ಸಂವಿಧಾನ ಮತ್ತು ಮೀಸಲಾತಿ ಬಗ್ಗೆ ಯಾರು, ಏನು ಹೇಳಿದರು?
ಬೆಂಗಳೂರು, ಜನವರಿ, 28: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಆಶಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶ ಹೊಂದಿರುವ 'ಬಹುಜನ ಸೋಷಿಯಲ್ ಫೌಂಡೇಶನ್' ನ್ನು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಬಿಎಸ್ ಎಫ್ ನ್ಯಾಷನಲ್ ಸುಪ್ರೀಂ ಕೌನ್ಸಿಲ್ ಸದಸ್ಯ ದದ್ದೂಪ್ರಸಾದ್ ಆಹಿರ್ ಉದ್ಘಾಟಿಸಿದರು.
ಬಹುಜನ ಸೋಷಿಯಲ್ ಫೌಂಡೇಶನ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಯ ಅತ್ಯಂತ ಕೆಳ ಸ್ತರದಲ್ಲಿರುವ ಶೂದ್ರ ಮತ್ತು ಅಸ್ಪೃಶ್ಯ ಜನಾಂಗಗಳು ಭಾರತದಲ್ಲಿ ಹೆಚ್ಚು ಅನ್ಯಾಯಕ್ಕೆ ಒಳಗಾಗಿವೆ. ಈ ಶೋಷಿತ ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಲು ಅಂಬೇಡ್ಕರ್ ಅವರ ನಿರಂತರ ಹೋರಾಟದ ಹಾದಿಯಿಂದ ಸಾಧ್ಯವಾಯಿತು ಎಂದರು.
ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂವಿಧಾನ ಮತ್ತು ಮೀಸಲಾತಿ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಾಧೀಶರು ಕೆ.ಜೆ ಬಾಲಕೃಷ್ಣನ್, 'ದೇಶದಲ್ಲಿ ಪಾರದರ್ಶಕ ಸಾಮಾಜಿಕ ನ್ಯಾಯದ ಕೊರತೆ ಇದೆ. ದೇಶದ ಜಾತಿ ತಾರತಮ್ಯ ಹೋಗಲಾಡಿಸಲು ರಾಜಕೀಯ ಹಿತಾಸಕ್ತಿಯೂ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.[ಮೀಸಲಾತಿ ಅಗ್ಗಿಷ್ಟಿಕೆಯಲ್ಲಿ ಬೇಯುತ್ತಿರುವ ಗುಜರಾತ್]
ಈ ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ಮುಖಂಡರುಗಳು ಭಾಗವಹಿಸಿದ್ದು, ಸಂವಿಧಾನ, ಜಾತಿ ವ್ಯವಸ್ಥೆ, ಅಂಬೇಡ್ಕರ್, ಮನುವಾದಿ ಸಂಘಟನೆ ಇನ್ನಿತರ ವಿಚಾರಗಳನ್ನು ತೆರೆದಿಟ್ಟರು. ಯಾವ ಮುಖಂಡರು ಏನು ಹೇಳಿದ್ರು, ಹೆಚ್ಚಿನ ವಿಚಾರಗಳು ಕಿಳಗಿನ ಸ್ಲೈಡ್ ಗಳಲ್ಲಿದೆ.
ಬಹುಜನ ಸೋಷಿಯಲ್ ಫೌಂಡೇಶನ್ ಯಾಕೆ ಸ್ಥಾಪಿಸಲಾಯಿತು?
ಇತ್ತೀಚಿನ ದಿನಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಬೇಕು ಎನ್ನುವ ಕೂಗು ನಾಯಕರುಗಳಿಂದ ಕೇಳಿ ಬರುತ್ತಿದೆ. ಇದನ್ನು ವಿರೋಧಿಸುವ ರಾಷ್ಟ್ರಮಟ್ಟದ ಸಂಘಟನೆಯನ್ನು ಪ್ರಾರಂಭಿಸಬೇಕು ಎನ್ನುವ ಮೂಲ ಉದ್ದೇಶದಿಂದ ಈ ಫೌಂಡೇಶನ್ ಅನ್ನು ಪ್ರಾರಂಭಿಸಲಾಯಿತು
ಬಹುಜನ ಸೋಷಿಯಲ್ ಫೌಂಡೇಶನ್ ಮುಖ್ಯ ರೂವಾರಿ ಯಾರು?
ಅಂಬೇಡ್ಕರ್ ವಿಚಾರವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಮಾನ್ಯವರ್ ಕಾನ್ಶಿರಾಂರವರ ಅನುಯಾಯಿಗಳು ಒಟ್ಟಾಗಿ ಒಂದು ರಾಷ್ಟ್ರವ್ಯಾಪಿ ಸಂಘಟನೆಯನ್ನು ಕಟ್ಟಲೇ ಬೇಕೆಂಬ ಹಂಬಲದಿಂದ ಹುಟ್ಟಿದ ಕಲ್ಪನೆಯೇ ''ಬಹುಜನ್ ಸೋಷಿಯಲ್ ಫೌಂಡೇಶನ್" (ಬಹುಜನ ಸಾಮಾಜಿಕ ಬುನಾದಿ).
ಛತ್ತೀಸ್ ಗಡ ಮಾಜಿ ಶಾಸಕ ದಾವೂರಾಮ್ ರತ್ನಾಕರ್ ಹೇಳಿದ್ದೇನು?
ಮಾನ್ಯವರ್ ಕಾನ್ಶಿರಾಂರವರು ರಾಜಕೀಯ ಪಕ್ಷಕ್ಕೆ ಪ್ರಬಲ ಆಸರೆಯಾಗಿ ಒಂದು ರಾಜಕೀಯೇತರ ಸಾಮಾಜಿಕ ಸಂಘಟನೆ ಇರಬೇಕು ಮತ್ತು ಆ ಸಂಘಟನೆ ಜವಾಬ್ದಾರಿ ಮತ್ತು ಮುಂದಾಳತ್ವವನ್ನು ಶೋಷಿತ ಸಮುದಾಯದ ಸುಶಿಕ್ಷಿತ ನೌಕರರು ಹೊರಬೇಕು. ಅವರು ತಮ್ಮ ವೇಳೆ. ಪ್ರತಿಭೆ ಮೂಲಕ ಸಂಘಟನೆ ಏಳಿಗೆಗ ಶ್ರಮಿಸಬೇಕು ಎಂದು ಆಶಿಸಿದ್ದರು.
ದದ್ದೂಪ್ರಸಾದ್ ಆಹಿರ್ ಹೇಳಿದ್ದೇನು?
ಬಹುಜನ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇವರು, 'ಅಂಬೇಡ್ಕರ್ ಅವರ ಶ್ರಮದಿಂದ ರಚಿತವಾದ ಸಂವಿಧಾನ ಮೀಸಲಾತಿ ಕುರಿತು ಮನುವಾದಿ ಸಂಘಟನೆಗಳು ಅಪಸ್ವರ ಎತ್ತಿವೆ. ಮೀಸಲಾತಿಯನ್ನು ರದ್ದುಗೊಳಿಸಬೇಕು ಎನ್ನುವ ಮನುವಾದಿ ಸಂಘಟನೆಗಳ ವಿರುದ್ದ ರಾಷ್ಟ್ರದಾದ್ಯಂತ ಚಳುವಳಿಯನ್ನು ಹಮ್ಮಿಕೊಳ್ಳಬೇಕು. ಪೀಳಿಗೆಯಿಂದ ಪೀಳಿಗೆಗೆ ಅಂಬೇಡ್ಕರ್ ವಿಚಾರ ಹರಿದಾಡಬೇಕು. ಈ ಪ್ರಕ್ರಿಯೆ ಮೂಲಕ ಅಂಬೇಡ್ಕರ್ ಅವರನ್ನು ಜೀವಂತ ಇರಿಸಬೇಕು ಎಂದರು.
ನರೇಂದ್ರ ಮೋದಿ ಅವರು ಬಿ.ಆರ್ ಅಂಬೇಡ್ಕರ್ ಬಗ್ಗೆ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಅವರು ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ನಾನು ಪ್ರಧಾನಿ ಪಟ್ಟಕ್ಕೇರಲು ಸಾಧ್ಯವಾಯಿತು ಎನ್ನುತ್ತಾರೆ. ಅವರ ಪಕ್ಷಕ್ಕೆ ಥೀಂಕ್ ಟ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಮಾತ್ರ ಸಂವಿಧಾನ ಬದಲಾಯಿಸಬೇಕು ಹಾಗೂ ಮೀಸಲಾತಿ ರದ್ದುಗೊಳಿಸಬೇಕು ಎನ್ನುವ ಹೇಳಿಕೆ ನೀಡುತ್ತಾರೆ ಎಂದು ಬಿಎಸ್ ಎಫ್ ರಾಷ್ಟ್ರೀಯ ಮಹಾಕಾರ್ಯದರ್ಶಿ ಬಿ.ಗೋಪಾಲ್ ಬೇಸರ ವ್ಯಕ್ತಪಡಿಸಿದರು.