ನಾಟಕ ನೋಡಿ, ಕೇರಳ, ಕೊಡಗು ಪ್ರವಾಹಕ್ಕೆ ದೇಣಿಗೆ ನೀಡಿ
ಬೆಂಗಳೂರು, ಆಗಸ್ಟ್ 21: ರಂಗಕರ್ಮಿ ವೆಂಕಟೇಶ್ ಪ್ರಸಾದ್ ಅವರ ನೇತೃತ್ವದ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಸಂಸ್ಥೆಯ ಜನಪ್ರಿಯ ರಂಗ ಪ್ರಯೋಗ 'ಒಂದು ಪ್ರೀತಿಯ ಕಥೆ' ಈ ವಾರದಲ್ಲಿ ನಗರದ ಎರಡು ಕಡೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕ ಪ್ರದರ್ಶನದಿಂದ ಬರುವ ಹಣವನ್ನು ಕೇರಳ ಹಾಗೂ ಕೊಡಗು ಪ್ರವಾಹ ಸಂತ್ರಸ್ತರಿಗೆ ನೀಡುವುದಾಗಿ ನಾಟಕ ತಂಡ ಪ್ರಕಟಿಸಿದೆ.
ಕೊಡಗು, ಕೇರಳ ಸಂತ್ರಸ್ತರ ನಿಧಿಗೆ ನಮ್ಮ 'ಒಂದು ಪ್ರೀತಿಯ ಕಥೆ' ನಾಟಕದ ಮುಂದಿನ ಎರಡು ಪ್ರದರ್ಶನಗಳ ಟಿಕೆಟ್ ಹಣವನ್ನು ಪೂರ್ತಿಯಾಗಿ ನೀಡಲು ನಿರ್ಧರಿಸಿದ್ದೇವೆ. ಒಂದು ರಂಗತಂಡವಾಗಿ ಇದಷ್ಟೇ ನಾವು ಮಾಡಲು ಸಾಧ್ಯ..ದಯವಿಟ್ಟು ಇದನ್ನು ಹೆಚ್ಚು ಜನರಿಗೆ ತಲುಪಿಸಿ. ಎಷ್ಟು ಹಣ ಒಟ್ಟಾಗುತ್ತದೋ ಅಷ್ಟನ್ನು ನಾವು ತಲುಪಿಸಬಹುದು..ಧನ್ಯವಾದಗಳು ಎಂದು ವೆಂಕಟೇಶ್ ಪ್ರಸಾದ್ ಅವರು ಹೇಳಿದ್ದಾರೆ.
ಆಗಸ್ಟ್ 26 ರಂದು ಕಲಾಗ್ರಮ ಹಾಗೂ ಆಗಸ್ಟ್ 29ರಂದು ರಂಗಶಂಕರದಲ್ಲಿ ಸಂಜೆ 7.30ಕ್ಕೆ 'ಒಂದು ಪ್ರೀತಿಯ ಕಥೆ' ನಾಟಕ ಪ್ರದರ್ಶನವಿದೆ. ಟಿಕೆಟ್ ಗಳು ರಂಗಶಂಕರ ಹಾಗೂ ಬುಕ್ ಮೈಶೋದಲ್ಲಿ ಲಭ್ಯವಿದೆ. ವಿಜಯ್ ತೆಂಡೂಲ್ಕರ್ ಅವರ ಮಿತ್ರಾಚಿ ಗೋಷ್ಟ್ ಮರಾಠಿ ನಾಟಕವನ್ನು ಕನ್ನಡದಲ್ಲಿ ವೆಂಕಟೇಶ್ ಪ್ರಸಾದ್ ನಿರ್ದೇಶಿಸಿದ್ದಾರೆ.
ನವಜಾತಶಿಶು ನೋಡಿ ಸಂತಸಪಟ್ಟ ನೌಕಾಪಡೆ ಅಧಿಕಾರಿಗಳು
ಸಲಿಂಗ ಕಾಮ ವೈಯಕ್ತಿಕ ಆಯ್ಕೆಯಲ್ಲ. ನೈಸರ್ಗಿಕವಾಗಿಯೇ ಈ ರೀತಿಯ ಆಸಕ್ತಿಗಳು ಮೂಡುತ್ತವೆ ಎಂದು ವೈದ್ಯಕೀಯ ವಿಜ್ಞಾನ ತಿಳಿಸುತ್ತದೆ. ಪ್ರಾಣಿಗಳಲ್ಲಿಯೂ ಈ ಬಗೆಯ ಸಂಬಂಧಗಳನ್ನು ಕಾಣಬಹುದು. ಸಲಿಂಗವು ಅಸಾಮಾನ್ಯ ಪ್ರವೃತ್ತಿಯಲ್ಲ. ಗಂಡು ಹೆಣ್ಣಿನ ಪ್ರೀತಿ ಹೇಗೆ ಸಾಗುತ್ತದೆಯೋ ಹಾಗೆಯೇ ಇಬ್ಬರು ಹೆಣ್ಣು ಮಕ್ಕಳ ಪ್ರೇಮವನ್ನೂ ನಾಟಕದಲ್ಲಿ ಹೆಣೆಯಲಾಗಿದೆ.
ಇಬ್ಬರು ಹೆಣ್ಣು ಮಕ್ಕಳ ಪ್ರೇಮ
ಗಂಡು ಹೆಣ್ಣಿನ ಪ್ರೀತಿ ಹೇಗೆ ಸಾಗುತ್ತದೆಯೋ ಹಾಗೆಯೇ ಇಬ್ಬರು ಹೆಣ್ಣು ಮಕ್ಕಳ ಪ್ರೇಮವನ್ನೂ ನಾಟಕದಲ್ಲಿ ಹೆಣೆಯಲಾಗಿದೆ.
ಇದು ಅಸಹಜವಲ್ಲ ಎನ್ನುವುದನ್ನು ಪ್ರೇಕ್ಷಕರ ಮನಮುಟ್ಟುವಂತೆ ಸಾರುವುದೇ ನಾಟಕದ ಉದ್ದೇಶ. ಗಂಡು ಹೆಣ್ಣಿನ ಪ್ರೇಮಕ್ಕೆ ಎದುರಾಗುವ ಎಲ್ಲ ಅಡೆತಡೆಗಳು ಸಲಿಂಗಿಗಳ ಪ್ರೀತಿಗೂ ಎದುರಾಗುತ್ತವೆ, ಆದರೆ ಸಲಿಂಗ ಕಾಮಿಗಳನ್ನು ಈ ಸಮಾಜ ನೋಡುವ ಬಗೆ ಮತ್ತು ಅವರ ಪ್ರೀತಿಗೆ ಸಮಾಜ ಕೊಡುವ ಅನೈತಿಕತೆಯ ಪಟ್ಟ, ಅದರಿಂದಾಗಿ ಈ ಪ್ರೇಮಿಗಳ ಬದುಕಿನಲ್ಲಾಗುವ ಪರಿಣಾಮಗಳ ಬಗೆಗೆ ನಾಟಕ ಬೆಳಕು ಚೆಲ್ಲುತ್ತದೆ.
ಈ ರೀತಿ ರಂಗ ಪ್ರಯೋಗಗಳು ವಿರಳ
ಸಲಿಂಗಿಗಳ ವಿವಾಹ ವಿಷಯ ಕುರಿತು ರಂಗಪ್ರಯೋಗಗಳಾಗಿದ್ದು ವಿರಳ. ತೃತೀಯ ಲಿಂಗಿಗಳು, ಸಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಯ ಕಲಾ ಪ್ರಕಾರಗಳಲ್ಲಿ ಹಾಸ್ಯದ ವಸ್ತುವಾಗಿ ಬಳಸಿಕೊಂಡಿದ್ದೇ ಹೆಚ್ಚು. ಇಲ್ಲವೇ ಅವರನ್ನು ವ್ಯವಸ್ಥೆಯ ಬಲಿಪಶುಗಳು ಎನ್ನುವಂತೆ ಬಿಂಬಿಸಲಾಗುತ್ತದೆ. ಆದರೆ, ಈ ಎರಡೂ ಸಿದ್ಧ ಮಾದರಿಯ ಸಾಧ್ಯತೆಗಳಾಚೆ ಸಲಿಂಗ ವಿವಾಹ ಹಾಗೂ ಸಲಿಂಗ ಪ್ರೀತಿ ಅತಿ ಸಹಜವಾದುದು ಎನ್ನುವುದನ್ನು ಗಟ್ಟಿಯಾದ ನಿಲುವಿನೊಂದಿಗೆ ಪ್ರತಿಪಾದಿಸಲು ಬೆಂಗಳೂರು ಥಿಯೇಟರ್ ಕಲೆಕ್ಟಿವ್' ಈ ಪ್ರಯೋಗದ ಮೂಲಕ ಪ್ರಯತ್ನ ಪಡುತ್ತಿದೆ.
ಸಮಾಜದ ಧೋರಣೆ ಬದಲಾಗಬೇಕು
ಈ ನಾಟಕ ರಚನೆಯಾದದ್ದು 1980ರ ದಶಕದಲ್ಲಿ. ಅಂದಿನ ದಿನಗಳಿಗೂ, ಇಂದಿನ ಪರಿಸ್ಥಿತಿಗೂ ಸಲಿಂಗಿಗಳ ಕುರಿತು ನಮ್ಮ ಸಮಾಜ ಹೊಂದಿರುವ ಮನಸ್ಥಿತಿಯಲ್ಲಿ ಬಹುದೊಡ್ಡ ಬದಲಾವಣೆಗಳಾಗಿಲ್ಲ. ಲೈಂಗಿಕ ಅಲ್ಪಸಂಖ್ಯಾತರ ಕುರಿತು ಜನರು ಹೊಂದಿರುವ ಪೂರ್ವಾಗ್ರಹಗಳು ಜನರಲ್ಲಿ ಗಟ್ಟಿಯಾಗಿ ಬೇರೂರಿವೆ. ಸಲಿಂಗ ವಿವಾಹವಾಗುವವರು ಅಸಾಮಾನ್ಯರು, ಅಸಹಜರು ಎನ್ನುವ ಧೋರಣೆಯನ್ನು ತೊಲಗಿಸುವ ನಿಟ್ಟಿನಲ್ಲಿ ರಂಗತಂಡ ಕಾರ್ಯಪ್ರವೃತ್ತವಾಗಿದೆ.
ಸಹಜ ನಿರೂಪಣೆಯ ನಾಟಕ
'ಲೈಂಗಿಕ ಅಲ್ಪಸಂಖ್ಯಾತರನ್ನು ಕಲೆಗಳಲ್ಲಿ ಹಾಸ್ಯಕ್ಕೆ ಬಳಸಿಕೊಳ್ಳುವುದು ಅಥವಾ ಅವರ ಸಮಸ್ಯೆಗಳನ್ನು ವೈಭವೀಕರಿಸುವುದು, ಅಲ್ಲದೆ ವೀಕ್ಷಕರಿಂದ ಕಣ್ಣೀರು ಹಾಕಿಸಿ, ಸಮಾಜದಲ್ಲಿ ಸಲಿಂಗಿಗಳು ಸಹಜವಾಗಿ ಬದುಕಲು ಸಾಕಷ್ಟು ಶ್ರಮಪಡಬೇಕಾಗುತ್ತದೆ ಎಂಬುದನ್ನು ತಿಳಿಸುವುದು ಸರಿಯಲ್ಲ. ಇದರಿಂದ ಸಲಿಂಗಿಗಳನ್ನು ನೋಡುವ ಸಮಾಜದ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಹಾಗಾಗಿ ಈ ನಾಟಕದ ನಿರೂಪಣೆಯನ್ನು ಸಹಜವಾಗಿ ಕಟ್ಟಲಾಗಿದೆ.