ಬೆಂಗಳೂರಿನ ಭಜನಾ ಸಮಾರೋಪ ಸಮಾರಂಭ ಸುಸಂಪನ್ನ
ವಿಶ್ವ ಶಾಂತಿ - ಸಾಮರಸ್ಯಕ್ಕಾಗಿ ಸತ್ಸಂಗ ಭಜನಾ ಮಹಾ ಮಂಡಳಿ ಸಭಾ ಏರ್ಪಡಿಸಿದ್ದ ಭಜನಾ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ (2017) ಸಮಾರಂಭದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಬೆಂಗಳೂರು, ಮೇ 11: ಹೊಸ ತಲೆಮಾರಿನ ಹಲವು ಸಂಗತಿಗಳು ಭಜನೆಯ ಸಾತ್ವಿಕ ಉದ್ದೇಶಗಳ ಮೇಲೆ ಪರದೆ ಎಳೆಯುತ್ತಿವೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರು ವಿಶ್ವ ಶಾಂತಿ - ಸಾಮರಸ್ಯಕ್ಕಾಗಿ ಸತ್ಸಂಗ ಭಜನಾ ಮಹಾ ಮಂಡಳಿ ಸಭಾ ಬೆಂಗಳೂರಿನ ಕೆ.ಆರ್.ರಸ್ತೆಯ ಗಾಯನ ಸಮಾಜದಲ್ಲಿ ಏರ್ಪಡಿಸಿದ್ದ ಭಜನಾ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ (2017) ಸಮಾರಂಭದಲ್ಲಿ ಪಾಲ್ಗೊಡು ಆಶೀರ್ವಚನ ನೀಡಿದರು.[ಮೇ 13ರಂದು ರಂಗಶಂಕರದಲ್ಲಿ ತಪ್ಪದೇ ಚೆರಿ ತೋಟದಲ್ಲಿ ವಿಹರಿಸಿ]
ಇತ್ತೀಚೆಗೆ ಹೆಚ್ಚುತ್ತಿರುವ ಭಜನ ಕೂಟ, ಭಜನ ಮಂಡಳಿಗಳನ್ನು ಕಂಡು ಯುವಕರು ಮೂಗು ಮುರಿಯುವುದುಂಟು, ಏಕೆಂದರೆ ಇಡೀ ಜಗತ್ತನ್ನೇ ಆವರಿಸಿಕೊಂಡಿರುವ ಸೋಗು, ಪ್ರದರ್ಶನದ ಗೀಳು, ಮುಖಂಡತ್ವದ ಅತಿ ಆಸೆ, ಇವೆಲ್ಲ ಭಜನೆಯ ಸಾತ್ವಿಕ ಉದ್ದೇಶಗಳ ಮೇಲೆ ಪರದೆ ಎಳೆಯುತ್ತಿದೆ. ಮನಶ್ಶಾಂತಿ, ದೈವಪ್ರೇಮ, ಸಾಂಘಿಕ ಸದ್ಭಾಂಧವ್ಯ, ಸತ್ವಗುಣಾರೋಪಗಳನ್ನು ಪ್ರಸಾದಿಸುವ ಭಜನೆಯ ಪ್ರಾಶಸ್ತ್ಯವನ್ನು ಇಂದು ಮನನ ಮಾಡಿಕೊಳ್ಳಬೇಕಾಗಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.
ಮಹಾನಗರದ ಹಲವು ಭಜನಾ ಮಂಡಳಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಈ ವಿಭಿನ್ನ ಪ್ರಯತ್ನ ಯಶಸ್ವಿಯಾಗಿದೆ. ಸಭೆಯಲ್ಲಿ ಮಾರ್ಗಶಿರ ಶುದ್ಧ ತ್ರಯೋದಶಿಯಾದ ಹನುಮ ಜಯಂತಿಯನ್ನು ಭಜನಾ ದಿವಸವೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಿಸಬೇಕೆಂಬ ಬಗ್ಗೆಯೂ ಚರ್ಚೆ ನಡೆಯಿತು.
ದೈವ ನಾಮದ ಮಹಿಮೆ ಎಂತೆಂಥ ದುಸ್ತರ ಸಮಸ್ಯೆಗಳನ್ನೂ ಬಗೆಹರಿಸಬಲ್ಲ ಬಲ ಹೊಂದಿದೆ. ನಾಮಸ್ಮರಣೆಯನ್ನು ಆನಂದದಿಂದ ಮಾಡಲು ಅತ್ಯಂತ ಸುಲಭೋಪಾಯವೆಂದರೆ ಭಜನೆ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಓಂಕಾರ ಆಶ್ರಮ ಶ್ರೀ ಮಧುಸೂದನಾನಂದಪುರಿ ಸ್ವಾಮೀಜಿರ ಅಭಿಪ್ರಾಯಪಟ್ಟರು.[ನಮ್ಮ ಕನ್ನಡ ಹಾಡುಗಳು- ವಿಶಿಷ್ಟ ರಸಸಂಜೆಗೆ ಬನ್ನಿ]
ಭಜನೆ ಎಂದೊಡನೆ ಮೇಲ್ನೋಟಕ್ಕೆ ಅದೊಂದು ಆಧ್ಯಾತ್ಮಿಕ ಕೂಟ ಎಂದೇ ಭಾಸವಾಗುತ್ತದೆ. ಆದರೆ ಅದರಲ್ಲಿ ಲೌಕಿಕ ಬದುಕಿಗೆ ಸಹಾಯಕವಾಗುವ ಅನೇಕ ಅಂಶಗಳಿವೆ. ಹಿಂದೆ ಅವಿಭಕ್ತ ಕುಟುಂಬಗಳಿದ್ದ ಕಾಲದಲ್ಲಿ ಮನೆಮನೆಯಲ್ಲೂ ವಾರಕ್ಕೊಮ್ಮೆಯಾದರೂ ಭಜನೆ ಮಾಡುವ ಅಭ್ಯಾಸವಿತ್ತು. ಆಗ ಮನೆ ಮಂದಿಯ ಮನಸ್ಸುಗಳು ತಿಳಿಯಾಗಿ, ಶಾಂತವಾಗುತ್ತಿದ್ದವು. ತನ್ಮೂಲಕ, ಪರೋಕ್ಷವಾಗಿ, ವಿವೇಚನಾ ಸಾಮರ್ಥ್ಯವೂ ಜಾಗೃತವಾಗುತ್ತಿತ್ತು. ಸಂಬಂಧಗಳು ಸುಭದ್ರವಾಗಿರುತ್ತಿದ್ದವು ಎಂದು ಬಸವ ಪ್ರಶಸ್ತಿ ಪ್ರದಾನ ಮಾಡಿ ಬೇಲಿಮಠ ಶ್ರೀ ಶಿವರುದ್ರ ಮಹಾಸ್ವಾಮೀಜಿ ಹೇಳಿದರು.
ವಿಶೇಷ ಆಹ್ವಾನಿತರಾದ ಪದ್ಮಶ್ರೀ ಡಾ.ವಿ.ಆರ್.ಗೌರಿಶಂಕರ್, ಅಖಿಲ ಕರ್ನಾಟಕ ಭಜರಂಗ ದಳದ ಸೂರ್ಯ ನಾರಾಯಣ ರಾವ್, ಡಾ.ಎಂ.ಆರ್.ವಿ.ಪ್ರಸಾದ್ ,ಮುಂತಾದ ಗಣ್ಯರು ಉಪಸ್ಥಿತರಿದ್ದರು.