ಆರೋಗ್ಯ ಬಗ್ಗೆ ಉಚಿತ ಸಲಹೆ ಬೇಕಾ, ಆಯುಷ್ ಮೇಳಕ್ಕೆ ಬನ್ನಿ
ಬೆಂಗಳೂರು, ಡಿ.26: ನೀವು ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಮಧುಮೇಹ ಹಾಗೂ ಹೈಪರ್ ಟೆನ್ಶನ್ ಕಾಯಿಲೆಗಳಿಂದ ಬಳಲುತ್ತಿದ್ದೀರಾ? ಹಾಗಾದರೆ ಬೆಂಗಳೂರಿನ ಜಿಗಣಿಯಲ್ಲಿ ನಡೆಯುವ ಆಯುಷ್ ಮೇಳದಲ್ಲಿ ಪಾಲ್ಗೊಳ್ಳಿ.
ವಿಶ್ವಮಟ್ಟದ ಆಯುಷ್ ಮೇಳ ಜನವರಿ 3ರಿಂದ 7ರವರೆಗೆ ಬೆಂಗಳೂರಿನ ಜಿಗಣಿಯಲ್ಲಿ ಏರ್ಪಡಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಮ್ಮೇಳನ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನೂ ಹಲವಾರು ಗಣ್ಯರ ಸಮಾಗಮದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.[ಭಾರತದ ಮಾರುಕಟ್ಟೆಗೆ ಡೆಂಗ್ಯೂ ಲಸಿಕೆ ಯಾವಾಗ ಬರುತ್ತದೆ?]
ವಿಶ್ವದ ಸುಮಾರು 20 ದೇಶಗಳಿಂದ 10 ಸಾವಿರ ಮಂದಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಆರೋಗ್ಯದ ಬಗ್ಗೆ ನುರಿತ ವೈದ್ಯರಿಂದ ಸಲಹೆ ಸೂಚನೆಗಳು ದೊರೆಯಲಿದೆ. ಆರೋಗ್ಯ ಸುಧಾರಣೆಗೆ ಈ ಮೇಳ ನೆರವಾಗಲಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.[ಏಡ್ಸ್ ಕುರಿತು ನೀವು ತಿಳಿದಿರಲೇಬೇಕಾದ 8 ಸಂಗತಿಗಳು]
ಈ ಆಯುಷ್ ಮೇಳದಲ್ಲಿ ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಮಧುಮೇಹ ಹಾಗೂ ಹೈಪರ್ ಟೆನ್ಶನ್ ಕಾಯಿಲೆಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.