ಅಪಾರ್ಟ್ ಮೆಂಟ್ಗಳಲ್ಲಿ ಮೂಲ ಸೌಕರ್ಯ, ನಾಗರಿಕ ಸ್ನೇಹಿ ನಿಯಮ ಅಗತ್ಯ
ಬೆಂಗಳೂರು, ಏಪ್ರಿಲ್ 23: ನಗರದಲ್ಲಿ ಸಾವಿರಾರು ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ನಿವಾಸಿಗಳಿಗೆ ಮೂಲಸೌಕರ್ಯ ಹಾಗೂ ನಾಗರಿಕ ಸ್ನೇಹಿ ನಿಯಮಗಳನ್ನು ಜಾರಿಗೊಳಿಸುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸ್ಪಂದಿಸಬೇಕು ಎನ್ನುವ ಮಾತುಗಳು ಭಾನುವಾರ ಕೇಳಿಬಂತು.
ಬೆಂಗಳೂರು ಅಪಾರ್ಟ್ ಮೆಂಟ್ಸ್ ಫೆಡರೇಶನ್ (ಬಿಎಎಫ್) ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅಪಾರ್ಟ್ ಮೆಂಟ್ ನಿವಾಸಿಗಳು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಅಪಾರ್ಟ್ ಮೆಂಟ್ ನಿವಾಸಿಗಳ ಸಮಸ್ಯೆ ಕುರಿತು ಸಂವಾದ
ಅಪಾರ್ಟ್ ಗಳಲ್ಲಿ ಎಸ್ಟಿಪಿ ನಿರ್ಮಾಣ ನಿಯಮ, ಕಾವೇರಿ ನೀರಿನ ಶುಲ್ಕ ಹೆಚ್ಚಳ, ಕಸ ವಿಲೇವಾರಿಗೆ ಹೆಚ್ಚುವರಿ ಉಪಕರ ಸೇರಿದಂತೆ ಅಪಾರ್ಟ್ ಮೆಂಟ್ಗಳ ಮೇಲೆ ವಿವಿಧ ಪ್ರಾಧಿಕಾರಿಗಳು ವಿಧಿಸುತ್ತಿರುವ ಕಾನೂನುಗಳು ಮಾರಕವಾಗಿದ್ದು, ಯಾವುದೇ ರಾಜಕೀಯ ಪಕ್ಷ ನಿವಾಸಿಗಳ ನೈಜ ಸಮಸ್ಯೆಯನ್ನು ಅರಿಯುವ ಕೆಲಸ ಮಾಡುತ್ತಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ವಸತಿ ಕಟ್ಟಡಗಳಿಗೆ ವಿಧಿಸುವ ನೀರಿನ ಶುಲ್ಕಕ್ಕೂ ಅಪಾರ್ಟ್ ಮೆಂಟ್ಗಳಿಗೆ ವಿಧಿಸುವ ನೀರಿನ ಶುಲ್ಕಕ್ಕೂ ಬಹಳ ವ್ಯತ್ಯಾಸವಿದೆ. ಅಪಾರ್ಟ್ ಮೆಂಟ್ಗಳಿಗೆ ಒಂದೇ ನೀರಿನ ಸಂಪರ್ಕ ನೀಡುವುದರಿಂದ ಎಲ್ಲ ಫ್ಲ್ಯಾಟ್ ಗಳಿಗೆ ಒಟ್ಟಾಗಿ ಶುಲ್ಕ ವಿಧಿಸಲಾಗುತ್ತಿದೆ. ಇದು ವಾಣಿಜ್ಯ ಕಟ್ಟಡಗಳಿಗೆ ವಿಧಿಸುವ ಶುಲ್ಕದ ಪ್ರಮಾಣದಲ್ಲಿದೆ ಎಂದು ಸಂವಾದ ನಡೆಸಿಕೊಟ್ಟ ನಗರ ತಜ್ಞ ರವಿಚಂದರ್ ಹೇಳಿದರು.
ಕಾಂಗ್ರೆಸ್ ಪಕ್ಷದ ಪರವಾಗಿ ಸಂವಾದದಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬೆಂಗಳೂರು ದೇಶದ ಪ್ರಮುಖ ನಗರಗಳಲ್ಲಿ ಒಂದು. ಆದರೆ ಬೆಂಗಳೂರಿಗೆ ಜಲಮೂಲ ಸಮೀಪದಲ್ಲಿಲ್ಲ.
ಕಾವೇರಿ ನದಿಯಿಂದಲೇ ಕುಡಿಯುವ ನೀರಿಗಾಗಿ ಬೃಹತ್ ಯೋಜನೆ ರೂಪುಗೊಂಡಿದೆ. ಭವಿಷ್ಯದಲ್ಲೂ ಇದರ ಪ್ರಮಾಣ ಹೆಚ್ಚಿಸಬೇಕಿದೆ. ಹೀಗಾಗಿ ಕಾವೇರಿ ನೀರಿಗೆ ವಿವಿಧ ಹಂತಗಳಲ್ಲಿ ಶುಲ್ಕ ವಿಧಿಸಲಾಗುತ್ತಿದೆ. ಸಾಮೂಹಿಕವಾಗಿ ವಿಧಿಸುತ್ತಿರುವ ಶುಲ್ಕ ವ್ಯವಸ್ಥೆ ಬದಲಿಸಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಪರವಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬೆಂಗಳೂರು ನಗರದ ಮೂಲಸೌಕರ್ಯ ಸುಧಾರಣೆ ಒಂದು ನಿರಂತರ ಪ್ರಕ್ರಿಯೆ. ಅದಕ್ಕಾಗಿ ಬಿಜೆಪಿ ಯೋಜನಾಬದ್ಧ ಗುರಿ ಹೊಂದಿದೆ. ಈಗಾಗಲೇ ಕೇಂದ್ರ ಸರ್ಕಾರ ಸ್ಮಾರ್ಟ್ ಯೋಜನೆಯಡಿ ಬೆಂಗಳೂರಿನ ಹಲವು ಸಮಸ್ಯೆಗಳ ಇತ್ಯರ್ಥಕ್ಕೆ ಮುನ್ನುಡಿ ಹಾಡಿದೆ. ಆದರೆ ಇಡೀ ನಗರದ ಸಮಗ್ರ ಪ್ರಗತಿಗೆ ಇನ್ನೂ ವಿಸ್ತೃತ ಯೋಜನೆ ಬೇಕಿದೆ.
ಸಂಪನ್ಮೂಲ ಕ್ರೋಢೀಕರಣ ಮತ್ತು ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸುವುದು ಒಂದು ಸವಾಲಾಗಿದೆ. ನೀರಿನ ಶುಲ್ಕವನ್ನು ಮೊದಲು ಅಪಾರ್ಟ್ ಮೆಂಟ್ಗಳಿಗೆ, ನಂತರ ಮನೆಗಳಿಗೆ ಹೆಚ್ಚಿಸಲಾಯಿತು. ಇದರಿಂದಾಗಿ ಅಪಾರ್ಟ್ ಮೆಂಟ್ಗಳಲ್ಲಿ ಮಾತ್ರ ನೀರಿನ ದರ ಹೆಚ್ಚಿದೆ ಎಂಬ ತಪ್ಪು ತಿಳಿವಳಿಕೆ ಇದೆ. ವಿವಿಧ ಸ್ಲ್ಯಾಬ್ ಗಳಲ್ಲಿ ನೀರಿನ ದರ ವ್ಯತ್ಯಾಸವಾಗುತ್ತದೆ. ಕುಡಿಯುವ ನೀರಿನ ದರವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲು ಗಮನ ಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.