ಬೆಂಗಳೂರು ವಿ.ವಿ. ಉಪ ಕುಲಪತಿಯಾಗಿ ಕೆ.ಆರ್.ವೇಣುಗೋಪಾಲ್ ನೇಮಕ
ಬೆಂಗಳೂರು, ಜೂನ್.13 : ಸುಮಾರು ಎರಡು ವರ್ಷಗಳಿಂದ ಖಾಲಿ ಇರುವ ಬೆಂಗಳೂರು ವಿವಿಗೆ ಕೊನೆಗೂ ಹೊಸ ಉಪ ಕುಲಪತಿ ನೇಮಕಗೊಂಡಿದ್ದಾರೆ. ನಗರದ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ)ಯ ಪ್ರಾಂಶುಪಾಲ ಪ್ರೊ. ಕೆ ಆರ್ ವೇಣುಗೋಪಾಲ್ ನೂತನ ಉಪ ಕುಲಪತಿಯಾಗಿ ನೇಮಕಗೊಂಡಿದ್ದಾರೆ.
ಪ್ರೋ. ತಿಮ್ಮೇಗೌಡ ನಿವೃತ್ತಿ ಬಳಿಕ ಉಪ ಕುಲಪತಿ ಹುದ್ದೆ ಖಾಲಿ ಬಿದ್ದಿತ್ತು. ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ಹೊಸ ಉಪ ಕುಲಪತಿ ನೇಮಕ ಪ್ರಕ್ರಿಯೆ ಆರಂಭಗೊಂಡಿದ್ದರೂ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಣ ಗುದ್ದಾಟದಿಂದ ಇದು ವಿಳಂಬಗೊಂಡಿತ್ತು.
ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ: ಆಗಸ್ಟ್ ನಿಂದ ಹೊಸ ವಿವಿಗಳ ಕಾರ್ಯಾರಂಭ
ಇದೀಗ ರಾಜ್ಯಪಾಲರು ವೇಣುಗೋಪಾಲ್ ನೇಮಕ ಮೂಲಕ ಹುದ್ದೆ ಭರ್ತಿ ಮಾಡಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ನೇಮಕಾತಿ ರಾಜ್ಯದ ನೂತನ ಉನ್ನತ ಶಿಕ್ಷಣ ಸಚಿವರಾಗಿ ಜಿ ಟಿ ದೇವೇಗೌಡ ಅಧಿಕಾರ ಸ್ವೀಕರಿಸಲು ಮೀನಾಮೇಷ ಎಣಿಸುತ್ತಿರುವಾಗಲೇ ನಡೆದಿದೆ.
ಇನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಉಪಕುಲಪತಿಯಾಗಿ ಡಾ. ಎಸ್. ಸಚ್ಚಿದಾನಂದ ನೇಮಕಗೊಂಡಿದ್ದಾರೆ. ಈವರೆಗೆ ಅವರು ರಾಜ್ಯ ವೈದ್ಯಕೀಯ ಶಿಕ್ಷಣ ನಿದೇಶಕರಾಗಿದ್ದರು. ಇವರೂ ಕೂಡ ರಾಜ್ಯಪಾಲರ ಆಯ್ಕೆ ಎನ್ನಲಾಗುತ್ತಿದೆ.