ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ನಾವೆಷ್ಟು ಸಮರ್ಥರು!
ಮಾನವ ಸಂಘಜೀವಿ. ಅವನು ಸಮಾಜದಲ್ಲಿಯೇ ಬದುಕಬೇಕಾಗುತ್ತದೆ. ಅನೇಕ ಕಟ್ಟುಪಾಡುಗಳು, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಪ್ರದಾಯಿಕ ತಾರತಮ್ಯಗಳು ಮನುಷ್ಯನನ್ನು ವಿವಿಧ ಸ್ಥರಗಳಲ್ಲಿ ಇರಿಸುತ್ತವೆ. ಬಲಿಷ್ಠರಾದವರು ಸಮರ್ಥರಾಗಿ ಜೀವನ ಸಾಗಿಸಿದರೆ ದುರ್ಬಲರು ತೊಂದರೆಗಳ ನಡುವೆಯೇ ಜೀವನ ಸಾಗಿಸುತ್ತಾರೆ.
ಈ ರೀತಿಯ ತಾರತಮ್ಯಗಳು ಕೇವಲ ಕೆಲವೇ ದೇಶಗಳಿಗೆ ಸೀಮಿತವಾಗಿರದೇ ವಿಶ್ವದ ಎಲ್ಲಾ ದೇಶಗಳ ಜನರು ಒಂದಿಲ್ಲೊಂದು ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಇದು ಅವರ ಧರ್ಮ, ಜಾತಿ, ಜನಾಂಗ, ವರ್ಣ, ಲಿಂಗ, ಅಲ್ಪಸಂಖ್ಯಾತರು, ಆರ್ಥಿಕ ಸ್ಥರ ಮುಂತಾದ ಕಾರಣಗಳಿಂದಾಗಿರಬಹುದು.
ಈ ತಾರತಮ್ಯಗಳು ಹೆಚ್ಚಾಗಿ ದುರ್ಬಲವರ್ಗದವರು, ಮಹಿಳೆಯರು ಮತ್ತು ಮಕ್ಕಳು, ಅಂಗವಿಕಲರು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಹಿಂದುಳಿದವರ ಮೇಲೆ ಹೆಚ್ಚಾಗಿರುತ್ತದೆ.
ವಿಶ್ವಸಂಸ್ಥೆಯು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಅಪಕ್ವತೆಯ ಕಾರಣದಿಂದಾಗಿ ಅವರ ಹುಟ್ಟಿಗಿಂತ ಮೊದಲು ಮತ್ತು ಹುಟ್ಟಿದ ನಂತರ ವಿಶೇಷ ರಕ್ಷಣೆ ಮತ್ತು ಆರೈಕೆಯನ್ನು ಕಾನೂನಾತ್ಮಕವಾಗಿ ನೀಡಬೇಕೆಂಬ ಹಲವು ಉದ್ದೇಶಗಳಿಂದ 1989ರ ನವೆಂಬರ್ 20ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಕ್ಕಳ ಹಕ್ಕುಗಳ ಸಮಾವೇಶಕ್ಕೆ ಸಹಿಹಾಕಿದವು.
ಇದು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಒಂದು ಮಹತ್ವದ ಒಪ್ಪಂದವಾಗಿದ್ದು ಯಾವುದೇ ಮಕ್ಕಳು ತಾರತಮ್ಯವಿಲ್ಲದೆ ಸಕ್ರಿಯ, ಮುಕ್ತ, ಅರ್ಥಪೂರ್ಣ ಭಾಗವಹಿಸುವಿಕೆ ಮತ್ತು ನಿರ್ಣಯಿಸುವಿಕೆಯನ್ನು ದೇಶಗಳು ಉತ್ತೇಜಿಸುವುದು ಹಾಗೂ ಮಕ್ಕಳ ಪಾಲನೆ, ಪೋಷಣೆ, ಅವರ ಹಕ್ಕುಗಳ ರಕ್ಷಣೆ ಹಾಗೂ ಅವರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವುದಾಗಿದೆ.
ಭಾರತವು 1992ರ ಡಿಸೆಂಬರ್ 12ರಂದು ಈ ಒಡಂಬಡಿಕೆ ಸಹಿ ಹಾಕುವ ಮೂಲಕ ಮಕ್ಕಳ ಹಕ್ಕುಗಳಿಗೆ ಸಂವಿಧಾನಿಕ ಭದ್ರತೆಯನ್ನು ನೀಡುವತ್ತಾ ಮುನ್ನೆಡಿದಿದೆ.
ಹಾಗೆಯೇ ಮಕ್ಕಳ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ಅನುಕ್ರಮವಾಗಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಆಯೋಗಗಳನ್ನು ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿದೆ.
ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಅಗತ್ಯತೆ:
ವಿಶ್ವದಲ್ಲಿ ಹೆಚ್ಚು ಅಪಾಯದಲ್ಲಿರುವ ವರ್ಗವೆಂದರೆ ಮಕ್ಕಳು. ದೇಶದಲ್ಲಿ ಯಾವುದೇ ತೊಂದರೆ ಉಂಟಾದರೆ ಹೆಚ್ಚಿನ ತೊಂದರೆಗಳನ್ನು ಅನುಭವಿಸುವವರು ಮಕ್ಕಳು. ಇದು ಅವರ ಭದ್ರತೆ, ರಕ್ಷಣೆ, ಲಾಲನೆಪಾಲನೆ ಅಥವಾ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿರಬಹುದು. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ಸಮಾವೇಶವು 54 ಪರಿಚ್ಛೇದಗಳನ್ನು ಹೊಂದಿದ್ದು, ಅವು ಮಕ್ಕಳ ಹಕ್ಕು ಮತ್ತು ರಕ್ಷಣೆಯ ಬಗ್ಗೆ ತಿಳಿಸಿವೆ. ಇವುಗಳಲ್ಲಿ ಬದುಕುವ, ಭಾಗವಹಿಸುವ, ವಿಕಾಸಹೊಂದುವ ಮತ್ತು ರಕ್ಷಣೆಯನ್ನು ಪಡೆಯುವ ಹಲವು ಹಕ್ಕುಗಳು ಸೇರಿಕೊಂಡಿವೆ.
ಮಕ್ಕಳು ಯಾವಾಗ ತಮ್ಮ ಹಕ್ಕುಗಳನ್ನು ಪಡೆಯುತ್ತವೆ
ಮಕ್ಕಳು ಯಾವಾಗ ತಮ್ಮ ಹಕ್ಕುಗಳನ್ನು ಪಡೆಯುತ್ತವೆ ಎಂಬ ಪ್ರಶ್ನೆಯು ಉದ್ಭವಸಬಹುದು. ಮಗುವು ತಾಯಿಯ ಭ್ರೂಣದಲ್ಲಿರುವಾಗಲೇ ಅದರ ಹಕ್ಕನ್ನು ಪಡೆಯುತ್ತದೆ. ಭ್ರೂಣಹತ್ಯೆ ಮಹಾಪಾಪ ಎಂಬ ಮಾತನ್ನು ಕೇಳಿದ್ದೇವೆ, ಆದರೆ ಅದು ಶಿಕ್ಷಾರ್ಹಅಪರಾಧ ಎಂಬುದು ಅಷ್ಟೇ ಸತ್ಯ. ಈ ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಪ್ರತಿಯೊಂದು ದೇಶವು ಸಹ ಮಕ್ಕಳ ಹಕ್ಕುಗಳನ್ನು ರಕ್ಷಿಸುವತ್ತಾ ಹಲವಾರು ಕಾಯ್ದೆ, ಕಾನೂನುಗಳನ್ನು ರೂಪಿಸಿ ಜಾರಿಗೆ ತಂದಿರುವುದಲ್ಲದೆ ಅವುಗಳನ್ನು ಅನುಷ್ಠಾನಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಸಹ ಹಾಕಿಕೊಂಡಿವೆ. ಈ ದಿಸೆಯಲ್ಲಿ ಭಾರತವು ಸಹ ಹಲವಾರು ಕಾಯ್ದೆ, ಕಾನೂನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂಬುದನ್ನು ವಿಮರ್ಶಿಸಬೇಕಾಗಿದೆ.
ಮಕ್ಕಳ ಹಕ್ಕುಗಳ ರಕ್ಷಣೆ ವ್ಯವಸ್ಥೆ ಮತ್ತು ಭಾರತ:
ಭಾರತವು ಒಟ್ಟು ಜನಸಂಖ್ಯೆಯಲ್ಲಿ ಶೇ.40ರಷ್ಟು ಮಕ್ಕಳನ್ನು(0-18 ವಯಸ್ಸಿನವರು) ಹೊಂದಿದ್ದು, ಇವರ ಅಭಿವೃದ್ಧಿ ಮತ್ತು ಹಕ್ಕುಗಳ ರಕ್ಷಣೆಗಳು ಹೇಗೆ ಸಾಗಿವೆ ಎಂಬುದನ್ನು ನೋಡಲೇಬೇಕು. ಮಕ್ಕಳಿಗಾಗಿ ದೇಶವು ಹಲವು ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದಿದೆ ಅದರಲ್ಲಿ ಪ್ರಮುಖವಾದವುಗಳೆಂದರೆ ಭ್ರೂಣಹತ್ಯೆ ನಿಷೇಧ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕರ ನಿಯಂತ್ರಣ ಮತ್ತು ನಿಷೇಧ ಕಾಯ್ದೆ, ಜುವೆನ್ಯಲ್ ಜಸ್ಟೀಸ್ ಆಕ್ಟ್, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಅಧಿನಿಮಯ(2012-ಪೋಕ್ಸೋ ಕಾಯ್ದೆ), ರಾಷ್ಟ್ರೀಯ ಮಕ್ಕಳ ನೀತಿ ಇತ್ಯಾದಿ.
ಅಭಿವೃದ್ಧಿ ಕಾರ್ಯಕ್ರಮಗಳು
ಮಹಿಳಾ ಮತ್ತು ಮಕ್ಕಳ ಇಲಾಖೆಯು ಹಲವು ಯೋಜನೆ ಮತ್ತು ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಮತ್ತು ರಕ್ಷಣೆಯ ಕೆಲಸ ಮಾಡುತ್ತಿದೆ. ಇವುಗಳ ಜೊತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ವಿಶೇಷ ನ್ಯಾಯಲಯ, ಮಕ್ಕಳ ಸಹಾಯವಾಣಿ, ಮಕ್ಕಳ ವಿಶೇಷ ಪೋಲಿಸ್ ವ್ಯವಸ್ಥೆಯನ್ನು ಮಾಡಿದೆ. ಆದರೂ ಸಹ ನಮ್ಮ ದೇಶದ ಮಕ್ಕಳು ಬಹುವಿದಧ ತೊಂದರೆಗಳಿಂದ ನಲುಗುತ್ತಿದ್ದಾರೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಅಪೌಷ್ಠಿಕತೆ, ಅನಾರೋಗ್ಯ, ಕಡಿಮೆ ಗುಣಮಟ್ಟದ ಶಿಕ್ಷಣ, ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಕ್ಕಳ ವಿರುದ್ಧ ಅಪರಾಧ ಕೂಡ ಒಂದಾಗಿದೆ.