ಮಾಜಿ ಸಿಎಂ ಪತ್ನಿಯನ್ನು ಸೋಲಿಸಿ ರಾಜಕೀಯ ಬದುಕು ಆರಂಭಿಸಿದ್ದ ಅನಂತ್ ಕುಮಾರ್
ಬೆಂಗಳೂರು, ನವೆಂಬರ್ 12: ಅದು 1996 ರ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಕಾವು ಹೆಚ್ಚಿದ್ದ ಸಮಯ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿರೀಕ್ಷಿತ ಅಭ್ಯರ್ಥಿಯಾಗಿದ್ದ ಪ್ರೊ.ಕೆ.ವೆಂಕಟಗಿರಿ ಗೌಡ ಅವರ ಬದಲಾಗಿ, ಅಷ್ಟೇನೂ ಪರಿಚಿತರಲ್ಲದ ಅನಂತ್ ಕುಮಾರ್ ಎಂಬ ಹೊಸ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿತ್ತು!
ಅದಕ್ಕೆ ಕಾರಣ 1994 ರ ವಿಧಾನಸಭೆ ಚುನಾವಣೆಯಲ್ಲಿ ಅನಂತ್ ಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು! ಕೇವಲ 36 ವರ್ಷ ವಯಸ್ಸಿನ, ರಾಜಕೀಯವಾಗಿ ಆಗಷ್ಟೇ ಅಂಬೆಗಾಲಿಡುತ್ತಿರುವ ಅನಂತ್ ಕುಮಾರ್ ಅವರಿಗೆ ಟಿಕೆಟ್ ನೀಡಿದ ಬಿಜೆಪಿ ಹೈಕಮಾಂಡ್ ನಡೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಅದೂ ಅಲ್ಲದೆ, ಆಗ ಅನಂತ್ ಕುಮಾರ್ ಅವರ ವಿರುದ್ಧ ಸ್ಪರ್ಧಿಸಿದ್ದವರು ಮಾಜಿ ಮುಖ್ಯಮಂತ್ರಿ ಗುಂಡುರಾವ್ ಅವರ ಪತ್ನಿ ವರಲಕ್ಷ್ಮಿ. ಮಾಜಿ ಸಿಎಂ ಪತ್ನಿ, ಗುಂಡು ರಾವ್ ಅವರು ಅಗಲಿ ಕೇವಲ ಮೂರು ವರ್ಷ ಸಂದಿದ್ದರಿಂದ ಅನುಕಂಪದ ಅಲೆಯೂ ಕೆಲಸ ಮಾಡೀತು ಎಂಬ ನಿರೀಕ್ಷೆಯಿಂದ ಕಾಂಗ್ರೆಸ್ ವರಲಕ್ಷ್ಮಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
ಸ್ನೇಹಜೀವಿ ಅನಂತ್ ಕುಮಾರ್ ವ್ಯಕ್ತಿಚಿತ್ರ: ಸಚಿತ್ರ ವಿವರ
ಆದರೆ ರಾಜಕೀಯದಲ್ಲಿ ಹೆಚ್ಚೇನು ಅನುಭವವಿಲ್ಲದಿದ್ದರೂ, ತಮ್ಮ ಸ್ನೇಹಪರತೆ, ವಾಕ್ಚಾತುರ್ಯ, ಜನಪರ ಕಾಳಜಿಯಿಂದಾಗಿ ಯಾರೂ ಊಹಿಸಿರದ ರೀತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು ಅನಂತ್ ಕುಮಾರ್.
ರಾಜಕೀಯ ಬದುಕಿನ ಶುಭಾರಂಭ!
ಆದರೆ ಪಕ್ಷ ತಮ್ಮನ್ನು ಗುರುತಿಸಿ ನೀಡಿದ ಅವಕಾಶವನ್ನು ಅತ್ಯಂತ ನಾಜೂಕಾಗಿ ಬಳಸಿಕೊಂಡ ಅನಂತ್ ಕುಮಾರ್ ಕಡಿಮೆ ಅಂತರದಲ್ಲೇ ಆದರೂ ವರಲಕ್ಷ್ಮಿ ಅವರ ವಿರುದ್ಧ ಗೆದ್ದು ದಾಖಲೆ ಬರೆದರು. ಅಲ್ಲಿಂದ ಅನಂತ್ ಕುಮಾರ್ ಅವರ ರಾಜಕೀಯ ಬದುಕಿನ ಶುಭಾರಂಭವಾಯಿತು.
ಸೋಲಿಲ್ಲದ ಸರದಾರ
1996 ರಲ್ಲಿ ವರಲಕ್ಷ್ಮಿ ಅವರ ವಿರುದ್ಧ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗೆದ್ದ ನಂತರ, ಈ ಕ್ಷೇತ್ರದಲ್ಲಿ ಅವರು ನಡೆಸಿದ ಜನಪರ ಕೆಲಸಗಳು, ಈ ಭಾಗದ ಮತದಾರರೊಂದಿಗೆ ಬೆರೆತು, ಅವರ ವಿಶ್ವಾಸ ಗಳಿಸುತ್ತಿದ್ದ ರೀತಿಯಿಂದಾಗಿ ಮುಂದೆಂದೂ ಅವರು ಸೋಲಲೇ ಇಲ್ಲ, ಸಾಯುವವರೆಗೂ! ಸತತ ಆರು ಲೋಕಸಭಾ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿದ ಕೆಲವೇ ನಾಯಕರಲ್ಲಿ ಅನಂತ್ ಕುಮಾರ್ ಒಬ್ಬರಾದರು! 1996-2014 ರವರೆಗೆ ಸತತ ಆರು ಬಾರಿ ಸಂಸದರಾದ ದಾಖಲೆ ಬರೆದರು.
ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಇತಿಹಾಸ ನಿರ್ಮಿಸಿದ್ದ ಅನಂತ್
ಅನಂತ್-ಯಡಿಯೂರಪ್ಪ ಸ್ನೇಹ
ಹಾಗೆ ಹೇಳುವುದಕ್ಕೆ ಹೋದರೆ ಅನಂತ್ ಕುಮಾರ್ ಅವರನ್ನು ರಾಜಕೀಯವಾಗಿ ಬೆಳೆಸುವಲ್ಲಿ ಯಡಿಯೂರಪ್ಪ ಅವರ ಕೊಡುಗೆ ಸಾಕಷ್ಟಿದೆ. ಅವರನ್ನು ತಮ್ಮ ಎಂದೇ ಭಾವಿಸಿದ್ದೇನೆ ಎಂದು ಎಷ್ಟೋ ಬಾರಿ ಹೇಳಿಕೊಳ್ಳುತ್ತಿದ್ದ ಯಡಿಯೂರಪ್ಪ, ಅನಂತ್ ಕುಮಾರ್ ಅವರಲ್ಲಿದ್ದ ಬುದ್ಧಿವಂತಿಕೆ, ಪ್ರತಿಭೆಯನ್ನು ರಾಜ್ಯ ರಾಜಕಾರಣದಲ್ಲಿ ಪಕ್ಷದ ಸಂಘಟನೆಗಾಗಿ ಬಳಸಿಕೊಂಡರು. ರಾಜ್ಯದಲ್ಲಿ ಯಡಿಯೂರಪ್ಪ ಅವರ ನಂತರದ ನಾಯಕರು ಎನ್ನಿಸಿಕೊಂಡ ಅನಂತ್ ಕುಮಾರ್ ಬೇರೆಲ್ಲ ನಾಯಕರಿಗಿಂತ ಬಹುಬೇಗನೇ ರಾಜಕೀಯವಾಗಿ ಬೆಳೆದರು.
'ತಾನು ನಿರ್ಮಿಸಿದ ರಾಕೆಟ್ ಎಲ್ಲಿಗೆ ತಲುಪಬೇಕು ಅಂತ ದೇವರೇ ನಿರ್ಧರಿಸುತ್ತಾನೆ'
ಅಡ್ವಾಣಿ ಮಾನಸ ಪುತ್ರ!
ಅನಂತ್ ಕುಮಾರ್ ಅಂದ್ರೆ ಅಡ್ವಾಣಿ ಅವರ ಮಾನಸ ಪುತ್ರ ಎಂದೇ ಹಲವರು ಕರೆಯುತ್ತಿದ್ದರು. ಅಷ್ಟರ ಮಟ್ಟಿಗೆ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಅವರು ಆತ್ಮೀಯತೆ ಸಿದ್ಧಿಸಿಕೊಂಡಿದ್ದರು. ಬಹುಬೇಗನೆ ಎಲ್ಲರೊಂದಿಗೂ ಬೆರೆತು ಸ್ನೇಹ ಸಂಪಾದಿಸಿಕೊಳ್ಳುತ್ತಿದ್ದ ಅವರ ಸ್ವಭಾವವೇ ಅವರಿಗೆ ರಾಜಕೀಯ ಹಾದಿಯನ್ನೂ ಸುಲಭಗೊಳಿಸಿತ್ತು. ಆದ್ದರಿಂದ ವಾಜಪೇಯಿ ಸಂಪುಟದಲ್ಲಿ ಕೇವಲ 38 ವರ್ಷ ವಯಸ್ಸಿನಲ್ಲಿಯೇ ನಾಗರಿಕ ವಿಮಾನಯಾನ ಸಚಿವರಾಗುವ ಮೂಲಕ, ಅತೀ ಕಿರಿಯ ಕೇಂದ್ರ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಆತ್ಮೀಯ ಒಡನಾಡಿ ಅನಂತ್ ಕುಮಾರ್ ಅಗಲಿಕೆಗೆ ಕಣ್ಣೀರಾದ ಅಡ್ವಾಣಿ
Array |
ದಿನೇಶ್ ಗುಂಡೂರಾವ್ ಸಂತಾಪ
BJPಯ ಅಗ್ರಪಂಕ್ತಿಯ ನಾಯಕ ಮತ್ತು 1996 ರಿಂದಲೂ ಸತತವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಶ್ರೀ ಅನಂತ್ ಕುಮಾರ್ ರವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರು ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ. ದುಃಖವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬದವರಿಗೆ ನೀಡಲೆಂದು,ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಒಂದಾನೊಂದು ಕಾಲದಲ್ಲಿ ತಮ್ಮ ತಾಯಿ ವರಲಕ್ಷ್ಮಿ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಅನಂತ್ ಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡು ರಾವ್ ಅವರು ಸಂತಾಪ ಸೂಚಿಸಿದ್ದಾರೆ.