ಅನಧಿಕೃತ ಫ್ಲೆಕ್ಸ್ ತೆರವು: ರಾಜಕಾರಣಿಗಳಿಗೆ ಅನ್ವಯ ಆಗಲ್ವಾ?
ಬೆಂಗಳೂರು, ಜನವರಿ 06 : ಬಿಬಿಎಂಪಿ ಮೇಯರ್ ಸಂಪತ್ ರಾಜ್ ಈಗಾಗಲೇ ಅನಧಿಕೃತ ಫ್ಲೆಕ್ಸ್ ಗಳನ್ನು ತೆರವುಗೊಳಿಸಲು ಜನವರಿ 6 ರವರೆಗೆ ಗುಡುವು ನೀಡಿದ್ದರಾದರೂ. ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಗಳು ಎಲ್ಲೆಲ್ಲೂ ರಾರಾಜಿಸುತ್ತಿದೆ.
ಶಾಂತಿ ನಗರ ಶಾಸಕ ಎನ್.ಎ. ಹ್ಯಾರಿಸ್ ಹಾಗೂ ಬಿಜೆಪಿ ಟಿಕೇಟ್ ಆಕಾಂಕ್ಷಿ ಶ್ರೀಧರ್ ರೆಡ್ಡಿ ಎನ್ನುವವರು ಹೊಸ ವರ್ಷದ ನಿಮಿತ್ತ ಹಾಕಿರುವ ಫ್ಲೆಕ್ಸ್ ಗಳು ಟ್ರಾಫಿಕ್ ಸಿಗ್ನಲ್ ಗಳನ್ನೇ ಮರೆಮಾಚುವಂತೆ ನೇತಾಡುತ್ತಿದ್ದರೂ, ಇಲ್ಲಿವರೆಗೂ ಕೂಡ ತೆರವುಗೊಳಿಸುವ ಧೈರ್ಯವನ್ನು ಮಾಡುತ್ತಿಲ್ಲ.
ಶಾಂತಿನಗರ: ಬಿಜೆಪಿ ನಾಯಕರ ಫ್ಲೆಕ್ಸ್ ಗಳಿಗೂ ಟ್ರಾಫಿಕ್ ಸಿಗ್ನಲ್ಲೇ ಬೇಕು!
ಒಂದೆಡೆ ಅಕ್ರಮ ಫ್ಲೆಕ್ಸ್ ಗಳ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಅಧಿಕಾರಿಗಳು, ಖಾಸಗಿ ಕಂಪನಿಗಳ ಫ್ಲೆಕ್ಸ್ ಹಾಗೂ ಬ್ಯಾನರ್ಗಳನ್ನು ತೆರವುಗೊಳಿಸುವಲ್ಲಿ ಬ್ಯುಸಿ ಆಗಿದ್ದರೆ ಟ್ರಾಫಿಕ್ ಪೊಲೀಸರು ಇದ್ಯಾವುದೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ಶಾಸಕ ಹ್ಯಾರಿಸ್ ಗೆ ಸಂಬಂಧಿಸಿದ ಫ್ಲೆಕ್ಸ್ ಗಳನ್ನು ತೆರವುಗೊಳಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ನಾಗರಿಕರು ಒತ್ತಾಯಿಸಿದ್ದರೂ ಬಹುತೇಕ ಟ್ವಿಟ್ಟರ್ ಅಕೌಂಟ್ ಗಳನ್ನು ಹೊಂದಿರುವ ಠಾಣೆಗಳೂ ಎಲ್ಲವೂ ತಿಳಿಸರೂ ಯಾವುದೂ ತಿಳಿದಿಲ್ಲ ಎಂಬಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಶಾಸಕರು, ಕಾರ್ಪೊರೇಟ್ ಗಳು ಹಾಗೂ ರಾಜಕೀಯ ಪುಡಾರಿಗಳು ಅಕ್ರಮವಾಗಿ ಬ್ಯಾನರ್, ಫ್ಲೆಕ್ಸ್ ಗಳನ್ನು ತಮಗೆ ಬೇಕಾದಂತೆ ಯಾವಾಗ ಬೇಕಾದರೂ ನಗರದಲ್ಲಿ ಹಾಕಿಕೊಳ್ಳಬಹುದು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಖಾಸಗಿ ಕಂಪನಿಗಳು ತಮ್ಮ ಕಂಪನಿ ಉತ್ಪನ್ನಗಳು ಹಾಗೂ ಕಾರ್ಯಕ್ರಮಗಳ ಕುರಿತಾಗಿ ಬಂಟಿಂಗ್ಸ್ ಹಾಗೂ ಬ್ಯಾನರ್ ಗಳನ್ನು ಹಾಕಲು ಬಿಬಿಎಂಪಿಗೆ ಲಕ್ಷಾಂತರ ರೂ. ಹಣವನ್ನು ಪಾವತಿಸಬೇಕು ಆದರೆ ಶಾಸಕರು, ಕಾರ್ಪೊರೇಟರ್ ಗಳು ರಾಜಕೀಯ ವ್ಯಕ್ತಿಗಳು ತಮ್ಮ ವಯಕ್ತಿಕ ಹಾಗೂ ಪಕ್ಷಗಳ ಪ್ರಚಾರಕ್ಕಾಗಿ ಫ್ಲೆಕ್ಸ್ ಗಳನ್ನು ಅಳವಡಿಸಿದರೆ ಬಿಡಿಗಾಸನ್ನು ಪಾವತಿ ಮಾಡುತ್ತಿಲ್ಲ.
ಶಾಸಕ ಹ್ಯಾರಿಸ್ ಅವರೇ ನಿಮ್ಮ ಶುಭಾಶಯ ಬೇಕು ಆದರೆ ಹೀಗಲ್ಲ!
ಇದೆಲ್ಲ ತಿಳಿದಿರುವ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಕೂಡ ರಾಜಕಾರಣಿಗಳ ಫ್ಲೆಕ್ಸ್ ಹಾಗೂ ಬ್ಯಾನರ್ ಗಳ ಕಡೆಗೆ ತಲೆ ಕೆಡಿಸಿಕೊಳ್ಳದೆ, ಕೇವಲ ಕಮರ್ಷಿಯಲ್ ಫ್ಲೆಕ್ಸ್ ಗಳು ಮತ್ತು ಜಾಹಿರಾತು ಫಲಕಗಳ ಬಗ್ಗೆ ದೃಷ್ಟಿಬೀರುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಅಕ್ರಮ ಫ್ಲೆಕ್ಸ್ ಹಾಗೂ ಬ್ಯಾನರ್ ಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಮಾತ್ರವಲ್ಲದೆ ಟ್ರಾಫಿಕ್ ಪೊಲೀಸರು ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.