ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಜಾಗದ ಕೊರತೆ: ಕಸವನ್ನು ಎಲ್ಲಿ ಹಾಕಬೇಕು?
ಬೆಂಗಳೂರು, ಏಪ್ರಿಲ್ 24: ವಾರ್ಡ್ ಮಟ್ಟದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ತೆರೆಯಲು ಜಾಗವಿಲ್ಲದೆ ಅಧಿಕಾರಿಗಳು ಪರದಾಡುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ನಿರ್ಮಾಣದ ಸಂದರ್ಭದಲ್ಲೂ ಕೂಡ ಇದೇ ಸಮಸ್ಯೆ ಎದುರಾಗಿತ್ತು. ಹಾಗಾಗಿ ಕೆಲವು ವಾರ್ಡ್ ಗಳಲ್ಲಿ ಮೊಬೈಲ್ ಕ್ಯಾಂಟೀನ್ ಗಳನ್ನು ತೆರೆಯಲಾಗಿದೆ.
ಹೀಗಾಗಿ ತ್ಯಾಜ್ಯ ನಿವಾರಣೆಗೆ ಹೈಕೋರ್ಟ್ ನೀಡಿರುವ ನಿರ್ದೇಶನ ಪಾಲಿಸಲಾಗದೆ ಅಧಿಕಾರಿಗಳು ತೊಂದರೆಗೆ ಸಿಲುಕಿದ್ದಾರೆ. ತ್ಯಾಜ್ಯ ಸಮಸ್ಯೆಯನ್ನು ಮೂಲದಲ್ಲೇ ನಿವಾರಿಸಲು ಬಿಬಿಎಂಪಿ ಹಲವು ಕಸರತ್ತು ಮಾಡುತ್ತಿದೆ.
ಮಂಡೂರಿಗೆ ಬಿಬಿಎಂಪಿ ತ್ಯಾಜ್ಯ ಆಯ್ತು ಈಗ ಬಿಎಂಟಿಸಿ ತ್ಯಾಜ್ಯದ ತಲೆಬಿಸಿ
ಆದರೆ, ಅದರಲ್ಲಿ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಹೈಕೋರ್ಟ್ ಕೂಡ ಬಿಬಿಎಂಪಿ ಕಾರ್ಯವೈಖರಿಗೆ ಹಲವು ಬಾರಿ ತರಾಟೆ ತೆಗೆದುಕೊಂಡಿದೆ. ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಿಸಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದೆ.
ಜತೆಗೆ ಪ್ರತಿ ವಾರ್ಡ್ ನಲ್ಲೂ ಹಸಿ ತ್ಯಾಜ್ಯ ಸಂಸ್ಕರಣೆ ಮಾಡಲು ಕಿರು ಘಟಕ ಸ್ಥಾಪಿಸಲು ನಿರ್ದೇಶನ ನೀಡಿದೆ. ಆದರೆ, ವಾರ್ಡ್ ಮಟ್ಟದಲ್ಲಿ ಸೂಕ್ತ ಸ್ಥಳಾವಕಾಶ ಸಿಗುತ್ತಿಲ್ಲ. ಹೀಗಾಗಿ ಮುಂದೇನು ಮಾಡಬೇಕೆಂದು ತೋಚದೆ ವಾಸ್ತವ ಸ್ಥಿತಿಯನ್ನು ಹೈಕೋರ್ಟ್ ಗೆ ತಿಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
10 ಸಾವಿರ ಚದರ ಅಡಿ ಜಾಗಬೇಕು: ಘಟಕ ಸ್ಥಾಪಿಸಲು ಕನಿಷ್ಠ 10 ಸಾವಿರ ಚದರ ಅಡಿ ಜಾಗ ಬೇಕು. ಅದರ ಜತೆಗೆ ಘಟಕದ ಸುತ್ತ ಸಂರಕ್ಷಿತ ವಲಯ ನಿಗದಿ ಮಾಡಬೇಕುಆದರೆ, ಬಿಬಿಎಂಪಿಗೆ ಸೇರಿದ ಅಷ್ಟು ದೊಡ್ಡ ಜಾಗ ಸಿಗುತ್ತಿಲ್ಲ.
20 ವಾರ್ಡ್ ಗಳಲ್ಲಷ್ಟೇ ಜಾಗ: 198 ವಾರ್ಡ್ ಗಳಲ್ಲಿ ಈವರೆಗೆ 20 ವಾರ್ಡ್ ಗಳಲ್ಲಿ ಮಾತ್ರ ಜಾಗ ಸಿಕ್ಕಿದೆ. ಯಲಹಂಕ, ಮಹದೇವಪುರ, ಕೆ.ಆರ್. ಪುರ ಸೇರಿದಂತೆ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿದರೆ ನಗರದೊಳಗಿನ ಕ್ಷೇತ್ರಗಳಲ್ಲಿ ಜಾಗದ ಕೊರತೆ ಎದುರಾಗಿದೆ.