಅವಲಂಬಿತರಾಗಬೇಕಿದೆ. ಕಳೆದ ಎರಡು ತಿಂಗಳಲ್ಲಿ ನಮಗೆ ನೀಡಿದ್ದ ಸರ್ವೇಯರ್ ಗಳನ್ನು ವರ್ಗಾವಣೆ ಮಾಡಲಾಗಿದೆ' ಎಂದು ಬಿಬಿಎಂಪಿ ಕಮಿಷನರ್ ಎನ್.ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
'ನಾವು ಒತ್ತಡ ತಂದು 12 ಸರ್ವೇಯರ್ ಗಳನ್ನು ನಮಗಾಗಿ ನೇಮಿಸುವಂತೆ ಮಾಡಲು ಸಫಲರಾಗಿದ್ದೀವಿ. ಇನ್ನೂ ಹದಿನೈದು ಸರ್ವೇಯರ್ ಗಳು ಈ ವಾರ ಸೇರಿಕೊಳ್ತಾರೆ. ಒತ್ತುವರಿ ತೆರವು ಕಾರ್ಯಾಚರಣೆ ಯವುದೇ ಅಡೆತಡೆ ಇಲ್ಲದೆ ನಡೆಯಬೇಕು ಅಂದರೆ ನಮಗೆ ಬೆಂಬಲದ ಅಗತ್ಯವಿದೆ ಎಂಬುದನ್ನು ತಿಳಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.
ಮುನ್ನೂರಕ್ಕೂ ಹೆಚ್ಚು ಮನೆಗಳು ಕಳೆದ ಜುಲೈನಲ್ಲಿ ಸುರಿದ ಮಳೆ ವೇಳೆ ಮುಳುಗಿದ್ದವು. ಆ ನಂತರ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಒತ್ತುವರಿ ತೆರವು ಮಾಡಲು ವಿಫಲವಾಗಿದ್ದಾರೆ. ಯೋಜನೆ ಸರಿಯಾಗಿಲ್ಲ. ಅದ್ದರಿಂದಲೇ ನಗರದಲ್ಲಿ ಪ್ರವಾಹ ಸ್ಥಿತಿ ಉಂಟಾಯಿತು ಎಂದು ಆರೋಪಿಸಿದ್ದರು.