ಬೆಂಗಳೂರಲ್ಲಿ ಕಳುವಾದ ಸ್ಕೂಟಿಯ ಇಂಟರೆಸ್ಟಿಂಗ್ ಕತೆ!
ಬೆಂಗಳೂರು, ಡಿಸೆಂಬರ್, 17: ಇದೊಂದು ಕಳ್ಳತನವಾದ ಸ್ಕೂಟಿಯ ತ್ರಿಕೋನ ಪೊಲೀಸ್ ಕತೆ. ಸ್ಕೂಟಿ ಕದ್ದವರು ಒಬ್ಬರು, ಅದನ್ನು ಅಡವಿಟ್ಟುಕೊಂಡವರು ಇನ್ನೊಬ್ಬರು. ಸ್ಕೂಟಿ ಕಳೆದು ಹೋಗಿದೆ ಎಂದು ದಾಖಲೆ ನೀಡಿ ವಿಮಾ ಸಂಸ್ಥೆಯಿಂದ ಹಣ ಪಡೆದುಕೊಂಡವರು ಮತ್ತೊಬ್ಬರು.
ಒಂದೂವರೆ ವರ್ಷದದ ಹಿಂದೆ ಕಳ್ಳತನವಾಗಿದ್ದ ದ್ವಿಚಕ್ರ ವಾಹನ ಇದೀಗ ಪೊಲೀಸರ ಕೈಗೆ ಸಿಕ್ಕಿದೆ. ಆದರೆ ಸ್ಕೂಟಿ ಕದ್ದ ಚಾಲಾಕಿ ಕಳ್ಳಿ(ಕಳ್ಳ) ಕೈಗೆ ಸಿಕ್ಕಿಲ್ಲ. ಸ್ಕೂಟಿಯ ನಿಜವಾದ ಮಾಲೀಕ ವರುಣ್ ಅಗರ್ವಾಲ್ ವಿಮಾ ಸಂಸ್ಥೆಯಿಂದ ಹಣ ಪಡೆದುಕೊಂಡಿದ್ದಾರೆ. ಕದ್ದ ವಾಹನ ಚಲಾಯಿಸುತ್ತಿದ್ದ ಮೋಹನ್ ಪೊಲೀಸರ ಕೈಗೆ ಸಿಕ್ಕಿದ್ದಾರೆ. ಆದರೆ ವಾಹನವನ್ನು ಕದ್ದು ಮೋಹನ್ ಗೆ ಮಾರಿದ ಜಾಣ ಕಳ್ಳಿಯ ಪತ್ತೆಇಲ್ಲ.[ಕಾಲ ಎಷ್ಟೇ ಬದಲಾದ್ರೂ ನಮ್ಮ ಮನೆ ಭದ್ರತೆ ನಮ್ಮದೇ ಹೊಣೆ]
ಆರ್.ಟಿ. ನಗರದ ನಿವಾಸಿ ವರುಣ್ ಅಗರ್ ವಾಲ್ ಎಂಬುವರು 2014ರ ಮೇ 3ರಂದು ಬಸವನಗುಡಿ ಪಟ್ಟಾಲಮ್ಮ ಸ್ಟ್ರೀಟ್ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ(ಕೆಎ 05, ಎಚ್ ವಿ 1645) ಕಳವಾಗಿತ್ತು. ನಂತರ ಅವರು ಮೇ 6 ರಂದು ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವಾಹನ ಪತ್ತೆಯಾಗಿಲ್ಲ ಎಂದು ಪೊಲೀಸರಿಂದ ಪ್ರಮಾಣಪತ್ರ ಪಡೆದ ವರುಣ್, ವಿಮಾ ಕಂಪನಿಯಿಂದ ಹಣ ಪಡೆದು ಮತ್ತೊಂದು ವಾಹನ ಖರೀದಿಸಿದ್ದರು. ಆದರೆ, 2015 ಸೆ.6ರಂದು ವರುಣ್, ಮನೆಗೆ ಹೆಲ್ಮೆಟ್ರಹಿತ ಚಾಲನೆ ಆರೋಪದಡಿ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ದಿಂದ ನೋಟಿಸ್ ಬಂದಿತ್ತು.
ಒಂದೂವರೆ ವರ್ಷದ ಹಿಂದೆ ಕಳೆದು ಹೋಗಿರುವ ದ್ವಿಚಕ್ರ ವಾಹನಕ್ಕೆ ದಂಡ ವಿಧಿಸಿರುವ ನೋಟಿಸ್ ಕಂಡು ಅಚ್ಚರಿಗೊಂಡ ವರುಣ್, ಟ್ರಾಫಿಕ್ ಇಲಾಖೆಗೆ ಬಂದು ವಿಷಯ ತಿಳಿಸಿದ್ದರು. ಕಾರ್ಯಾಚರಣೆ ಕೈಗೊಂಡ ಟ್ರಾಫಿಕ್ ಯೋಜನಾ ವಿಭಾಗದ ಎಸಿಪಿ ಆರ್.ಐ. ಖಾಸಿಂ, ವಾಹನ ಪತ್ತೆಗೆ ವಿಶೇಷ ತಂಡ ರಚಿಸಿ ಎಲ್ಲ ಸಂಚಾರ ಠಾಣೆಗೆ ಮಾಹಿತಿ ರವಾನೆ ಮಾಡಿದ್ದರು.[ತನ್ನದಲ್ಲದ ಬೈಕಿನಲ್ಲಿ 4 ಲಕ್ಷ ರೂ.ಇಟ್ಟ, ಕೊನೆಗೆ ಪೇಚಾಡಿದ]
ಇದಾದ ಮೇಲೆ ಕಾಫಿ ಬೋರ್ಡ್ ಜಂಕ್ಷನ್ನಲ್ಲಿ ಕಳವಾಗಿದ್ದ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮೋಹನ್ ಎಂಬುವರನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದು ಬಸವನಗುಡಿ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಮೋಹನ್ ನಾನು ವಾಹನ ಕದ್ದಿಲ್ಲ, ಮಹಿಳೆಯೊಬ್ಬರು ಇದನ್ನು ಅಡವಿಟ್ಟು ಅಡವಿಟ್ಟು ಹಣ ಪಡೆದುಕೊಂಡಿದ್ದರು. ನಂತರ ಹಣ ಸಮಯಕ್ಕೆ ಸರಿಯಾಗಿ ನೀಡಲಿಲ್ಲ. ವಾಹನ ನನ್ನ ಬಳಿಯೇ ಉಳಿಯಿತು ಎಂದು ಹೇಳಿದ್ದಾರೆ.[ಕಳುವಾದ ವಾಹನ ಪತ್ತೆಗೆ ಅಪ್ಲಿಕೇಶನ್]
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಮೋಹನ್ ಹೇಳುವಂತೆ ಕಳ್ಳಿ ಎಚ್ಡಿಎಫ್ ಸಿಯ ಮಹಿಳಾ ಉದ್ಯೋಗಿ. ದ್ವಿಚಕ್ರ ವಾಹನ ಅಡವಿಟ್ಟು 8 ಸಾವಿರ ರೂ. ಪಡೆದಿದ್ದಳು. ಆದರೆ ಇದೀಗ ಮೋಹನ್ ಅವರನ್ನು ಪ್ರಕರಣದಲ್ಲಿ ಸಿಕ್ಕಿಹಾಕಿಸಿ ಹಾಯಾಗಿದ್ದಾಳೆ. ಮಾಲೀಕ ವರುಣ್ ಗೆ ವಾಹನ ಬೇಕಿಲ್ಲ. ಸಾಲ ನೀಡಿದ ಮೋಹನ್ ಮತ್ತು ಪೊಲೀಸರಿಗೆ ಮಾತ್ರ ಕಳ್ಳಿ ತಲೆನೋವಾಗಿ ಪರಿಣಮಿಸಿದ್ದಾಳೆ. ಆದರೆ ನಮಗೆ ಕೊಟ್ಟ ಕೊನೆಗೆ ಕಾಡುವ ಪ್ರಶ್ನೆ ಹೀಗೂ ಉಂಟೆ?