ಸದ್ಯಕ್ಕೆ ಮೂಢನಂಬಿಕೆ ನಿಷೇಧ ಕೈಬಿಟ್ಟ ಸಿಎಂ ಸಿದ್ದು
ಪ್ರತಿಪಕ್ಷ- ಸ್ವಪಕ್ಷವೆನ್ನದೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿವಾದಿತ ಮೂಢನಂಬಿಕೆ ಪ್ರತಿಬಂಧಕ ಕರಡು ಮಸೂದೆಯನ್ನು ಇದೇ ತಿಂಗಳು ನಡೆಯಲಿರುವ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸದೇ ಇರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಭುಗಿಲೇಳುತ್ತಿದ್ದ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ನಡೆದಿದೆ.
ಬೆಂಗಳೂರಿನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳಗಾವಿ ಅಧಿವೇಶನದಲ್ಲಿ ಮೂಢನಂಬಿಕೆ ಪ್ರತಿಬಂಧಕ ವಿಧೇಯಕ ಮಂಡನೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
'ಕೆಲವು ತಜ್ಞರು, ಬುದ್ಧಿಜೀವಿಗಳು ಕರಡು ಮಸೂದೆ ರೂಪಿಸಿ ನನಗೆ ಸಲ್ಲಿಸಿದ್ದಾರೆ. ಆದರೆ ಅದನ್ನು ನಾನು ನಾನು ನೋಡಿಯೇ ಇಲ್ಲ. ಚರ್ಚಿಸಿಯೂ ಇಲ್ಲ. ಹೀಗಿರುವಾಗ ಜಾರಿಗೊಳಿಸುವ ಪ್ರಶ್ನೆ ಎಲ್ಲಿಂದ ಬಂತು?' ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ ಜಾಣತನ ಪ್ರದರ್ಶಿಸಿದ್ದಾರೆ.
ತಜ್ಞರು, ಬುದ್ಧಿಜೀವಿಗಳು ಸಲ್ಲಿಸಿರುವುದು ಕರಡು ವಿಧೇಯಕ. ಮಸೂದೆಯಲ್ಲ. ಆ ಕರಡು ವಿಧೇಯಕವನ್ನು ಸಿದ್ಧಪಡಿಸಿದ ಸಮಿತಿಯನ್ನು ಸರ್ಕಾರ ರಚಿಸಿಲ್ಲ. ಸರ್ಕಾರದ ವತಿಯಿಂದ ಸಭೆಯನ್ನೂ ನಡೆಸಿಲ್ಲ ಎನ್ನುವ ಮೂಲಕ ಕರಡು ಮಸೂದೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆಯೂ ಸಿದ್ದರಾಮಯ್ಯ ಮಾತನಾಡಿದರು.
ಇನ್ನು, ಮಸೂದೆ ಪರಿಶೀಲನೆಗೆ ಸಮಿತಿ ರಚಿಸುತ್ತೀರಾ? ಎಂದು ಕೆದಕಿದಾಗ 'ಇನ್ನೂ ಪರಿಶೀಲನೆಯೇ ಮಾಡಿಲ್ಲ ಅಂದ ಮೇಲೆ ಸಮಿತಿ ರಚನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ!' ಎಂದು ಸಿದ್ದು ಜಾರಿಕೊಂಡರು.