ಅಲ್ಪಸಂಖ್ಯಾತರಿಗೆ ಸಾಲ ಪಡೆಯಲು ಅರ್ಜಿ ಆಹ್ವಾನ
ಬೆಂಗಳೂರು, ಜೂನ್, 17 : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2016-17ನೇ ಸಾಲಿಗೆ ಬೆಂಗಳೂರು ನಗರ ಜಿಲ್ಲೆಯ (ಕೇಂದ್ರೀಯ ಮತ್ತು ದಕ್ಷಿಣ ವಿಭಾಗ ವಿಭಾಗ) ನಿಗಮದ ಸಾಲದ ಯೋಜನೆಗಳಲ್ಲಿ, ಸಾಲ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರ ಜನಾಂಗದವರಿಂದ (ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು, ಜೈನ್, ಬೌದ್ಧ ಮತ್ತು ಪಾರ್ಸಿ) ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗಮದ ಯೋಜನೆಗಳ ವಿವರ:
1. ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆ 2. ಶ್ರಮಶಕ್ತಿ ಸಾಲ ಯೋಜನೆ 3. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಗಳು 4. ಸಣ್ಣ (ಮೈಕ್ರೋ) ಸಾಲ ಮತ್ತು ಸಹಾಯಧನ ಯೋಜನೆ 5.ಸ್ವಾವಲಂಬನಾ ಮಾರ್ಜಿನ್ ಹಣ ಸಾಲ ಮತ್ತು ಸಹಾಯಧನ ಯೋಜನೆ. [ವಿದೇಶ ವ್ಯಾಸಂಗಕ್ಕೆ ತೆರಳುವ ಅಲ್ಪಸಂಖ್ಯಾತರಿಗೆ ಶಿಷ್ಯವೇತನ]
ಅರ್ಹತೆಗಳು:
1) ನಿಗಮದ ಎಲ್ಲಾ ಯೋಜನೆಗಳಲ್ಲಿ 80:0:10 ಅನುಪಾತದಲ್ಲಿ ಅಂದರೆ ಶೇ. 80ರಷ್ಟು ಮುಸ್ಲಿಂ, ಶೇ. 10ರಷ್ಟು ಕ್ರೈಸ್ತರು ಹಾಗೂ ಶೇ. 10ರಷ್ಟು ಇತರೆ (ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಗೆ ಸೌಲಭ್ಯವನ್ನು ಒದಗಿಸಲಾಗುವುದು.
2) ನಿಗಮದ ಎಲ್ಲಾ ಯೋಜನೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಆದ್ಯತೆ ತಪ್ಪದೆ ಒದಗಿಸಲಾಗುವುದು.
3) ಎಲ್ಲಾ ಯೋಜನೆಗಳಲ್ಲಿ ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ಶೇ.3ರಷ್ಟು ಗುರಿಯನ್ನು ಆದ್ಯತೆ ಒದಗಿಸಲಾಗುವುದು. [ರಾಹುಲ್ ಗಾಂಧಿ ಎಫೆಕ್ಟ್: ಜೈನರಿನ್ನು ಅಲ್ಪಸಂಖ್ಯಾತರು]
4) ಆರ್ಥಿಕ ನೆರವು ಪಡೆಯಲಿಚ್ಛಿಸುವ ಅರ್ಜಿದಾರರು ಸರ್ಕಾರವು ಅಂಗೀಕರಿಸಿದ ಅಲ್ಪಸಂಖ್ಯಾತ ವರ್ಗಗಳ ಪ್ರವರ್ಗ-1, ಪ್ರವರ್ಗ - 2, 2ಬಿ, 3ಎ, ಮತ್ತು 3 ಬಿ ಗುಂಪಿಗೆ ಸೇರಿದವರಾಗಿರಬೇಕು.
5) ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರು. 1,03,000 ಮೀರಿರಬಾರದು (ಅರಿವು ಯೋಜನೆಗೆ ಹೊರತುಪಡಿಸಿ).
6) ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 15 ವರ್ಷಗಳಿಂದ ವಾಸವಾಗಿರಬೇಕು.
7) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳು.
8) ಅರ್ಜಿದಾರರು ತಮ್ಮ ವಿಳಾಸದ ಧೃಢೀಕರಣಕ್ಕಾಗಿ ಆಧಾರ್ (ಯುಐಡಿ) ಪ್ರತಿಯನ್ನು ಲಗತ್ತಿಸಿ, ಅದನ್ನು ಅವರ ಬ್ಯಾಂಕ್ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು ಮತ್ತು ಇತರೆ ಮಾನ್ಯವಾಗಿರುವ ದಾಖಲಾತಿಗಳನ್ನು ಲಗತ್ತಿಸಬೇಕು.
9) ಅರ್ಜಿದಾರರು ಖುದ್ದಾಗಿ ಬಂದು ಅರ್ಜಿಯನ್ನು ಸಲ್ಲಿಸುವುದು ಹಾಗೂ ಒಂದು ಅರ್ಜಿದಾರರಿಂದ ಒಂದೇ ಅರ್ಜಿಯನ್ನು ಸ್ವೀಕರಿಸಲಾಗುವುದು.
10) ಅರ್ಜಿದಾರರು ಅರ್ಜಿ ಸಲ್ಲಿಸುವ ಸಮಯದಲ್ಲಿ ಪೂರ್ಣ ದಾಖಲಾತಿಗಳನ್ನು ಸಲ್ಲಿಸುವುದು. ಅಪೂರ್ಣ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.
11) ಈ ಹಿಂದೆ ನಿಗಮದ ಸಾಲ ಸೌಲಭ್ಯ ಪಡೆದವರು ಮತ್ತೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.
ಸಾಲದ ಅರ್ಜಿ ನಮೂನೆಯನ್ನು ನಿಗಮದ ವೆಬ್ಸೈಬ್ www.kmdc.kar.nic.in ಅಥವಾ kmdc.karnataka.gov.in ಮೂಲಕ ಪಡೆಯಬಹುದು. ಸಾಲದ ಅರ್ಜಿಯನ್ನು ಜೂನ್ 30, 2016ರೊಳಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಹಮೀದ್ ಷಾ ಕಾಂಪ್ಲೆಕ್ಸ್, 2ನೇ ಮಹಡಿ, ಎಸ್.ಎಫ್.2, ಹಲಸೂರು ಗೇಟ್ ಪೊಲೀಸ್ ಸ್ಟೇಷನ್ ಹಿಂಭಾಗ, ಕಬ್ಬನ್ ಪೇಟೆ ಮುಖ್ಯ ರಸ್ತೆ, ಬೆಂಗಳೂರು ನಗರ ಜಿಲ್ಲೆ ಇವರಿಗೆ ಸಲ್ಲಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22114815, 22114817 ಸಂಪರ್ಕಿಸಬಹುದು.