ಈದ್ಗಾ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಬಹುದಿತ್ತು: ಸಿಟಿ ರವಿ
ಬೆಂಗಳೂರು, ಆಗಸ್ಟ್ 1: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತ್ಯತೀತತೆಯ ಪ್ರಕಾರ ಇಂದಿರಾ ಕ್ಯಾಂಟೀನ್ ಗಾಗಿ ದೇವಾಲಯದ ಗೋಡೆಯನ್ನು ಬೀಳಿಸುವುದಕ್ಕೆ ಅಭ್ಯಂತರವಿಲ್ಲ, ಆದರೆ ಖಾಲಿ ಇರುವ ಈದ್ಗಾ ಮೈದಾನವನ್ನು ಮಾತ್ರ ಮುಟ್ಟುವಂತಿಲ್ಲ!' ಇದು ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರ ವ್ಯಂಗ್ಯಭರಿತ ಪ್ರತಿಕ್ರಿಯೆ.
ಆಗಸ್ಟ್ 15ರಿಂದ 125 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭ : ಸಿದ್ದರಾಮಯ್ಯ
ಇಂದಿರಾ ಕ್ಯಾಂಟೀನ್ ಗಾಗಿ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಬಳಿಯಿರುವ ರಾಮೇಶ್ವರ ದೇಗುಲದ ಗೋಡೆಯನ್ನು ಕೆಡವಿರುವ ಸರ್ಕಾರದ ನಡೆಯ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವ ಸಿ.ಟಿ.ರವಿ ಅವರು ಸಿದ್ದು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಬಳಿಯಿರುವ ರಾಮೇಶ್ವರ ದೇಗುಲದ ಗೋಡೆಯನ್ನು ಜುಲೈ 31ರ ರಾತ್ರಿಯೇ ಕೆಡವಲಾಗಿದೆ, ಹಳೆಯ ಮರಗಳನ್ನು ಕೂಡ ಕತ್ತರಿಸಲಾಗಿದೆ. ಬಡವರಿಗೆ ಕಡಿಮೆ ಬೆಲೆಯಲ್ಲಿ ಊಟ ಒದಗಿಸುವ 'ಇಂದಿರಾ ಕ್ಯಾಂಟೀನ್' ತೆರೆಯುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಾಗಿ ಈ ಸ್ಥಳವನ್ನು ಬಳಸಿಕೊಳ್ಳಲಾಗುತ್ತಿದೆ.
ಇಂದಿರಾ ಕ್ಯಾಂಟೀನ್ ನ ಮೆನು, ದರ ಮತ್ತಿತರ ಮಾಹಿತಿ
ಐತಿಹಾಸಿಕ ಹೆಗ್ಗುರುತಾಗಿರುವ 300 ವರ್ಷ ಪುರಾತನ ಹಿಂದೂ ಮಂದಿರದ ಆವರಣದಲ್ಲಿ 'ಇಂದಿರಾ ಕ್ಯಾಂಟೀನ್' ಏಕೆ ನಿರ್ಮಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಅವರ ಮೇಲೆ ಮಾಜಿ ಬಿಬಿಎಂಪಿ ಸದಸ್ಯ ಚಂದ್ರಶೇಖರ್ ಹಲ್ಲೆಗೆ ಯತ್ನಿಸಿದ ಗಲಾಟೆಯ ಬೆನ್ನಲ್ಲೇ ಸಿಟಿ ರವಿ ನೀಡಿರುವ ಈ ಹೇಳಿಕೆಗೆ ಹಿಂದುಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ದೇವಾಲಯದ ಗೋಡೆ ಕೆಡವಿ ಇಂದಿರಾ ಕ್ಯಾಂಟೀನ್ ಕಟ್ಟುತ್ತಿರುವ ಕುರಿತು ವಿರೋಧ ವ್ಯಕ್ತಪಡಿಸಿದ ಅವರ ಸಾಲು ಸಾಲು ಟ್ವೀಟ್ ಗಳು ಇಲ್ಲಿವೆ...
ಈದ್ಗಾ ಮೈದಾನ ಮುಟ್ಟಬಾರದೇಕೆ?
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತ್ಯತೀತತೆಯ ಪ್ರಕಾರ ಇಂದಿರಾ ಕ್ಯಾಂಟೀನ್ ಗಾಗಿ ದೇವಾಲಯದ ಗೋಡೆಯನ್ನು ಕೆಡಹುವುದಕ್ಕೆ ಅಭ್ಯಂತರವಿಲ್ಲ, ಆದರೆ ಖಾಲಿ ಇರುವ ಈದ್ಗಾ ಮೈದಾನವನ್ನು ಮಾತ್ರ ಮುಟ್ಟುವಂತಿಲ್ಲ !'
|
ಈದ್ಗಾ ಮೈದಾನದಲ್ಲಿ ಕಟ್ಟಿ!
ಇಂದಿರಾ ಕ್ಯಾಂಟೀನ್ ಅನ್ನು ರಾಮೇಶ್ವರ ದೇವಾಲಯದ ಆವರಣದಲ್ಲಿ ಕಟ್ಟುವ ಬದಲು, ಬಿಬಿಎಂಪಿ ಅದನ್ನು ಖಾಲಿ ಇರುವ ಈದ್ಗಾ ಮೈದಾನದಲ್ಲಿ ಕಟ್ಟಬಹುದಲ್ಲ..?
|
ಕ್ಯಾಂಟೀನ್ ಓಕೆ? ದೇವಾಲಯದ ಆವರಣದಲ್ಲೇ ಯಾಕೆ?
"ಬಡವರಿಗಾಗಿ ಕ್ಯಾಂಟೀನ್ ನಿರ್ಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಆದರೆ ಅದಕ್ಕಾಗಿ ದೇವಾಲಯದ ಆವರಣಗಳನ್ನು ಉಪಯೋಗಿಸಿಕೊಳ್ಳುವುದನ್ನು ನಾನು ಒಪ್ಪುವುದಿಲ್ಲ"
|
ಖಂಡಿಸುತ್ತೇನೆ
ಚಾಮರಾಜಪೇಟೆಯ ಶ್ರೀ ರಾಮೇಶ್ವರ ದೇವಾಸ್ಥಾನದ ಗೋಡೆ ಕೆಡವಿ ಅದರ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಹೊರಟಿರುವ ಬಿಬಿಎಂಪಿ ಕ್ರಮವನ್ನು ಖಂಡಿಸುತ್ತೇನೆ.
|
ದೇವಾಲಯದ ಪಾವಿತ್ರ್ಯ ಹಾಳಾಗುವುದಿಲ್ಲವೇ?
ದೇವಾಲಯದ ಆವರಣದಲ್ಲಿ ಕ್ಯಾಂಟೀನ್ ನಿರ್ಮಿಸುವುದರಿಂದ ದೇವಾಲಯದ ಪಾವಿತ್ರ್ಯ ಮತ್ತು ದೈವತ್ವ ಹಾಳಾಗುತ್ತದೆ ಎಂಬ ಕನಿಷ್ಠ ಪರಿಜ್ಞಾನ ಮಾನ್ಯ ಮುಖ್ಯಮಂತ್ರಿಗಳಿಗಿಲ್ಲವೇ?