ಆನೇಕಲ್ : ಕೊಲೆ ಆರೋಪಿ ಮೆಂಟಲ್ ಮಂಜನ ಮೇಲೆ ಶೂಟೌಟ್
ಆನೇಕಲ್, ಜೂನ್ 18: ಆನೇಕಲ್ ತಾಲ್ಲೂಕಿನ ಹೊಸೂರು ರಸ್ತೆಯ ಚಿಂತಾಲ ಮಡಿವಾಳದಲ್ಲಿ ಮುನಿರಾಜು ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದ ಮೆಂಟಲ್ ಮಂಜ ಅಲಿಯಾಸ್ ಮಂಜುನಾಥನ ಮೇಲೆ ಶೂಟೌಟ್ ನಡೆಸಲಾಗಿದೆ.
ಮೆಂಟಲ್ ಮಂಜನ ಕಾಲಿಗೆ ಗುಂಡೇಟು ಬಿದ್ದಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಆನೇಕಲ್ ಬನ್ನೇರುಘಟ್ಟ ರಸ್ತೆಯ ಸಕಲವಾರ ಗೇಟ್ ಬಳಿ ಮಂಜ ಇರುವ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಆತನನ್ನು ಹಿಂಬಾಲಿಸಿಕೊಂಡು ಬಂದು ಸೆರೆ ಹಿಡಿಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾನೆ.
ಆನೇಕಲ್ ಉಪ ವಿಭಾಗದ ಡಿ.ವೈ.ಎಸ್.ಪಿ ಉಮೇಶ್ ಅವರು ಆತನ ಕಾಲಿಗೆ ಶೂಟ್ ಮಾಡಿದ್ದು, ಮಂಜನ ಬಲಗಾಲಿಗೆ 1 ಗುಂಡು ತಗುಲಿದೆ. ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.
ಏನಿದು ಘಟನೆ: ಮುನಿರಾಜು ಎಂಬುವರ ಅತ್ತಿಗೆಗೆ ಮಂಜ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಅವನಿಗೆ ಎರಡು ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಇದೇ ವಿಚಾರಕ್ಕೆ 3 ದಿನಗಳ ಹಿಂದೆ ಇಬ್ಬರ ನಡುವೆ ಜಗಳವಾಗಿತ್ತು ನಂತರ ಮಾತುಕತೆ ನೆಪದಲ್ಲಿ ಕರೆಸಿಕೊಂಡು ಮಂಜನಿಗೆ ತದುಕಿ ಕಳಿಸಿದ್ದರು.
ಶನಿವಾರ ರಾತ್ರಿ ವೇಳೆ ಹೊಂಚು ಹಾಕಿ ಪೆಟ್ರೋಲ್ ಬಂಕ್ ವೊಂದರ ಬಳಿ ಇದ್ದ ಮುನಿರಾಜುವಿನ ಮೇಲೆ ದಾಳಿ ಮಾಡಿ, ಕೊಲೆಗೈದ ಮಂಜ ಪರಾರಿಯಾಗಿದ್ದ. ಈ ಪ್ರಕರಣ ಹೆಬ್ಬಗೋಡಿ ಠಾಣೆಯಲ್ಲಿ ದಾಖಲಾಗಿದೆ.