ಟಿಪ್ಪು ವಿರೋಧಿಸಿ ರಾತ್ರಿಯೇ ಬಲಿಯಾದ ಬಿಜೆಪಿ ಕಾರ್ಯಕರ್ತ
ಬೆಂಗಳೂರು, ನವೆಂಬರ್ 9 : ರುದ್ರೇಶ್, ಮೈಸೂರಿನ ರವಿ, ಬೀದರ್ ನ ಸುನಿಲ್ ಡೋಂಗ್ರೆ ನಂತರ ಮತ್ತೆ ಬೆಂಗಳೂರಿನಲ್ಲಿ ಕಾಮಾಕ್ಷಿ ಪಾಳ್ಯ ಸಮೀಪದ ಲಕ್ಷ್ಮಣ ನಗರ ಬಳಿ ಮಂಗಳವಾರ ತಡರಾತ್ರಿ ಕಿಡಿಗೇಡಿಗಳು ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಎನ್ನಲಾಗಿದ್ದು, ಕಿಡಿಗೇಡಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಹಾಗೂ ಜೊತೆಯಲ್ಲಿದ್ದ ಸಂಬಂಧಿ ನಾಗಣ್ಣನವರಿಗೂ ಗಾಯಗಳಾಗಿವೆ.
ಲಗ್ಗೆರೆ ನಿವಾಸಿ ಚಿಕ್ಕತಿಮ್ಮೇಗೌಡ ಮಾಗಡಿ ಮೂಲದ ವ್ಯಕ್ತಿ ಎನ್ನಲಾಗಿದ್ದು, ಇವರು ರಿಯಲ್ ಎಸ್ಟೇಟ್ ವ್ಯಾಪಾರ ಮತ್ತು ನಿರ್ಮಾಣ ಗುತ್ತಿಗೆ ಕಾಮಗಾರಿ ನಡೆಸುತ್ತಿದ್ದರು. ಇವರು ಎರಡು ತಿಂಗಳ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಇನ್ನು ಅವರ ಮನೆ ಗೃಹ ಪ್ರವೇಶ ಬುಧವಾರ ನಡೆಯುವುದರಲ್ಲಿತ್ತು.
ಚಿಕ್ಕ ತಿಮ್ಮೇಗೌಡ ಸಮೀಪದ ಬಂಧು ನಾಗಣ್ಣ ಅವರೊಂದಿಗೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ಕೃತ್ಯ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಬೀದರಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಬಲಿ]
ರಾತ್ರಿ 9.45ರ ಸುಮಾರಿಗೆ ಚಿಕ್ಕತಿಮ್ಮೇಗೌಡ ಬೈಕ್ ಚಲಾಯಿಸಿಕೊಂಡು ತಮ್ಮ ಸಂಬಂಧಿಕರಿಗೆ ಗೃಹ ಪ್ರವೇಶದ ಪತ್ರಿಕೆಯನ್ನು ನೀಡಿ ಮತ್ತೆ ವಾಪಸ್ ಮೋಹನ್ ಚಿತ್ರಮಂದಿರ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಒಂದೇ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಅವರನ್ನು ತಡೆದು ಚಾಕುವಿನಿಂದ ಆರು ಬಾರಿ ಇರಿದು ಪರಾಗಿಯಾಗಿದ್ದಾರೆ. ಎದೆ ಹಾಗೂ ಹೊಟ್ಟೆ ಭಾಗಕ್ಕೆ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಚಿಕ್ಕತಿಮ್ಮೇಗೌಡ ಸ್ಥಳದಲ್ಲಿ ಮೃತಪಟ್ಟಿದ್ದಾರೆ.[ರುದ್ರೇಶ್ ಹತ್ಯೆ : ಶೋಭಾ ವಿರುದ್ಧ ಮಾನನಷ್ಟ ಮೊಕದ್ದಮೆ]
ಆರೋಪಿಗಳು ತಿಮ್ಮೇಗೌಡರ ಮೇಲೆ ಹಲ್ಲೆ ನಡೆಸುವಾಗ ಸ್ನೇಹಿತ ನಾಗಣ್ಣ ತಡೆಯಲು ಯತ್ನಿಸಿದರಾದರೂ ಸಾಧ್ಯವಾಗಿಲ್ಲ. ಸಂಬಂಧಿ ನಾಗಣ್ಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನಂದರಾವ್ ವೃತ್ತದ ಗಾಂಧಿ ಪುತ್ಥಳಿ ಬಳಿ ಮಂಗಳವಾರ ಬೆಳಿಗ್ಗೆ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಚಿಕ್ಕತಿಮ್ಮೇಗೌಡ ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿಯೂ ಸ್ನೇಹಿತರೊಂದಿಗೆ ಭಾಗವಹಿಸಿದ್ದ ಚಿಕ್ಕ ತಿಮ್ಮೇಗೌಡ, ಪ್ರತಿಭಟನೆ ನಂತರ ಸ್ನೇಹಿತರೊಂದಿಗೆ ಗೃಹಪ್ರವೇಶದ ಪತ್ರಿಕೆ ಹಂಚಲು ಹೋಗಿದ್ದರು. ತಮ್ಮ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಳೆ ದ್ವೇಷ ಅಥವಾ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ವಿವಾದ ಕೊಲೆಗೆ ಕಾರಣವಾಗಿರಬಹುದು ಎನ್ನಲಾಗಿದೆ.ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.