ಬಿಬಿಎಂಪಿ: ತ್ಯಾಜ್ಯ ಗುತ್ತಿಗೆದಾರರ ಪ್ರತಿಭಟನೆ ಹಿಂದಕ್ಕೆ
ಬೆಂಗಳೂರು, ಜೂನ್ 12: ಬಾಕಿ ಹಣ ಪಾವತಿ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಡಿಸಿಎಂ ಡಾ.ಜಿ. ಪರಮೇಶ್ವರ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ಆಟೋ ಮತ್ತು ಲಾರಿ ಮಾಲಿಕರು, ಗುತ್ತಿಗೆದಾರರು ಪ್ರತಿಭಟನೆ ಹಿಂಪಡೆದಿದ್ದಾರೆ.
ಬಾಕಿ ಬಿಲ್ ಪಾವತಿ, ಬಾಡಿಗೆ ದರ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ತ್ಯಾಜ್ಯ ವಿಲೇವಾರಿ ಆಟೋ ಮತ್ತು ಲಾರಿ ಮಾಲೀಕರು, ಗುತ್ತಿಗೆದಾರರು ಸೋಮವಾರ ನಗರಾದ್ಯಂತ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು. ಬೇಡಿಕೆ ಈಡೇರಿಸುವವರೆಗೆ ಕಸ ವಿಲೇವಾರಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಬಿಬಿಎಂಪಿ ಗುತ್ತಿಗೆದಾರರ ಬಾಕಿ ಹಣ ಪಾವತಿಸುತ್ತೇವೆ :ಜಿ. ಪರಮೇಶ್ವರ್
ಕಳೆದ ಐದು ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ 220 ಕೋಟಿ ಬಿಲ್ ಮೊತ್ತ ಪಾವತಿ ಮಾಡಲಾಗುವುದು ಎಂದು ಸಭೆಯಲ್ಲಿ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದಿದ್ದಾರೆ. ಸಂಧಾನ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಿ. ಪರಮೇಶ್ವರ್ ಗುತ್ತಿಗೆದಾರರು ಸಮಸ್ಯೆಯಿದ್ದರೆ ಉನ್ನತ ಅಧಿಕಾರಿಗಳು, ಸರ್ಕಾರದೊಂದಿಗೆ ಮಾತನಾಡಬೇಕು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು ಹಾಗೆ ಮಾಡಿದರೆ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂದರು.
ಕಸ ವಿಲೇವಾರಿ ನಡೆಸದೆ ಪ್ರತಿಭಟನೆ ನಡೆಸಿದ್ದರಿಂದ 198 ವಾರ್ಡ್ಗಳಲ್ಲಿ ಬೃಹತ್ ಪ್ರಮಾಣದ ಕಸ ವಿಲೇವಾರಿಯಾಗದೆ ರಸ್ತೆ ಬದಿಯಲ್ಲೇ ಉಳಿಯಿತು. ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ಕಸ ವಿಲೇವಾರಿ ಆಗದೆ ದುರ್ವಾಸನೆ ಬೀರುತ್ತಿತ್ತು.