ಶ್ರುತಿ ವಿರುದ್ಧ ಅರ್ಜುನ್ 5 ಕೋಟಿ ರು. ಆಗ್ರಹಿಸಿ ಮಾನನಷ್ಟ ಮೊಕದ್ದಮೆ
Recommended Video
ಬೆಂಗಳೂರು, ಅಕ್ಟೋಬರ್ 25 : ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ, ಕರ್ನಾಟಕ ಚಲನಚಿತ್ರ ಚೇಂಬರ್ ಆಫ್ ಕಾಮರ್ಸ್ ನಲ್ಲಿ, ನಿರ್ದೇಶಕರ ಸಂಘದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನೆ #ಮಿಟೂ ಕದನ ಇದೀಗ ಕೋರ್ಟ್ ಮೆಟ್ಟಿಲನ್ನೂ ಏರಿದೆ.
ತಮ್ಮ ಮೇಲೆ 'ವಿಸ್ಮಯ' ಸಿನೆಮಾ ಚಿತ್ರೀಕರಣವಾಗುವಾಗ ನಟ ಅರ್ಜುನ್ ಸರ್ಜಾ ಅವರು ಅಸಭ್ಯವಾಗಿ ನಡೆದುಕೊಂಡಿದ್ದರು, ಲೈಂಗಿಕ ಕಿರುಕುಳ ನೀಡಿದ್ದರು ಎಂದು, ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರುತಿ ಹರಿಹರನ್ ಅವರು ಆರೋಪಿಸಿ, ಕನ್ನಡ ಚಿತ್ರರಂಗದಲ್ಲಿ ಸುನಾಮಿ ಏಳುವಂತೆ ಮಾಡಿದ್ದರು.
#ಮಿಟೂ: ಶೃತಿ ಹರಿಹರನ್ ಮೇಲೆ ಮೊಕದ್ದಮೆ ಹೂಡುತ್ತೇನೆಂದ ಅರ್ಜುನ್ ಸರ್ಜಾ
ಆ ಆರೋಪ ಕೇಳಿ ಕೆಂಡಾಮಂಡಲವಾಗಿದ್ದ ಕನ್ನಡ ನಟ ಅರ್ಜುನ್ ಸರ್ಜಾ ಮತ್ತು ಅವರ ಕುಟುಂಬದವರೆಲ್ಲ ಶ್ರುತಿ ಹರಿಹರನ್ ವಿರುದ್ಧ ಕೆಂಡ ಕಾರಿದ್ದರು. ಈ ರೀತಿ ಆರೋಪ ಹೊರಿಸಲು ಶ್ರುತಿ ಹರಿಹನ್ ಗೆ ನಾಚಿಕೆಯಾಗುವುದಿಲ್ಲವೆ ಎಂದು ಅರ್ಜುನ್ ಸರ್ಜಾ ಅವರೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸರಣಿ ರೂಪದಲ್ಲಿ ಶ್ರುತಿ ಹರಿಹರನ್ ಕೂಡ ತಿರುಗೇಟು ನೀಡಿದ್ದಾರೆ.
ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು
ಇದೀಗ, ಅರ್ಜುನ್ ಸರ್ಜಾ ಅವರು ಶ್ರುತಿ ಹರಿಹನ್ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದು, ಕ್ಷಮೆ ಕೇಳುವುದರ ಜೊತೆಗೆ ಸಾರ್ವಜನಿಕವಾಗಿ ತಮ್ಮ ಮಾನ ಹಾನಿ ಮಾಡಿದ್ದಕ್ಕಾಗಿ ಪರಿಹಾರವಾಗಿ 5 ಕೋಟಿ ರುಪಾಯಿ ನೀಡಬೇಕೆಂದು ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ. ಜೊತೆ, ಈ ಪ್ರಕರಣ ಕುರಿತಂತೆ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಶ್ರುತಿ ಹರಿಹರನ್ ವಿರುದ್ಧ ನಿರ್ಬಂಧ ಹೇರಬೇಕೆಂದು ಅರ್ಜುನ್ ಸರ್ಜಾ ಅವರು ಕೋರಿದ್ದಾರೆ.
ಅರ್ಜುನ್ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಂಚು : ಶ್ರುತಿ ವಿರುದ್ಧ ಕ್ರಿಮಿನಲ್ ದೂರು
ವಾದ ಆಲಿಸಿದ ನ್ಯಾಯಾಲಯ : ಗುರುವಾರವೇ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ಪರವಿರೋಧದ ವಾದಪ್ರತಿವಾದವನ್ನು ಆಲಿಸಿದ್ದು, ಶುಕ್ರವಾರ ನಿರ್ಬಂಧ ಹೇರುವ ಕುರಿತು ಆದೇಶ ನೀಡಲಿದ್ದಾರೆ.
ಕಲೆ ಮತ್ತು ಕಾಮದ ನಡುವಿನ ಗೆರೆ ಮೀರಿದ್ದ ಸರ್ಜಾ
ನಟಿ, ನೃತ್ಯಗಾರ್ತಿಯಾಗಿರುವ ಶ್ರುತಿ ಹರಿಹರನ್ ಅವರು ಮಾಡಿರುವ ಆರೋಪಗಳೇನೆಂದರೆ, ವಿಸ್ಮಯ ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಅವರು ರಿಹರ್ಸಲ್ ಮಾಡುವಾಗ ಕಲೆ ಮತ್ತು ಕಾಮದ ನಡುವಿನ ಗೆರೆಯನ್ನು ಮೀರಿದ್ದರು. ಇದರಿಂದಾಗಿ ಬೇಸತ್ತು ನಾನು ರಿಹರ್ಸಲ್ಲಿಗೇ ಹೋಗುತ್ತಿರಲಿಲ್ಲ. ಹಲವಾರು ಬಾರಿ ಅವರಿಂದ ದೈಹಿಕ ಕಿರುಕುಳ ಅನುಭವಿಸಿದೆ. ಅಲ್ಲದೆ, ಅನೇಕ ಬಾರಿ ರೆಸಾರ್ಟಿಗೆ ಬಾ ಎಂದು ಕೂಡ ಪೀಡಿಸುತ್ತಿದ್ದರು ಎಂದೇಲ್ಲ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಆರೋಪ ಸಾಬೀತು ಮಾಡಲು ಸಾಧ್ಯವೆ?
ತಪ್ಪು ಯಾರದೋ ಗೊತ್ತಿಲ್ಲ. ಆರೋಪ ಸಾಬೀತು ಮಾಡಲು ಈಗ ಸಾಧ್ಯವೂ ಇಲ್ಲ. ಆದರೆ, ಈ ಪ್ರಕರಣದಿಂದಾಗಿ ಕನ್ನಡ ಚಿತ್ರರಂಗದ ಮಾನ ಮತ್ತು ಅರ್ಜುನ್ ಸರ್ಜಾ ಹಾಗು ಶ್ರುತಿ ಹರಿಹರನ್ ಅವರ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿರುವುದರಿಂದ ಕೆಎಫ್ಸಿಸಿಯಲ್ಲಿನ ಧುರೀಣರು ಹಲವಾರು ಸಭೆಗಳನ್ನು ಕರೆದು ಇಬ್ಬರೂ ಕುಳಿತುಕೊಂಡು ಪ್ರಕರಣ ಇತ್ಯರ್ಥಪಡಿಸುವುದು ಒಳಿತು ಎಂದು ಸಲಹೆ ನೀಡಿದ್ದರು. ಕೆಎಫ್ಸಿಸಿಗೆ ದೂರು ನೀಡದೆ ಸಾರ್ವಜನಿಕವಾಗಿ ಅರ್ಜುನ್ ಮೇಲೆ ಆರೋಪ ಮಾಡಿದ್ದೇಕೆಂದೂ ಕೆಲವರು ಕೆಂಡ ಕಾರಿದ್ದರು. ಇದರಲ್ಲಿ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಕೂಡ ಭಾಗಿಯಾಗಿದ್ದರು. ಆದರೆ, ಶ್ರುತಿ ಹರಿಹನ್ ಅವರು, ಕೆಎಫ್ಸಿಸಿಯ ಅಧಿಕಾರವನ್ನೇ ಪ್ರಶ್ನಿಸಿದ್ದರಿಂದ ಸಂಧಾನ ಮೆಟ್ಟಿಲೇರುವ ಮೊದಲೇ ಮುರಿದುಬಿದ್ದಿದೆ.
ಯಾರೂ ಏನೇ ಹೇಳಿದ್ರು ನನ್ನ ಹೋರಾಟ ನಿಲ್ಲಲ್ಲ: 6 ಅಂಶಗಳನ್ನ ಮುಂದಿಟ್ಟ ಶ್ರುತಿ
ಫಲ ನೀಡದ ಶ್ರುತಿ-ಅರ್ಜುನ್ ಸಂಧಾನ
ಈ ಲೈಂಗಿಕ ದೌರ್ಜನ್ಯದ ಪ್ರಕರಣ, ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರಿಬ್ಬರ ಕದನ ಮಾತ್ರವಾಗದೆ, ಇತರ ವ್ಯಕ್ತಿಗಳ ಮಧ್ಯಸ್ಥಿಕೆಯಿಂದಾಗಿ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶ್ರುತಿ ಹರಿಹರನ್ ಅವರಿಗೆ ಆಪ್ತರಾಗಿರುವ ರಾಮ್ ಎಂಬುವವರು, ಅರ್ಜುನ್ ಸರ್ಜಾ ಅವರಿಗೆ ಅತ್ಯಾಪ್ತರಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ ಪ್ರಶಾಂತ್ ಸಂಬರ್ಗಿ ಅವರಿಗೆ ಫೋನ್ ಮಾಡಿ, ಶ್ರುತಿ ಅವರು ಬಾಯಿ ಮುಚ್ಚಿಕೊಂಡಿರಬೇಕಿದ್ದರೆ 2 ಕೋಟಿ ರುಪಾಯಿ ನೀಡಬೇಕೆಂದು ಆಗ್ರಹಿಸಿದ್ದರೆಂದು ಹೇಳಿ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶ್ರುತಿ ಹರಿಹರನ್ ಅವರು, ಇದೆಲ್ಲ ಸುಳ್ಳು, ರಾಮ್ ಅವರು ಸಂಬರ್ಗಿ ಅವರಿಗೆ ಯಾವುದೇ ಕರೆಯನ್ನೂ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಗೊಂದಲವೆಬ್ಬಿಸಿದ ಪ್ರಕಾಶ್ ರೈ ಟ್ವೀಟ್ಸ್
ಈ ನಡುವೆ, ಸರಣಿ ಟ್ವೀಟ್ ಮಾಡಿರುವ ಹಿರಿಯ ನಟ ಪ್ರಕಾಶ್ ರೈ ಅವರು, ಒಮ್ಮೆ ಅರ್ಜುನ್ ಸರ್ಜಾ ವಿರುದ್ಧ ಮತ್ತೊಂದು ಬಾರಿ ಅರ್ಜುನ್ ಸರ್ಜಾ ಅವರ ಪರವಾಗಿ ಟ್ವೀಟಿಸಿ ಗೊಂದಲವನ್ನೂ ಸೃಷ್ಟಿಸಿದ್ದರು. ಆ ಹೆಣ್ಣುಮಗಳು ಅನುಭವಿಸಿದ ಅವಮಾನ, ಅಸಹಾಯಕತೆ... ಇಷ್ಟು ದಿನಗಳ ಕಾಲ ತನ್ನೊಳಗೆ ಹುದುಗಿಸಿಟ್ಟ ಆ ಗಾಯದ ನೋವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಅರ್ಜುನ್ ಅವರು ಆರೋಪವನ್ನು ಅಲ್ಲಗಳೆದರೂ ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟು ಮಾಡಿದ ನೋವಿಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ ಎಂದು ಟ್ವೀಟಿಸಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ, ಆಚಾರ.. ವಿಚಾರಗಳಿಲ್ಲದ ನಾಲಿಗೆಗಳು.. ತಮ್ಮ ನೀಚ ಬುದ್ದಿಯಿಂದ ತಮ್ಮ ತಮ್ಮ ಹಿತಾಸಕ್ತಿಗಳ ಬೇಳೆ ಬೇಯಿಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಲ್ಲದೆ, ಇಬ್ಬರೂ ಒಳ್ಳೆಯವರು, ಇಬ್ಬರೂ ಪ್ರತಿಭಾವಂತರು, ಇಬ್ಬರ ಅಗತ್ಯವೂ ಚಿತ್ರರಂಗಕ್ಕಿದೆ ಎಂದು ಬರೆದಿದ್ದಾರೆ.
ಚಿತ್ರರಂಗವನ್ನು ಇಬ್ಭಾಗ ಮಾಡಿದ ಪ್ರಕರಣ
ಇವರಿಬ್ಬರ ನಡುವಿನ ಮಾತಿನ ಕದನ ಯಾವ ಸ್ವರೂಪ ಪಡೆಯಿತೆಂದರೆ, ಕೆಲವು ಅಭಿಮಾನಿಗಳು ಎಲ್ಲೆಯನ್ನು ಮೀರಿ ಶ್ರುತಿ ಹರಿಹನ್ ವಿರುದ್ಧ ಅವಾಚ್ಯ ಶಬ್ದಗಳನ್ನು ಕೂಡ ಬಳಸು ಪರಾರಂಭಿಸಿದರು. ಇದು ಇವರಿಬ್ಬರ ನಡುವಿನ ಹೋರಾಟ ಮಾತ್ರವಾಗಿರದೆ ಚಿತ್ರರಂಗವೇ ಇಬ್ಭಾಗವಾಗುವಂತೆ ಮಾಡಿದೆ. ಕೆಲ ಯುವ ನಟಿಯರು ಶ್ರುತಿ ಹರಿಹರನ್ ಅವರಿಗೆ ಬೆಂಬಲಿಸಿದ್ದರೆ, ಹಿರಿಯ ಕನ್ನಡ ನಟ ಶಕ್ತಿ ಪ್ರಸಾದ್ ಅವರ ಮಗನಾಗಿರುವ ಅರ್ಜುನ್ ಸರ್ಜಾ ಅವರನ್ನು ಚಿಕ್ಕವರಿದ್ದಾಗಿಂದಲೂ ಬಲ್ಲ ಹಿರಿಯ ಕಲಾವಿದರನೇಕರು ಅರ್ಜುನ್ ಪರವಾಗಿ ನಿಂತಿದ್ದಾರೆ. ಮುಂದೆ ಕೂಡ ಕಲಾವಿದರು ಎಷ್ಟು ಎಚ್ಚರದಿಂದಿರಬೇಕು, ಸಹ ಕಲಾವಿದರನ್ನು ಯಾವ ರೀತಿ ನಡೆಸಿಕೊಳ್ಳಬೇಕು, ಯಾವ ರೀತಿ ವಾತಾವರಣ ಸೃಷ್ಟಿಸಬೇಕು ಎಂಬ ಬಗ್ಗೆ ಈ ಪ್ರಕರಣ ಮುನ್ನುಡಿ ಬರೆದಿರುವುದಂತೂ ಸತ್ಯ.
ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?