ಮಲ್ಲಿಗೆಯ ಕಂಪು ಬೀರುವ ಐತಿಹಾಸಿಕ 'ದ್ರೌಪದಿ ಕರಗ'ಕ್ಕೆ ಬೆಂಗಳೂರು ಸಜ್ಜು
ಮಲ್ಲಿಗೆಯ ಕಂಪು ಬೀರುವ 'ಕರಗ'ದ ಸಂಭ್ರಮಕ್ಕೆ ರಾಜಧಾನಿ ಬೆಂಗಳೂರು ಸಜ್ಜಾಗಿದೆ. ಚೈತ್ರ ಶುದ್ದ ಹುಣ್ಣಿಮೆಯ ದಿನವಾದ ಮಂಗಳವಾರ (ಏ 11) ಮಧ್ಯರಾತ್ರಿ, ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕರಗ ಉತ್ಸವ ಆರಂಭವಾಗಲಿದೆ.
ಬೆಂಗಳೂರು, ಏ 10: ಪರಭಾಷಿಕರಿಂದಲೇ ತುಂಬಿತುಳುಕುತ್ತಿರುವ ಬೆಂಗಳೂರು ಮಹಾನಗರದಲ್ಲಿ, ರಾಜ್ಯದ ಸಂಪ್ರದಾಯ ಸಾರುವ ಕೆಲವು ಧಾರ್ಮಿಕ ಕಾರ್ಯಕ್ರಮಗಳು/ಜಾತ್ರೆಗಳು ಇನ್ನೂ ಉಳಿದುಕೊಂಡು ಬಂದಿವೆ ಎನ್ನುವುದಕ್ಕೆ ಸಾಕ್ಷಿಯೆಂದರೆ ಅದು ಬೆಂಗಳೂರು ಕರಗ.
ಚಾಂದ್ರಮಾನ ಯುಗಾದಿ, ಶ್ರೀರಾಮನವಮಿಯ ನಂತರ ಬರುವ ಮಲ್ಲಿಗೆಯ ಕಂಪು ಬೀರುವ 'ಕರಗ'ದ ಸಂಭ್ರಮಕ್ಕೆ ರಾಜಧಾನಿ ಬೆಂಗಳೂರು ಸಜ್ಜಾಗಿದೆ.
ಚೈತ್ರ ಶುದ್ದ ಹುಣ್ಣಿಮೆಯ ದಿನವಾದ ಮಂಗಳವಾರ (ಏ 11) ಮಧ್ಯರಾತ್ರಿ, ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕರಗ ಉತ್ಸವ ಆರಂಭವಾಗಲಿದೆ.
(ಸಂಗ್ರಹ ಚಿತ್ರ)
ಈ ಐತಿಹಾಸಿಕ ಕರಗಕ್ಕೆ ಚೈತ್ರಶುದ್ದ ಸಪ್ತಮಿಯ ದಿನ ಈಗಾಗಲೇ ಚಾಲನೆ ದೊರೆತಿದೆ. ಧ್ವಜಾರೋಹಣ, ದ್ವಾದಶಿಯ ದಿನದಂದು ದೀಪಾರಾಧನೆಯ ನಂತರ, ಮಂಗಳವಾರ ಕರಗ ಉತ್ಸವ ನಡೆಯಲಿದೆ. ಅದಾದ ನಂತರ ಬುಧವಾರ (ಏ 12) ನಡೆಯುವ ವಸಂತೋತ್ಸವದ ಮೂಲಕ ಈ ಧಾರ್ಮಿಕ ಹಬ್ಬಕ್ಕೆ ತೆರೆಬೀಳಲಿದೆ.
ಶಕ್ತಿದೇವತೆ ದ್ರೌಪದಿಯ ಕರಗ ಹೊತ್ತು ಧರ್ಮರಾಯ ದೇವಾಲಯದ ಪ್ರಧಾನ ಅರ್ಚಕ ಜ್ಞಾನೇಂದ್ರ ಏಳನೇ ಬಾರಿಗೆ ಕರಗ ಹೊರಲಿದ್ದಾರೆ. ಜೊತೆಗೆ, ಕೆಂಪು ರೇಷ್ಮೆ ವಸ್ತ್ರವನ್ನು ಸೊಂಟಕ್ಕೆ ಕಟ್ಟಿ, ದ್ರೌಪದಿಯ ಮಾನಸಪುತ್ರರೆಂದೇ ಹೇಳಲಾಗುವ ವೀರಕುಮಾರರು ಜೊತೆಗೆ ಸಾಗಲಿದ್ದಾರೆ.
ತಿಗಳರ ಪೇಟೆಯಿಂದ ಆರಂಭವಾಗುವ ಕರಗ ಮೆರವಣಿಗೆ ಬಳೇಪೇಟೆ, ಚಿಕ್ಕಪೇಟೆ, ನಗರತಪೇಟೆ, ಸಿದ್ದಣ್ಣಗಲ್ಲಿ, ಕೃಷ್ಣರಾಜೇಂದ್ರ ಮಾರುಕಟ್ಟೆ, ಕಾಟನ್ ಪೇಟೆ, ಅವೆನ್ಯೂ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಕಬ್ಬನ್ ಪೇಟೆ, ಅಕ್ಕಿಪೇಟೆ, ಕುಂಬಾರ ಪೇಟೆ, ಅರಳೇಪೇಟೆಯ ಮೂಲಕ ವಾಪಸ್ ಧರ್ಮರಾಯಗುಡಿಗೆ ಬರಲಿದೆ. ದಾರಿ ಮಧ್ಯೆ ಮಸ್ತಾನ್ ಸಾಬ್ ದರ್ಗಾದಲ್ಲಿ ಕರಗಕ್ಕೆ ಧೂಪದಾರತಿ ನಡೆಯಲಿದೆ.
ಸುಮಾರು ಎಂಟು ಶತಮಾನಗಳ ಇತಿಹಾಸವಿರುವ ಬೆಂಗಳೂರು ಕರಗ, ನಗರದ ನಾಲ್ಕು ಮೂಲೆಗಳಲ್ಲಿರುವ ಆಂಜನೇಯಸ್ವಾಮಿ ಗುಡಿ ಗಡಿದಾಟದೇ ಮಧ್ಯರಾತ್ರಿಯಿಂದ ಆರಂಭವಾಗಿ ಮರುದಿನ ಬೆಳಗ್ಗಿನ ಜಾವ 5.30ಕ್ಕೆ ಮುಕ್ತಾಯಗೊಳ್ಳಲಿದೆ.