ಲಾಲ್ ಬಾಗ್ ನಲ್ಲೂ ನಡೆಯಲಿದೆ ಬಾಹುಬಲಿ ಮಸ್ತಕಾಭಿಷೇಕ
ಬೆಂಗಳೂರು, ಜನವರಿ 18 : ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಇನ್ನು ಒಂದೇ ದಿನ ಬಾಕಿ ಇದೆ, ಈ ಬಾರಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಶ್ರವಣಬೆಳಗೊಳದ ಬಾಹುಬಲಿಯ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕವನ್ನು ಈ ಬಾರಿ ಲಾಲ್ ಬಾಗ್ ನಲ್ಲಿಯೇ ನೋಡಬಹುದು,
ಪ್ರತಿ 12 ವರ್ಷಕ್ಕೊಮ್ಮೆ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಈ ಬಾರಿ 88 ನೇ ಮಹಾಮಸ್ತಕಾಭೀಷೇಕ ಫೆಬ್ರವರಿಯಲ್ಲಿ ನಡೆಯಲಿದೆ. ಅದರ ನೆನಪಿಗಾಗಿ ಈ ಬಾರಿ ಲಾಲ್ ಬಾಗ್ ನಲ್ಲಿ ಮಹಾಮಸ್ತಕಾಭಿಷೇಕದ ಪರಿಕಲ್ಪನೆಯಡಿ ಗೊಮ್ಮಟೇಶ್ವರ ಮೂರ್ತಿ ಮತ್ತು ಶ್ರವಣಬೆಳಗೊಳದ ಚಿತ್ರಣವನ್ನು ನಿರ್ಮಿಸಲಾಗುತ್ತದೆ.
ಲಾಲ್ ಬಾಗ್ ಪುಷ್ಪ ಪ್ರದರ್ಶನ ಟಿಕೇಟ್ : ಬುಕ್ ಮೈ ಶೋನಲ್ಲಿ ಲಭ್ಯ!
ಜನವರಿ 19 ರಿಂದ 28 ರವರೆಗೆ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಲಾಲ್ ಬಾಗ್ ನಲ್ಲಿ ಏರ್ಪಡಿಸಲಾಗಿದೆ. ಧರ್ಮಸ್ಥಳದ ಧಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜ.19 ರಂದು ಗಾಜಿನ ಮನೆಯಲ್ಲಿ ಮಧ್ಯಾಹ್ನ 12 ಕ್ಕೆ ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಬಾಹುಬಲಿ ಪ್ರತಿಕೃತಿ
ಗಾಜಿನ ಮನೆ ಬಳಿ ವಿಶೇಷ ಪೊಲೀಸ್ ಚೌಕಿ ತೆರಯಲಾಗುತ್ತದೆ, ಉದ್ಯಾನದಾದ್ಯಂತ100 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಐದು ಆಂಬುಲೆನ್ಸ್ ಗಳು, ವೈದ್ಯರ ತಂಡವನ್ನೊಳಗೊಂಡ 2 ಮಿನಿ ಆಸ್ಪತ್ರೆಗಳನ್ನು ತೆರೆಯಲಾಗುತ್ತದೆ. ಹಾವು ಹಿಡಿಯುವುದಕ್ಕೆ ನಾಲ್ವರನ್ನು ನಿಯೋಜಿಸಲಾಗಿದೆ. ಲಾಲ್ ಬಾಗ್ ಕೆರೆ ಬಳಿ ಈಜು ಪರಿಣಿತರನ್ನು ನಿಯೋಜಿಸಲಾಗುತ್ತದೆ. 200 ಮಂದಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಫಲಪುಷ್ಪ ಪ್ರದರ್ಶನಕ್ಕೆ 1.63 ಕೋಟಿ ವೆಚ್ಚವಾಗಲಿದೆ. 5 ಲಕ್ಷ ಮಂದಿ ನಿರೀಕ್ಷೆಯಿದೆ.
ರಕ್ಷಣೆಗೆ ಬರಳಿವೆ100 ಹದ್ದಿನ ಕಣ್ಣು
ಲಾಲ್ ಬಾಗ್ ನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯ ಕಣ್ಣು ತಪ್ಪಿಸಿ ಕೆರೆಗೆ ತ್ಯಾಜ್ಯ ಎಸೆಯುವುದು, ಕಾಂಪೌಂಡ್ ಹಾರಿ ಬಂದು ಅಲ್ಲಿನ ಶ್ರೀಗಂಧದ ಮರಗಳನ್ನು ಕದಿಯುವುದು, ಯುವತಿಯರು, ಮಹಿಳೆಯರನ್ನು ಚುಡಾಯಿಸುವುದಕ್ಕೆ ಇನ್ನು ಬ್ರೇಕ್ ಬೀಳಲಿದೆ. ಏಕೆಂದರೆ ಉದ್ಯಾನದಲ್ಲಿ ಇದೇ ಮೊದಲ ಬಾರಿಗೆ 100 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.
ಓಲಾ-ಊಬರ್ ಪಾಯಿಂಟ್
ಓಲಾ-ಊಬರ್ ಗಳಲ್ಲಿ ಬರುವ ಹಾಗೂ ಹೋಗುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಲಾಲ್ ಬಾಗ್ ಆವರಣದಲ್ಲಿರುವ ಹಾಪ್ ಕಾಮ್ಸ್ ಆವರಣದಲ್ಲಿ ಓಲಾ-ಊಬರ್ ಪಿಕ್ ಅಪ್ ಮತ್ತು ಡ್ರಾಪ್ ಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಮೊಬೈಲ್ ಅಪ್ಲಿಕೇಷನ್ ಮೂಲಕ ಕ್ಯಾಬ್ ಗಳನ್ನು ಬುಕ್ ಮಾಡುವವರಿಗೆ ಸಹಕಾರಿಯಾಗಲಿದೆ.
ಮಕ್ಕಳಿಗೆ ಉಚಿತ ಪ್ರವೇಶ
ಜನವರಿ 19 , 22 ರಿಂದ25 ರವರೆಗೆ ಶಾಲಾ ಮಕ್ಕಳಿಗೆ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶವಿರುತ್ತದೆ. ಖಾಸಗಿ ಹಾಗೂ ಸರ್ಕಾರಿ ಶಾಲಾ ಮಕ್ಕಳು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಆಗಮಿಸಬಹುದಾಗಿದೆ.
ಗಾಜಿನ ಮನೆಯಲ್ಲಿ ಬಾಹುಬಲಿ ಪ್ರತಿಕೃತಿ ನಿರ್ಮಾಣ
ಗಾಜಿನ ಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ ವೀಕ್ಷಕರಿಗೆ ಶ್ರವಣಬೆಳಗೊಳವನ್ನು ಅನತಿ ದೂರದಿಂದ ವೀಕ್ಷಿಸಿದಾಗ ಸಿಗುವ ಪ್ರಾಕೃತಿಕ ಹಿತಾನುಭವ ದೊರೆಯಲಿದೆ. ಗಾಜಿನ ಮನೆಯ ಮಧ್ಯಭಾಗದಲ್ಲಿ 60/40 ಅಡಿ ವಿಸ್ತೀರ್ಣದಲ್ಲಿ ಹಾಗೂ 30 ಅಡಿ ಎತ್ತರಕ್ಕೆ ಶ್ರವಣಬೆಳಗೊಳದ ಇಂದ್ರಗಿರಿ ಬೆಟ್ಟ ಮೈದಳೆದು ನಿಲ್ಲಲಿದೆ.
ಸಿರಿಧಾನ್ಯ ನಾನಾ ವಸ್ತುಗಳಲ್ಲಿ ಬಾಹುಬಲಿ ನಿರ್ಮಾಣ
ಉದ್ಯಾನ ಆಯ್ದ ಭಾಗಗಳಲ್ಲಿ ಸಿರಿಧಾನ್ಯ ಸೇರಿದಂತೆ ನಾನಾ ವಸ್ತುಗಳಲ್ಲಿ ಬಾಹುಬಲಿಯ ಪ್ರತಿಮೆ, ಚಿತ್ರಗಳಿಗೆ ರೂಪ ಕೊಡಲಾಗುತ್ತಿದೆ. ಗಾಜಿನ ಮನೆಯಲ್ಲಿ ಫೈಬರ್ ನಿಂದ ಮಾಡಿದ ಬೃಹತ್ ಬಾಹುಬಲಿಯ ಮೂರ್ತಿ ಇರಲಿದೆ. ನವಣೆ, ಸಜ್ಜೆ, ರಾಗಿ, ಬರಗು ಇತ್ಯಾದಿ ಸಿರಿಧಾನ್ಯಗಳನ್ನು ಬಳಸಿ ಕಲಾವಿದ ಶಿವಲಿಂಗಪ್ಪ ಬಡಿಗೇರ್ ಅವರು ಬಾಹುಬಲಿ ಮುಖದ ಕಲಾಕೃತಿ ರೂಪಿಸಿದ್ದಾರೆ.