ಬಿಜೆಪಿ ಕಾರ್ಯಕಾರಿಣಿ, ಬಿಎಸ್ ವೈ ವಿರುದ್ಧ ಭುಗಿಲೆದ್ದ ಆಕ್ರೋಶ
ಬೆಂಗಳೂರು, ಜನವರಿ 23: ಕಲಬುರಗಿಯಲ್ಲಿ ಎರಡು ದಿನ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪಕ್ಷದ ಹಿರಿಯ ನಾಯಕರಲ್ಲಿಯೇ ಅಸಮಾಧಾನ ವ್ಯಕ್ತವಾಗಿದೆ.
ಬಿಜೆಪಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ, ಈಶ್ವರಪ್ಪ ಮುಂತಾದವರು ಯಡಿಯೂರಪ್ಪ ಅವರ ಕಾರ್ಯವೈಖರಿ ವಿರುದ್ಧ ಪಕ್ಷದ ಉಸ್ತುವಾರಿ ನೊಡಿಕೊಳ್ಳುತ್ತಿರುವ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಭೇಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.[ರಾಯಣ್ಣ ಬ್ರಿಗೇಡ್, ಭಿನ್ನಮತ ಸಹಿಸಲು ಸಾಧ್ಯವಿಲ್ಲ: ಯಡಿಯೂರಪ್ಪ]
ಯಡಿಯೂರಪ್ಪ ಅವರು ಎಲ್ಲ ವಿಷಯಗಳಲ್ಲೂ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಒಬ್ಬರೇ ನಿರ್ಧಾರ ತೆಗೆದುಕೊಳ್ಳುವುದಾದರೆ ಪ್ರಮುಖರ ಸಮಿತಿ ಏಕೆ ಬೇಕು ಅದನ್ನು ವಿಸರ್ಜಿಸಿ ಎಂದು ಪ್ರಧಾನ ಕಾರ್ಯದರ್ಶಿ ಮುಂದೆಯೇ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮಿತಿಯು ಅಸ್ತಿತ್ವಕ್ಕೆ ಬಂದು ಒಂದು ವರ್ಷವಾದರೂ ಸರಿಯಾಗಿ ಮೂರರಿಂದ ನಾಲ್ಕು ಸಭೆ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿದ್ದಾರೆ.
ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೊದಲು ಯಾರೊಂದಿಗೂ ಚರ್ಚಿಸಿಲ್ಲ. ನಂಜನಗೂಡಿಗೆ ಅಭ್ಯರ್ಥಿ ಘೋಷಣೆಗೂ ಯಾರನ್ನು ಕೇಳಲಿಲ್ಲ. ಬೆಂಗಳೂರಿಗೆ ಏಕಾಏಕಿ ಹೋಗಿ ಮಾತುಕತೆ ನಡೆಸಿದ್ದಾರೆ. ಪಕ್ಷಕ್ಕೆ ಸೇರುವ ಮೊದಲೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಸರಿಯೇ ಎಂಬ ಪ್ರಶ್ನೆಯನ್ನು ಮುರಳೀಧರರಾವ್ ಮುಂದಿಟ್ಟಿದ್ದಾರೆ.
ಹೀಗಾಗಿ ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕ ಬೇಕಿದೆ. ಕಾರ್ಯಕರ್ತರ ಅಸಮಾಧಾನವನ್ನು ಶಮನ ಮಾಡಬೇಕಿದೆ ಎಂದಿದ್ದಾರೆ. ಅದಕ್ಕೆ ಪ್ರಧಾನ ಕಾರ್ಯದರ್ಶಿಗಳು ಯಡಿಯೂರಪ್ಪನವರಿಗೆ ಕಿವಿಮಾತು ಹೇಳುವ ಭರವಸೆ ನೀಡಿದ್ದಾರೆ.