ಹಲ್ಲೆ ಪ್ರಕರಣ: ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ಮೇಲೆ ಕೇಸ್
ಬೆಂಗಳೂರು, ಡಿಸೆಂಬರ್ 13: ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ. ತಮ್ಮ ಸಂಸ್ಥೆಯ 33 ವರ್ಷ ವಯಸ್ಸಿನ ಸಿಬ್ಬಂದಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ ಆರೋಪವನ್ನು ಹೊರೆಸಲಾಗಿದೆ.
ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ ನಗರ ನಿವಾಸಿ ಪ್ರವೀಣ್ ಕುಮಾರ್ ಅವರು ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಬು ಹಾಗೂ ಅವರ ಮಕ್ಕಳು ಹಾಗೂ ಬೌನ್ಸರ್ ಗಳು ಹಲ್ಲೆ ಮಾಡಿದ್ದಾರೆ.
'ಕಳೆದ ಒಂದು ವರ್ಷದಿಂದ ನಾನು ಈ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನನಗೆ ಇಲ್ಲಿ ತನಕ ಸಂಬಳ ನೀಡಿಲ್ಲ. ಕ್ವೀನ್ಸ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಬಾಬು ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿದರು'.
ಕೂಡಿ ಹಾಕಿದ್ರು: 'ನನ್ನನ್ನು ನಾಲ್ಕನೆ ಮಹಡಿಗೆ ಎಳೆದೊಯ್ದರು, ಕಂಪನಿ ರಹಸ್ಯಗಳನ್ನು ಸೋರಿಕೆ ಮಾಡುತ್ತಿದ್ದೀಯಾ ಎಂದು ಆರೋಪಿಸಿ ನನ್ನ ಮೇಲೆ ಹಲ್ಲೆ ಮಾಡಿದರು. ಅಲ್ಲೆ ಒಂದು ರೂಮಿನಲ್ಲಿ ನನ್ನನ್ನು ಒಂದು ದಿನ ಕೂಡಿ ಹಾಕಲಾಗಿತ್ತು' ಎಂದು ಕುಮಾರ್ ದೂರಿನಲ್ಲಿ ಹೇಳಿದ್ದಾರೆ.
ಮರುದಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪೊಲೀಸರ ಬಳಿ ತೆರಳುತ್ತಿದ್ದ ಕುಮಾರ್ ಗೆ ಬಾಬು ಕಡೆಯಿಂದ ಬೆದರಿಕೆ ಕರೆ ಬಂದಿದೆ. ಕೊನೆಗೆ ವಿಧಾನಸೌಧ ಪೊಲೀಸರ ಮುಂದೆ ತನ್ನ ಕಥೆಯನ್ನು ಹೇಳಿಕೊಂಡಿದ್ದಾರೆ.
ಕಂಪನಿ ಮಾಲೀಕ ಬಾಬು ಅವರ ಮಗ ಉಬೇಧ್, ಬೌನ್ಸರ್ ಗಳಾದ ಬಾಲಸುಬ್ರಮಣ್ಯ ಹಾಗೂ ಕಿಶೋರ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.