ಬನ್ನೇರುಘಟ್ಟ ಉದ್ಯಾನದ ಗೇಟ್ ಗಳಿಗೆ ಸೆನ್ಸರ್ ಅಳವಡಿಕೆ
ಬೆಂಗಳೂರು, ಜನವರಿ 23: ಬನ್ನೇರುಘಟ್ಟ ಉದ್ಯಾನದ ಗೇಟ್ ಗಳಿಗೆ ಶೀಘ್ರವೇ ಸೆನ್ಸರ್ ಅಳವಡಿಸಲಾಗುತ್ತದೆ. ಇದರಿಂದ ಒಂದು ಆವರಣದಿಂದ ಪ್ರಾಣಿಗಳು ಇನ್ನೊಂದಕ್ಕೆ ನುಗ್ಗಿ ಅನಾಹುತವಾಗುವ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿವಿಧ ಸಫಾರಿಗಳಲ್ಲಿ ಗೇಟ್ ಗಳು ಸೆನ್ಸರ್ ನೆರವಿನಿಂದ ತೆರೆಯುವ ಹಾಗೂ ಮುಚ್ಚುವ ವ್ಯವಸ್ಥೆ ಶೀಘ್ರ ಜಾರಿಗೊಳ್ಳಲಿದೆ. ಪ್ರತಿ ಸಫಾರಿ ವಲಯ ಪ್ರವೇಶ ದ್ವಾರ ಹಾಗೂ ನಿರ್ಗಮನ ದ್ವಾರ ಎರಡು ಗೇಟ್ ಗಳನ್ನು ಹೊಂದಿದ್ದು, ವಾಹನಗಳು ಪ್ರವೇಶುವಾಗ ಪ್ರಾಣಿಗಳು ಹೊರಹೋಗದಂತೆ ತಡೆಯುವ ರೀತಿಯಲ್ಲಿ ರೂಪಿಸಲಾಗಿದೆ. ಹೀಗಿದ್ದರೂ ಸಫಾರಿ ವಹನಗಳು ಸಾಗುವಾಗ ಪ್ರಾಣಿಗಳು ಇನ್ನೊಂದು ಆವರಣಕ್ಕೆ ಪ್ರವೇಶಿಸಿ ಅನಾಹುತ ಉಂಟಾದ ಹಲವು ಉದಾಹರಣೆಗಳಿವೆ.
ಬನ್ನೇರುಘಟ್ಟಕ್ಕೆ ಅಕ್ರಮ ಪ್ರವೇಶ, ಸೆಲ್ಫಿ ತೆಗೆಯುವಾಗ ಆನೆಯಿಂದ ಸಾವು
ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಹಿಡಿದು ಅವುಗಳನ್ನು ಆವರಣಕ್ಕೆ ಸೇರಿಸುವುದು ಸಿಬ್ಬಂದಿಗೆ ಕಷ್ಟದ ಕೆಲಸವಾಗಿದೆ. ಆಯಾ ಸಫಾರಿಯಲ್ಲಿ ಒಬ್ಬನೇ ಗೇಟ್ ಆಪರೇಟರ್ ಗೇಟ್ ತೆರೆಯುವುದು ಮತ್ತು ಮುಚ್ಚುವ ಕೆಲಸವನ್ನು ಮಾಡಲು ಕಷ್ಟ ಎಂಬುದನ್ನು ಅರಿತು ಉದ್ಯಾನದ ಆಡಳಿತ ಮಂಡಳಿ ಹೊಸ ವ್ಯವಸ್ಥೆ ಪರಿಷಯಿಸಲು ಮುಂದಾಗಿದೆ.
ಇತ್ತೀಚೆಗೆ ಎರಡು ಬಿಳಿ ಹುಲಿಗಳು ಸಪಾರಿ ವಾಹನದ ಜತೆ ಸಾಗಿ ರಾಯಲ್ ಬೆಂಗಾಲ್ ಹುಲಿಗಳಿರುವ ಆವರಣ ಪ್ರವೇಶಿಸಿದ್ದವು. ತಮ್ಮ ಆವರಣ್ಕೆ ಬೇರೆ ಹುಲಿಗಳು ಪ್ರವೇಶಿಸಿದ್ದನ್ನು ಕಂಡು ರಾಯಲ್ ಹುಲಿಗಳು ಬಿಳಿ ಹುಲಿಗಳ ಮೇಲೆ ದಾಳಿ ಮಾಡಿದ್ದವು.
ಬಿಳಿ ಹುಲಿಗಳನ್ನು ಅದರದೇ ಸ್ಥಾನಕ್ಕೆ ಸೇರಿಸಲು ಸಿಬ್ಬಂದಿ ಹರಸಾಹಸ ಪಡೆಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಎಲ್ಲ ಸಫಾರಿಗಳಲ್ಲಿ ಹೊಸ ಗೇಟ್ ಗಳನ್ನು ಅಳವಡಿಸಲಾಗುತ್ತದೆ. ಆಗಮನದ ಗೇಟ್ ಮುಚ್ಚಿದ್ದಲ್ಲಿ ಮಾತ್ರ ನಿರ್ಗಮನದ ಗೇಟ್ ತೆರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಪ್ರಾಣಿಗಳು ಸಫಾರಿ ವಾಹನದೊಂದಿಗೆ ಬೇರೆ ಆವರಣಕ್ಕೆ ನುಗ್ಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಳಿ ಹುಲಿ, ಬೆಂಗಾಲ್ ಟೈಗರ್, ಸಿಂಹ, ಕರಡಿ ಮತ್ತು ಸಸ್ಯಾಹಾರಿ ಪ್ರಾಣಿಗಳ ಸಫಾರಿ ಇದೆ. ಹೊಸ ವ್ಯವಸ್ಥೆ ಪ್ರಾಯೋಗಿಕ ಪರೀಕ್ಷೆಯನ್ನು ಈಗಾಗಲೇ ನಡೆಸಲಾಗಿದೆ. ಜನವರಿ ಕೊನೆಯ ವಾರದಲ್ಲಿ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ.