ಕರ್ನಾಟಕ ಬಂದ್ಗೆ ಬಿಬಿಎಂಪಿ ಸದಸ್ಯರ ಬೆಂಬಲ
ಬೆಂಗಳೂರು, ಸೆಪ್ಟೆಂಬರ್ 08 : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ಬಂದ್ಗೆ ಬೆಂಬಲ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ (ಬಿಬಿಎಂಪಿ) ಬಿ.ಎನ್.ಮಂಜುನಾಥ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಶುಕ್ರವಾರ ಬಿಬಿಎಂಪಿಯ ಎಲ್ಲಾ 198 ವಾರ್ಡ್ಗಳಲ್ಲಿ ಬಿಬಿಎಂಪಿ ಸದಸ್ಯರ ನೇತೃತ್ವದಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.[ಟೆಕ್ಕಿಗಳ ರಜೆ ಮಜಾ ಹಾಳು, ಬಂದ್ ಮಾಡೋಣ ಬನ್ನಿ]
'ಆಡಳಿತ ಪಕ್ಷವಾದ ಕಾರಣ ನಾವು ಪಾಲ್ಗೊಳ್ಳದಿದ್ದರೂ ಹೋರಾಟಕ್ಕೆ ನಮ್ಮ ಬೆಂಬಲವಿರುತ್ತದೆ. ಕಾವೇರಿ ನದಿ ನೀರು ಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಸುಪ್ರೀಂಕೋರ್ಟ್ ಮೊರೆ ಹೋಗಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ' ಎಂದು ಮೇಯರ್ ತಿಳಿಸಿದ್ದಾರೆ.[ಸೆ.9ರ ಕರ್ನಾಟಕ ಬಂದ್ ಬಿಸಿ ಎಲ್ಲಿಗೆ ತಟ್ಟಲಿದೆ?]
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
2 ಸಾವಿರ ಸಂಘಟನೆಗಳ ಬೆಂಬಲ : 'ಶುಕ್ರವಾರದ ಕರ್ನಾಟಕ ಬಂದ್ಗೆ 2 ಸಾವಿರ ಸಂಘಟನೆಗಳು ಬೆಂಬಲ ನೀಡಿವೆ. ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ನಡೆಯಲಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಎಲ್ಲರಿಗೂ ಕರೆ ನೀಡಿದ್ದೇವೆ' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.