ನ್ಯಾ. ವಿಶ್ವನಾಥ ಶೆಟ್ಟಿಗೆ ಚೂರಿ ಇರಿತಕ್ಕೆ ಭದ್ರತಾ ವೈಫಲ್ಯವೇ ಕಾರಣ
ಬೆಂಗಳೂರು, ಮಾರ್ಚ್ 07: ಈ ಕೊಲೆ ಪ್ರಯತ್ನ ಯಾರೋ ಸಾಮಾನ್ಯರ ಮೇಲೆ ಆಗಿರುವುದಲ್ಲ, ದಾಳಿ ಆಗಿರುವುದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲೆ. ಕೊಲೆ ಪ್ರಯತ್ನ ಮಾಡಿದವನು ಹೊಂಚು ಹಾಕಿ, ಯೋಜನೆಗಳನ್ನು ಮಾಡಿ ಚೂರಿ ಹಾಕಿದ್ದಲ್ಲ, ನೇರವಾಗಿ ಚಾಕುವಿನೊಂದಿಗೆ ಕಚೇರಿಗೆ ನುಗ್ಗಿ ಮೂರು ಬಾರಿ ಇರಿದಿದ್ದಾನೆ.
ಭದ್ರತಾ ವೈಫಲ್ಯವೇ ಈ ಘಟನೆಗೆ ಕಾರಣ ಎಂಬುದು ಸುಸ್ಪಷ್ಟ, ಸಾಮಾನ್ಯ ವ್ಯಕ್ತಿಯೊಬ್ಬ ಚಾಕುವಿನೊಂದಿಗೆ ಲೋಕಾಯುಕ್ತ ನ್ಯಾಯಮೂರ್ತಿಗಳ ಕಚೇರಿ ಪ್ರವೇಶಿಸುತ್ತಾನೆ ಎಂದರೆ ಭದ್ರತೆ ಹೊಣೆ ಹೊತ್ತಿರುವವರು ಎಷ್ಟು ಹೊಣೆಗೇಡಿಯಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಎಂಬುದು ಅರಿವಾಗುತ್ತದೆ.
LIVE : ಚೂರಿ ಇರಿತ ಕೇಸು: ತನಿಖೆಗೆ 3 ಸದಸ್ಯರ FSL ತಂಡ ರಚನೆ
ಜೇಬಿನಲ್ಲಿ ಚಾಕು ಇದ್ದರೂ ಸಹಿತ ಎಂಎಸ್ ಬಿಲ್ಡಿಂಗ್ನಲ್ಲಿನ ಲೋಕಾಯುಕ್ತ ಕಚೇರಿಯ ಮೆಟಲ್ ಡಿಟೆಕ್ಟರ್ ಅನ್ನು ಆತ ಸುಲಭವಾಗಿ ದಾಟಿ ಬಂದಿದ್ದಾನೆ. ಆ ನಂತರ ಆತ ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಅವಕಾಶ ಕೇಳಿದ್ದಾನೆ. ಆತನಿಗೆ ಚೀಟಿ ಕೊಟ್ಟು ಕರೆಯುವುದಾಗಿ ಕೂರಿಸಲಾಗಿದೆ. ಆ ನಂತರ ಆತನಿಗೆ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಹೇಳಲಾಗಿದೆ ಆದರೆ ಅಲ್ಲಿಯೂ ಕೂಡ ಆತನ ತಪಾಸಣೆ ನಡೆದಿಲ್ಲ.
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಗನ್ ಮ್ಯಾನ್ ನೀಡಲಾಗಿದೆ. ಆತನೂ ಕೂಡ ಆರೋಪಿ ತೇಜರಾಜ್ ಶರ್ಮಾನನ್ನು ತಪಾಸಣೆ ಮಾಡಿಲ್ಲ. ನಿಯಮದ ಪ್ರಕಾರ ಯಾರೊಬ್ಬರು ಲೋಕಾಯುಕ್ತರಿಗೆ ದೂರು ನೀಡಬೇಕಾದರೆ ಅಲ್ಲಿ ದೂರುದಾರರನ್ನು ಹೊರತುಪಡಿಸಿ ಯಾರೂ ಇರುವಂತಿಲ್ಲ ಹಾಗಾಗಿ ಗನ್ ಮ್ಯಾನ್ ಕೂಡಾ ಹೊರಗೆ ಹೋಗಿದ್ದಾನೆ. ಅದೇ ಸಮಯದಲ್ಲಿ ತೇಜ್ರಾಜ್ ಚಾಕು ತೆಗೆದು ನ್ಯಾಯಮೀರ್ತಿಗಳಿಗೆ ಇರಿದಿದ್ದಾನೆ.
ನ್ಯಾ.ವಿಶ್ವನಾಥ ಶೆಟ್ಟಿಗೆ ಇರಿತ, ಭದ್ರತಾ ವೈಫಲ್ಯ: ಸಂತೋಷ್ ಹೆಗ್ಡೆ
ಕಚೇರಿಯ ಮೆಟಲ್ ಡಿಟೆಕ್ಟರ್ ಸರಿ ಇದ್ದಿದ್ದರೆ, ದೂರು ದಾರ ತನ್ನ ಆಗಮನ, ಭೇಟಿ ಉದ್ದೇಶವನ್ನು ವಿಸಿಟರ್ಸ್ ಡೈರಿಯಲ್ಲಿ ಬರೆಯಬೇಕಾದರೆ ಸರಿಯಾಗಿ ವಿಚಾರಿಸಿದ್ದರೆ, ವಿಶ್ವಾನಾಥ ಶೆಟ್ಟಿ ಅವರ ಕಚೇರಿ ಒಳಗೆ ತೇಜ್ ರಾಜ್ ಶರ್ಮಾ ಪ್ರವೇಶಿಸಬೇಕಾದರೆ ಆತನನ್ನು ಸರಿಯಾಗಿ ತಪಾಸಣೆ ಮಾಡಿದ್ದರೆ ಇಂದು ಈ ಘಟನೆ ನಡೆಯುತ್ತಿರಲಿಲ್ಲ.
ಪುಣ್ಯವಶಾತ್ ವಿಶ್ವನಾಥ ಶೆಟ್ಟಿ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವಿಠಲ್ ಮಲ್ಯಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಅಕಸ್ಮಾತ್ ಜೀವಕ್ಕೆ ಹಾನಿಯಾಗಿದ್ದರೆ ರಾಜ್ಯದ ಘನತೆಗೆ ಕಪ್ಪು ಚುಕ್ಕೆ ಯಾಗುತ್ತಿತ್ತು ಈ ಘಟನೆ.