ಅನುದಾನ ಕಡಿತ: ಕೇಂದ್ರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಗರಂ
ಬೆಂಗಳೂರು, ಜನವರಿ 17: ಅಂಗನವಾಡಿ ಮತ್ತು ಬಿಸಿ ಊಟಕ್ಕೆ ಕೇಂದ್ರ ನೀಡುತ್ತಿದ್ದ ಅನುದಾನದಲ್ಲಿ ಕಡಿತ ಮಾಡಿರುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಊಟ ಪರಿಚಾರಿಕೆಯರು ಹಾಗೂ ಆಶಾ ಕಾರ್ಯಕರ್ತೆಯರು ಸೌತ್ ಎಂಡ್ ವೃತ್ತದಲ್ಲಿರುವ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ಕುಮಾರ್ ಅವರ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ.
ರಾಜ್ಯದ ಇತರ ಬಿಜೆಪಿ ಸಚಿವರುಗಳಾದ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ಕುಮಾರ್ ಹೆಗಡೆ, ಸಾಂಖ್ಯಿಕ ಖಾತೆ ಸಚಿವ ಸದಾನಂದ ಗೌಡ, ಕುಡಿಯುವ ನೀರು ಮತ್ತು ನೈರ್ಮಲ್ಯ ರಾಜ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಅವರ ನಿವಾಸಗಳ ಮುಂದೆಯೂ ಪ್ರತಿಭಟನೆಗಳು ನಡೆಯುತ್ತಿದ್ದು, ಪ್ರತಿಭಟನೆಗೆ ಸಿಐಟಿಯು ಸಂಘಟನೆ ಬೆಂಬಲ ನೀಡಿದೆ.
ಕನಿಷ್ಠ ವೇತನ ಬೇಕೇ ಬೇಕು: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ
ಅಂಗನವಾಡಿಗೆ ಸರಬರಾಜು ಮಾಡುತ್ತಿರುವ ಪೌಷ್ಠಿಕ ಆಹಾರದ ಬದಲಿಗೆ ನೇರ ನಗದು ನೀಡಲು ಕೇಂದ್ರ ಮುಂದಾಗಿದ್ದು, ಆ ಹಣವನ್ನು ನೇರವಾಗಿ ಪೋಷಕರ ಖಾತೆಗೆ ವರ್ಗಾವಣೆ ಆಗುತ್ತದೆ, ಇದರಿಂದ ಅಂಗನವಾಡಿಗಳು ಬಾಗಿಲು ಹಾಕಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಹಾಗಾಗಿ ಈ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರ ಬೇಡಿಕೆಗಳು ಇಂತಿವೆ...
ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ
ಕೇಂದ್ರ ಸರ್ಕಾರ ಅಂಗನವಾಡಿಗಳನ್ನು ಬಲ ಹೀನಗೊಳಿಸಿ ಐಸಿಡಿಎಸ್, ಎನ್ಆರ್ಎಚ್ಎಂ, ಮಿಡ್ಡೇ ಮೀಲ್ ಯೋಜನೆಗಳ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರೆಯರ ಅಸ್ಮಿತೆಗೆ ಧಕ್ಕೆ ಆಗುವ ಯಾವುದೇ ಯೋಜನೆಗಳನ್ನು ಕೇಂದ್ರ ಕೈಗೊಳ್ಳಬಾರದು, ಈಗಾಗಲೇ ಕೇಂದ್ರ ಸರ್ಕಾರ ಈ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ 300 ಜಿಲ್ಲೆಗಳನ್ನು ಆಯ್ಕೆ ಕೂಡ ಮಾಡಿಬಿಟ್ಟಿದೆ, ಕೂಡಲೇ ಇದನ್ನು ಕೈಬಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯ.
ಗೌರವ ಧನ ಬೇಡ, ಕನಿಷ್ಠ ವೇತನ ಕೊಡಿ
45ನೇ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ ನೀಡಿದ ಶಿಫಾರಸ್ಸುಗಳನ್ನು ಕೇಂದ್ರ ಶೀಘ್ರವಾಗಿ ಜಾರಿಗೊಳಿಸಬೇಕು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ಪರಿಚಾಕಿಯರಿಗೆ ಇನ್ನಿತರ ಸೇವಾ ನೌಕರರಿಗೆ ವೇತನದ ಬದಲಿಗೆ ನೀಡುತ್ತಿರುವ ಗೌರವ ಧನ ಸ್ಥಗಿತಗೊಳಿಸಿ ಕೂಡಲೇ ಕನಿಷ್ಠ ವೇತನ ಜಾರಿ ಮಾಡಬೇಕು. ಆಶಾ ಕಾರ್ಯರ್ತೆಯರು ಮತ್ತು ಬಿಸಿಊಟ ಪರಿಚಾರಿಕೆಯರನ್ನು ಕಾರ್ಮಿಕರು ಎಂದು ಪರಿಗಣಿಸಬೇಕು.
ಕೇಂದ್ರದ ಪಾಲು ಹೆಚ್ಚಿಸಿ
ಅಂಗನವಾಡಿ, ಆಶಾ ಮತ್ತು ಬಿಸಿಊಟ ನೌಕರರಿಗೆ ಕೇವಲ ಕ್ರಮವಾಗಿ 8000,4000,2000 ಗಳನ್ನಷ್ಟೆ ನೀಡಲಾಗುತ್ತಿದೆ, ಬಿಸಿಊಟ ಸಹಾಯಕರಿಗೆ ಕೇವಲ 500 ಮಾತ್ರ ನೀಡಲಾಗುತ್ತಿದೆ, ಇದರಲ್ಲಿ ಕೇಂದ್ರದ ಪಾಲು ಅತ್ಯಂತ ಕನಿಷ್ಠ, 2011ರಿಂದಲೂ ಕೇಂದ್ರ ತನ್ನ ಪಾಲಿನ ಗೌರವಧನವನ್ನು ಹೆಚ್ಚಿಸಿಯೇ ಇಲ್ಲ, ಹಾಗಾಗಿ ಕೇಂದ್ರ ಸರ್ಕಾರ ಈ ಕೂಡಲೆ ತನ್ನ ಪಾಲಿನ ವೇತನದ ಮೊತ್ತವನ್ನು ಹೆಚ್ಚಿಸಬೇಕು.
ನೀತಿ ಆಯೋಗ ಬೇಡ
ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಮಾರಕವಾದ ಶಿಫಾರಸ್ಸುಗಳನ್ನು ನೀತಿ ಆಯೋಗ ನೀಡುತ್ತಿದೆ, ಗ್ರಾಮಾಂತರ ಪ್ರದೇಶದ ಮಕ್ಕಳು, ಮತ್ತು ಮಹಿಳೆಯರ ಆರೋಗ್ಯ, ಆರ್ಥಿಕ ಸ್ಥಿತಿಗೆ ಧಕ್ಕೆ ತರುವ ಯೋಜನೆಗಳನ್ನು ಅದು ಶಿಫಾರಸ್ಸು ಮಾಡಿದೆ ಹಾಗಾಗಿ ನೀತಿ ಆಯೋಗವನ್ನು ಕೂಡಲೇ ರದ್ದು ಪಡಿಸಿ ಯೋಜನಾ ಆಯೋಗವನ್ನು ಮರುಸ್ಥಾಪಿಸಬೇಕು.
ಮನವಿ ಸ್ವೀಕರಿಸಬೇಕು
ಕೇಂದ್ರ ಸಚಿವರು ಸ್ಥಳಕ್ಕೆ ಬಂದು ನಮ್ಮ ಅವಹಾಲು ಸ್ವೀಕರಿಸಬೇಕು, ಅವರ ಪಿಎಗಳ ಕೈಗೆ ಮನವಿ ಕೊಟ್ಟು ಹೋಗಲು ನಾವು ಬಂದಿಲ್ಲ, ಇದು ಕೇಂದ್ರದ ಯೋಜನೆ ಹಾಗಾಗಿ ಕೇಂದ್ರ ಸಚಿವರು ನಮ್ಮ ಅಹವಾಲು ಕೇಳಬೇಕು ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.