ಭೈರಸಂದ್ರ ಕೆರೆ ಬಾಗ್ಮನೆ ಒತ್ತುವರಿ ಸರಕಾರದ ವಶಕ್ಕೆ
ನ್ಯಾಯಾಲಯದ ಆದೇಶದಂತೆ ನಗರದ ಜಿಲ್ಲಾಧಿಕಾರಿ ಪ್ರಕಾಶ್ ಅವರು ಶನಿವಾರ ಬೆಳಗ್ಗೆಯಿಂದ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಮೂರು ಎಕರೆಯ ಪೈಕಿ ಬಾಗ್ಮನೆ ಡೆವಲಪರ್ಸ್ ಸಂಸ್ಥೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 9 ಗುಂಟೆ ಜಮೀನನ್ನು ಸಹ ತೆರವುಗೊಳಿಸಲಾಗಿದೆ.
ಆದರೆ ಇನ್ನೂ 1 ಎಕರೆ ಜಮೀನು ಒತ್ತುವರಿಯಾಗಿದ್ದು, ಅದರ ತೆರವು ಕಾರ್ಯ ನಡೆಯಬೇಕಿದೆ. ಆದರೆ ನ್ಯಾಯಾಲಯದಿಂದ ಆ ಒಂದು ಎಕರೆ ಜಮೀನಿನ ತೆರವಿಗೆ ತಡಯಾಜ್ಞೆ ತರಲಾಗಿದೆ.
ಇದರೊಂದಿಗೆ ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಹತ್ತಿರದ ಸಂಬಂಧಿ ಮಾಲೀಕತ್ವದ ವಿವಾದಿತ ಬಾಗ್ಮನೆ ಜಾಗವನ್ನು ಕೊನೆಗೂ ತೆರವುಗೊಳಿಸಿದಂತಾಗಿದೆ.
ಶನಿವಾರ ಬೆಳಗ್ಗೆ ಭೈರಸಂದ್ರ ಕೆರೆಯತ್ತ ತೆರಳಿದ ಜಿಲ್ಲಾಡಳಿತ ಜೆಸಿಬಿ ಯಂತ್ರಗಳಿಂದ ಒತ್ತುವರಿಯನ್ನು ತೆರವುಗೊಳಿಸಿತು. ಈ ಜಾಗದಲ್ಲಿ ಅಪಾರ್ಟ್ ಮೆಂಟ್ ಗಳು, ದೇವಸ್ಥಾನ, ಮನೆಗಳು, ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದವರು ಜಿಲ್ಲಾಡಳಿತ ಮೊದಲೇ ನೋಟಿಸ್ ನೀಡಿದ್ದರಿಂದ ಯಾವುದೇ ಪ್ರತಿರೋಧ ತೋರದೆ ತೆರವು ಕಾರ್ಯಾಚರಣೆಗೆ ಶಾಂತಯುತವಾಗಿ ಸಹಕರಿಸಿದರು.